
ಬೆಂಗಳೂರು (ಜೂ.21): ವರ್ಷದಲ್ಲಿಯೇ ಅತ್ಯಂತ ದೀರ್ಘವಾದ ಹಗಲಿನ ದಿನವಾದ ಇಂದು ಭಾರತದ ಎಲ್ಲಾ ಜಾಗಗಳಲೂ ಜರುಗಿದ ಯೋಗಾಭ್ಯಾಸವು ಅತ್ಯಂತ ಉತ್ಸಾಹದಿಂದ ಕೂಡಿತ್ತು. ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗಾಸನಗಳು ನಡೆದವು.
ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಸಾವಿರಾರು ವಿದ್ಯಾರ್ಥಿಗಳು ವಿಶಾಲಾಕ್ಷಿ ಮಂಟಪದ ಎದುರಿನ ಬಯಲು ಹುಲ್ಲುಹಾಸಿನ ಮೇಲೆ, ಯೋಗಾಸನಗಳನ್ನು ಮಾಡುತಿದ್ದ ದೃಶ್ಯವು, ಯೋಗದ ಭವ್ಯ ಪರಂಪರೆಗೆ ಸಾಕ್ಷಿಯಾಗಿತ್ತು. ತವಾಂಗ್ ಯುದ್ಧ ಸ್ಮಾರಕ, ಸುಖ್ನಾ ಮಿಲಿಟರಿ ಸ್ಟೇಷನ್ ಹಾಗೂ ಇಂಡೋ-ಭೂತಾನ್ ಗಡಿಭಾಗದಲ್ಲಿ ಯೋಧರು ಯೋಗಾಭ್ಯಾಸ ನಡೆಸಿದ ದೃಶ್ಯಗಳು ಸ್ಪೂರ್ತಿದಾಯಕವಾಗಿದ್ದವು. ಸಾಮಲೆಶ್ವರಿ ದೇವಾಲಯದ ಆವರಣದಲ್ಲಿ 5000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ವಿಶಾಖಪಟ್ಟಣದ ಥೋತ್ಲಕೊಂಡ ಬೌದ್ಧ ಪರಂಪರಾ ಕ್ಷೇತ್ರದಲ್ಲಿ ಮ್ಯಾನ್ಮಾರ್ ಹಾಗೂ ಕಂಬೋಡಿಯಾದ ಬೌದ್ಧ ಭಿಕ್ಷುಗಳು ಸಹ ಪಾಲ್ಗೊಂಡು ಯೋಗದ ಈ ಜಾಗತಿಕ ಉತ್ಸವಕ್ಕೆ ಸಾಕ್ಷಿಯಾದರು.
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ , ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಟ್ರಸ್ಟ್ನ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆನ್ಲೈನ್ನಲ್ಲಿ ಭಾಗವಹಿಸುವುದರೊಂದಿಗೆ “ಕಾಮನ್ ಯೋಗ ಪ್ರೋಟೋಕಾಲ್” ಅನ್ನು ಅನುಸರಿಸಿದರು. ಇದಾದ ನಂತರ ಸಾಮೂಹಿಕ ಧ್ಯಾನ ನಡೆಸಲಾಯಿತು. "ಆಶ್ರಮದ ಪ್ರಶಾಂತವಾದ ಪರಿಸರದಲ್ಲಿನ ಈ ಯೋಗಾಭ್ಯಾಸವು, ಆಳವಾದ ವಿಶ್ರಾಮ ಮತ್ತು ನೆಮ್ಮದಿಯನ್ನು ನೀಡಿತು" ಎಂದು ಎಸ್.ಎಸ್.ಆರ್.ವಿ.ಎಮ್. ಟ್ರಸ್ಟ್ನ ಆಡಳಿತಾಧಿಕಾರಿ ಅನಂದ್ ಜಿ.ಎನ್. ರವರು ಹೇಳಿದರು.
ಅಸನಗಳು ಯೋಗದ ಪ್ರಮುಖ ಭಾಗವಾಗಿದಾರೂ, ಯೋಗದ ಮೂಲ ಉದ್ದೇಶ ದೈಹಿಕ ಭಂಗಿ ಮತ್ತು ಆಸನಗಳನ್ನು ಮೀರಿದ್ದಾಗಿದೆ. ಗುರುದೇವ ಶ್ರೀ ಶ್ರೀ ರವಿಶಂಕರರ ಪ್ರಕಾರ, “ ಹೂವಿನ ಮೊಗ್ಗೊಂದು ಅರಳುವ ಎಲ್ಲಾ ಸಾಮರ್ಥ್ಯವನ್ನು ಹೊಂದಿರುಂತೆ, ಮಾನವ ಜೀವನವು ಸಂಪೂರ್ಣವಾಗಿ ವಿಕಸಿಸುವ ಅವಕಾಶವಿದೆ. ಆ ವಿಕಾಸವೇ ಯೋಗ. ಯೋಗವೆಂದರೆ ನೈಪುಣ್ಯತೆ; ನಮ್ಮ ಅಸ್ತಿತ್ವದ ವಿವಿಧ ಹಂತಗಳನ್ನು ಸಾಮರಸ್ಯದಿಂದ ಒಗ್ಗೂಡಿಸಿ, ನಿಜವಾದ ಸ್ವಭಾವದ ಕಡೆಗೆ ಕರೆದೊಯ್ಯುವುದಾಗಿದೆ.”
ಇಂದು ಸಂಜೆ , ಕೊಲಂಬಿಯಾದ ಬೊಗೋಟಾದ ಪ್ಲಾಜಾ ಲಾ ಸಂತಮಾರಿಯಾದಿಂದ, ಗುರುದೇವ ಶ್ರೀ ಶ್ರೀ ರವಿಶಂಕರ ಅವರು ಜಗತ್ತಿನ ಕೋಟ್ಯಾಂತರ ಯೋಗಾಭ್ಯಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರೊಂದಿಗೆ ಬೊಗೋಟಾದ ಮೇಯರ್ ಕಾರ್ಲೊಸ್ ಫರ್ನಾಂಡೋ ಗ್ಯಾಲಾನ್ ಸಹ ಭಾಗವಹಿಸಲಿದ್ದಾರೆ.
ಗುರುದೇವರು ಪ್ರಸ್ತುತ, ಕೊಲಂಬಿಯಾ ದೇಶದ ಮೂರು ನಗರಗಳ ಐತಿಹಾಸಿಕ ಪ್ರವಾಸದಲ್ಲಿದ್ದಾರೆ. ಈ ವಾರದ ಆರಂಭದಲ್ಲಿ ಅವರು ಕೊಲಂಬಿಯಾದ ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ದಶಕದ ಹಿಂದೆ ಇದೇ ನಗರದಲ್ಲಿ ಅವರು ನೀಡಿದ ಮಾನವೀಯ ಶಾಂತಿಯ ಕರೆಯು ಸ್ಮರಣೀಯವಾಗಿದೆ. ಅವರ ಮಧ್ಯಸ್ಥಿಕೆಯಿಂದ, ಫಾರ್ಕ್ ಮತ್ತು ಆ ಕಾಲದ ಕೊಲಂಬಿಯಾ ಸರ್ಕಾರದ ನಡುವೆ ಐತಿಹಾಸಿಕ ಶಾಂತಿ ಒಪ್ಪಂದವೊಂದು ಸಂಭವಿಸಿತ್ತು. ಈ ಒಪ್ಪಂದವು ಐವತ್ತು ವರ್ಷಗಳ ಸಾಂಘರ್ಷಿಕ ಇತಿಹಾಸಕ್ಕೆ ಕೊನೆಗಾಲನ್ನು ಎಳೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ