
ವಾರಣಾಸಿ(ಜ.31) ಆಯೋಧ್ಯೆ ರಾಮ ಮಂದಿರದ ಬಳಿಕ ಇದೀಗ ಕಾಶೀ ವಿಶ್ವನಾಥ ಮಂದಿರದ ಪರ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ವಾರಣಾಸಿ ಕೋರ್ಟ್ ಇದೀಗ ತೀರ್ಪು ನೀಡಿದೆ. ಹಿಂದೂಗಳಿಗೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ. 7 ದಿನದೊಳಗೆ ಹಿಂದೂಗಳಿಗೆ ಪೂಜೆ ಸಲ್ಲಿಸಲು ಸ್ಥಳೀಯ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಸೂಚಿಸಿದೆ.
ವಿವಾದಿತ ಮಸೀದಿಯ ನೆಲಮಹಡಿಯಲ್ಲಿರುವ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ವಾರಣಾಸಿ ಜಿಲ್ಲಾ ಕೋರ್ಟ್ ಈ ಮಹತ್ವದ ಆದೇಶ ನೀಡುತ್ತಿದ್ದಂತೆ ಹಿಂದೂಗಳ ಸಂಭ್ರಮ ಮುಗಿಲು ಮುಟ್ಟಿದೆ. ಕಾಶಿ ವಶ್ವನಾಥ್ ಟ್ರಸ್ಟ್ ಪೂಜೆಗೆ ಉಸ್ತುವಾರಿ ನೋಡಿಕೊಳ್ಳಲು ಸೂಚನೆ ನೀಡಿದೆ. ವಿವಾದಿತ ಸ್ಥಳದಲ್ಲಿರುವ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಕೇವಲ ಅರ್ಚಕರು ಮಾತ್ರ ತೆರಳಬೇಕು. ಸಾರ್ವಜನಿಕರ ದರ್ಶನ ಹಾಗೂ ಪೂಜೆಗೆ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.
ಹಿಂದೂ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಜ್ಞಾನವಾಪಿ ಶಿವಲಿಂಗ ಸ್ಥಳದ ಶುಚಿತ್ವ ಕಾಪಡಲು ಸೂಚನೆ!
1993ರ ಬಳಿಕ ಗ್ಯಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆಗೆ ಅವಕಾಶ ನಿರಾಕರಿಸಲಾಗಿತ್ತು. ಈ ಮೂಲಕ ಗ್ಯಾನವಾಪಿಯಲ್ಲಿ ಕೇವಲ ಮುಸ್ಲಿಮರ ಪ್ರಾರ್ಥನೆ ಮಾತ್ರ ನಡೆಯುತ್ತಿತ್ತು. ಇದೀಗ ವಾರಣಾಸಿ ಕೋರ್ಟ್ ಆದೇಶ ಹಿಂದೂಗಳ ಸಂಭ್ರಮ ಇಮ್ಮಡಿಗೊಳಿಸಿದೆ. ಭಾರತೀಯ ಪುರಾತತ್ವ ಇಲಾಖೆ ಕೋರ್ಟ್ಗೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ವಕೀಲರಾದ ಹರಿಶಂಕರ್ ಜೈನ್ ಹಾಗೂ ಶಶಿಶಂಕರ್ ಜೈನ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಹಿಂದೂ ಮಂದಿರ ಅನ್ನೋದು ಪುರಾತತ್ವ ಇಲಾಖೆಯಲ್ಲಿ ಸಾಬೀತಾಗಿರುವ ಕಾರಣ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಲಾಗಿತ್ತು. ಇದೀಗ ಈ ಅರ್ಜಿಯನ್ನು ಪುರಸ್ಕರಿಸಿ ಪೂಜೆಗೆ ಅವಕಾಶ ನೀಡಲಾಗಿದೆ.
1993ರ ವರೆಗೆ ಗ್ಯಾನವಾಪಿ ಮಸೀದಿಯೊಳಗಿರುವ ಹಿಂದೂ ಮೂರ್ತಿಗಳಿಗೆ ಪೂಜೆ ನಡೆಯುತ್ತಿತ್ತು. ಆದರೆ 1993ರಿಂದ ಹಿಂದೂಗಳ ಪೂಜೆಗೆ ನಿರ್ಬಂಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಐವರು ಮಹಿಳೆಯರು ವಾರಣಾಸಿ ಕೋರ್ಟ್ ಮೆಟ್ಟಿಲೇರಿದ್ದರು. ಗ್ಯಾನವಾಪಿ ಮಸೀದಿ ಪ್ರಕರಣಕ್ಕೆ ಮರು ಜೀವನ ನೀಡಿದ್ದೇ ಈ ಅರ್ಜಿಯಾಗಿದೆ. ಐವರು ಮಹಿಳೆಯರು ಸಲ್ಲಿಸಿದ ಅರ್ಜಿ ಬಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಹಂತ ಹಂತವಾಗಿ ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಗೆಲುವಾಗಿದೆ. ಈ ಹಿಂದೆ ಹಿಂದೂಗಳು ಕೋರಿದ್ದ ಪುರಾತತ್ವ ಇಲಾಖೆ ಸಮೀಕ್ಷೆಗೆ ಕೋರ್ಟ್ ಅನುಮತಿ ನೀಡಿತ್ತು. ಸರ್ವೆ ವರದಿ ಬಹಿರಂಗಪಡಿಸುವಂತೆ ಮನವಿ ಮಾಡಲಾಗಿತ್ತು. ಈ ವರದಿ ಬಹಿರಂಗವಾದ ಬೆನ್ನಲ್ಲೇ ಮಸೀದಿಯನ್ನು ಸ್ಥಳಾಂತರಿಸಿ ದೇಗುಲವನ್ನು ಹಿಂದೂಗಳಿಗೆ ನೀಡಲು ಆಗ್ರಹ ಹೆಚ್ಚಾಗುತ್ತಿದೆ.
Gyanvapi Case: ಪೂಜೆ, ಸಮೀಕ್ಷೆ ವಿರುದ್ಧ ಮುಸ್ಲಿಮರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ