
ನವದೆಹಲಿ (ಅ.28): ಇಸ್ರೇಲ್ ಇಂದು ಗಾಜಾಪಟ್ಟಿಯನ್ನು ಧ್ವಂಸ ಮಾಡಿದ್ದಕ್ಕೆ ಮೂಲ ಕಾರಣ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ಮಾರಣಾಂತಿಕ ದಾಳಿ. ಇದೇ ಹಮಾಸ್ ಭಯೋತ್ಪಾದಕ ಗುಂಪಿನ ನಾಯಕ ಶುಕ್ರವಾರ ಕೇರಳದ ಮಲಪ್ಪುರಂನಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಆಯೋಜಿಸಿದ್ದ ಸಮಾವೇಶದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಜಮಾತೆ ಇಸ್ಲಾಮಿಯ ಯುವ ಘಟಕವಾಗಿದೆ. ವೀಡಿಯೊದಲ್ಲಿ, ಹಮಾಸ್ ನಾಯಕ ಖಲೀದ್ ಮಶಾಲ್ ಜನರನ್ನು ಉದ್ದೇಶಿಸಿ ಮಾತನಾಡಿದ್ದಾನೆ. ಈ ನಡುವೆ ಸಮಾವೇಶದಲ್ಲಿ ಮಶಾಲ್ ಅವರ ವರ್ಚುವಲ್ ಭಾಷಣವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಖಂಡಿಸಿದ್ದು, ಇದಕ್ಕೆ ಅನುಮತಿ ನೀಡಿದ ಕೇರಳ ಪೊಲೀಸರನ್ನೂ ಪ್ರಶ್ನೆ ಮಾಡಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸಿದ್ದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ಬರೆದಿರುವ ಸುರೇಂದ್ರನ್, "ಮಲಪ್ಪುರಂನಲ್ಲಿ ನಡೆದ ಸಾಲಿಡಾರಿಟಿ ಸಮಾರಂಭದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ ಅವರ ವರ್ಚುವಲ್ ಭಾಷಣ ಗಾಬರಿ ಹುಟ್ಟಿಸಿದೆ. ಪಿಣರಾಯಿ ವಿಜಯನ್ ಅವರ ಕೇರಳ ಪೊಲೀಸರು ಎಲ್ಲಿದ್ದಾರೆ? 'ಸೇವ್ ಪ್ಯಾಲೆಸ್ತೀನ್' ಎಂಬ ಸೋಗಿನಲ್ಲಿ ಅವರು ಹಮಾಸ್ ಅನ್ನು ವೈಭವೀಕರಿಸುತ್ತಿದ್ದಾರೆ ಮತ್ತು ಭಯೋತ್ಪಾದಕ ಸಂಘಟನೆಯನ್ನು ವೈಭವೀಕರಿಸುತ್ತಿದ್ದಾರೆ. ಹಮಾಸ್ನ ಭಯೋತ್ಪಾದಕರನ್ನು ಯೋಧರು ಎಂದು ಹೇಳಿರುವುದು ಸ್ವೀಕಾರಾರ್ಹವಲ್ಲ!' ಎಂದು ಬರೆದಿದ್ದಾರೆ.
ಶುಕ್ರವಾರ, ಕೇರಳದ ಬಿಜೆಪಿ ಘಟಕವು ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಸಮಾವೇಶದಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯ ಮತ್ತು ಲೋಕಸಭೆಯ ಸಂಸದ ಶಶಿ ತರೂರ್ ಅವರನ್ನು ಟೀಕೆ ಮಾಡಿದರು. ಇದು "ಹಮಾಸ್ ಪರ" ಕಾರ್ಯಕ್ರಮ ಎಂದು ಬಿಜೆಪಿ ಟೀಕಿಸಿದೆ. 10 ಸಾವಿರಕ್ಕೂ ಅಧಿಕ ಐಯುಎಂಎಲ್ ಬೆಂಬಲಿಗರು ಕೋಝಿಕ್ಕೋಡ್ನ ಬೀದಿಗಿಳಿದು, ಯುದ್ಧದಲ್ಲಿ ಧ್ವಂಸಗೊಂಡ ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ ಒಂದು ದಿನದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಸಂಘರ್ಷವನ್ನು ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
'ಹಮಾಸ್ ಭಯೋತ್ಪಾದಕರ ಬಗ್ಗೆ ಒಂದೂ ಶಬ್ದವಿಲ್ಲ..' ವಿಶ್ವಸಂಸ್ಥೆ ನಿರ್ಣಯಕ್ಕೆ ಮತ ಹಾಕದ ಭಾರತದ ನೇರ ಉತ್ತರ!
ಕೋಝಿಕ್ಕೋಡ್ನಲ್ಲಿ ನಡೆದ ಐಯುಎಂಎಲ್ ಸಮಾವೇಶವು ಹಮಾಸ್ ಪರವಾಗಿತ್ತು ಮತ್ತು ಕಾರ್ಯಕ್ರಮದ ಉದ್ದಕ್ಕೂ ದೇಶವಿರೋಧಿ ಘೋಷಣೆಗಳು ಎದ್ದವು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಯುಎನ್ ರಾಜತಾಂತ್ರಿಕರಾಗಿ ಈ ಹಿಂದೆ ಕೆಲಸ ಮಾಡಿದ್ದ ತರೂರ್ ಈ ಸಮಾವೇಶದಲ್ಲಿ ಭಾಗವಹಿಸಿದ್ದು, ಈ ವಿಷಯದಲ್ಲಿ ದೇಶದ ಸ್ಥಾಪಿತ ನಿಲುವಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ನಿರ್ಣಯ, ಭಾರತ ಸೇರಿದಂತೆ 45 ದೇಶಗಳ ನೋ ವೋಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ