ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು 'ಮಾನಸಿಕ ಕ್ರೌರ್ಯ': ಪತಿ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

Published : Apr 13, 2026, 11:42 AM IST
Bombay HC

ಸಾರಾಂಶ

ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಐಪಿಸಿ ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ' ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ. 

ನಾಗ್ಪುರ (ಏ.13): ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ'ಕ್ಕೆ ಸಮಾನವಾಗಿರುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪತಿ ಸಲ್ಲಿಸಿದ್ದ ಎಫ್‌ಐಆರ್ (FIR) ರದ್ದು ಕೋರುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. "ಪತ್ನಿಯು ಅಡುಗೆ ಮನೆಗೆ ಪ್ರವೇಶಿಸದಂತೆ ತಡೆದು, ಆಕೆಯನ್ನು ಹೊರಗಿನಿಂದ ಆಹಾರ ತರುವಂತೆ ಕೇಳುವುದು ಮಾನಸಿಕ ಕ್ರೌರ್ಯ ಎಂದು ಪರಿಗಣಿಸಲು ಸಾಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಾಗ್ಪುರ ಮೂಲದ ಪತಿಯ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಕ್ರೌರ್ಯ ಎಸಗಿರುವ ಅಂಶಗಳು ಕಂಡುಬಂದಿವೆ ಎಂದು ಪೀಠವು ಹೇಳಿದೆ.

ಪ್ರಕರಣದ ಹಿನ್ನೆಲೆ

ಅಕೋಲಾದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದರು. 2022ರ ನವೆಂಬರ್ 29 ವಿವಾಹವಾದ ನಂತರ, ಪತಿ ಪದೇ ಪದೇ ಜಗಳವಾಡುತ್ತಿದ್ದ. ಆಕೆಯ ಓಡಾಟದ ಮೇಲೆ ನಿರ್ಬಂಧ ಹೇರಿದ್ದಲ್ಲದೆ, ತವರು ಮನೆಗೆ ಭೇಟಿ ನೀಡದಂತೆ ತಡೆಯುತ್ತಿದ್ದ. ಅಡುಗೆ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಪತ್ನಿಯನ್ನ ಅಡುಗೆ ಮನೆಗೆ ಸೇರಿಸದೆ ಹೊರಗಿನಿಂದಲೇ ಊಟ ತರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಅವಮಾನಿಸುವ ಉದ್ದೇಶದಿಂದ ಆಕೆಯ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಲಾಗಿತ್ತು ಮತ್ತು ವಿಚ್ಛೇದನ ಪಡೆಯುವಂತೆ ಒತ್ತಡ ಹೇರಲಾಗಿತ್ತು.

ಅತ್ತೆಗೆ ರಿಲೀಫ್, ಪತಿಗೆ ಸಂಕಷ್ಟ

ಪತಿ ತನ್ನ ವಿರುದ್ಧದ 2024ರ ಎಫ್‌ಐಆರ್ ಅನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ. ತಾನು ನೀಡಿದ್ದ ವಿಚ್ಛೇದನ ಅರ್ಜಿಗೆ ಪತ್ನಿ ಪ್ರತಿಕ್ರಿಯೆಯಾಗಿ ಈ ಸುಳ್ಳು ದೂರು ನೀಡಿದ್ದಾಳೆ ಎಂದು ವಾದಿಸಿದ್ದ. ಆದರೆ ಪ್ರಾಸಿಕ್ಯೂಷನ್ ಈ ವಾದವನ್ನು ವಿರೋಧಿಸಿ, ಇದು ಸ್ಪಷ್ಟವಾದ ಮಾನಸಿಕ ಹಿಂಸೆಯ ಪ್ರಕರಣ ಎಂದು ವಾದಿಸಿತು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ

ಪತಿಯ ವಿರುದ್ಧದ ಆರೋಪಗಳು ನಿರ್ದಿಷ್ಟವಾಗಿದ್ದು, ಆತ ಉದ್ದೇಶಪೂರ್ವಕವಾಗಿ ಮಾನಸಿಕ ಹಾನಿ ಉಂಟುಮಾಡಿದ್ದಾನೆ ಎಂದು ತನಿಖೆ ಮುಂದುವರಿಸಲು ಅನುಮತಿ ನೀಡಿತು. ಆದರೆ, ಅತ್ತೆಯ ವಿರುದ್ಧದ ಆರೋಪಗಳು ಕೇವಲ "ಅಸ್ಪಷ್ಟ ಮತ್ತು ಸಾಮಾನ್ಯ"ವಾಗಿವೆ. ಆಕೆ ಕೇವಲ ಅತ್ತೆ ಎಂಬ ಕಾರಣಕ್ಕೆ ಸುಳ್ಳು ಆರೋಪ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಪೀಠ, ಅತ್ತೆಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿತು.

ಸೆಕ್ಷನ್ 498A ಅಡಿಯಲ್ಲಿ 'ಕ್ರೌರ್ಯ' ಎಂದರೆ ಕೇವಲ ದೈಹಿಕ ಹಿಂಸೆಯಲ್ಲ. "ಮಹಿಳೆಯನ್ನು ಆ*ತ್ಮಹ*ತ್ಯೆಗೆ ಪ್ರೇರೇಪಿಸುವಂತಹ ಅಥವಾ ಆಕೆಯ ಜೀವಕ್ಕೆ, ಆರೋಗ್ಯಕ್ಕೆ ಅಥವಾ ಅಂಗಾಂಗಗಳಿಗೆ ಅಪಾಯವನ್ನುಂಟು ಮಾಡುವಂತಹ ಯಾವುದೇ ಉದ್ದೇಶಪೂರ್ವಕ ನಡವಳಿಕೆಯು ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ" ಎಂದು ನ್ಯಾಯಾಲಯವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದು ವಧು, ಎರಡು ವರ ! ಕೊನೆಗೂ ಕಂಕಣ ಕೂಡಿ ಬಂದಿದ್ದು ಯಾರಿಗೆ ?
ಜಾರ್ಖಂಡ್ ಹೈಕೋರ್ಟ್ ಚಾಟಿ: ಇಡೀ ಪೊಲೀಸ್ ಠಾಣೆಯ 28 ಸಿಬ್ಬಂದಿ ಸಸ್ಪೆಂಡ್‌