ಕೊಲ್ಲಿ ಯುದ್ಧ ಜಾಗತಿಕ ಬಿಕ್ಕಟ್ಟು. ಇದನ್ನು ನಾವು ತಾಳ್ಮೆ, ಒಗ್ಗಟ್ಟಿನಿಂದ ಎದುರಿಸಬೇಕು, ರಾಜಕೀಯಕ್ಕಾಗಿ ಟೀಕೆ ಬೇಡ: ವಿಪಕ್ಷಕ್ಕೆ ಮೋದಿ ಮನವಿ

Kannadaprabha News   | Kannada Prabha
Published : Mar 29, 2026, 07:09 AM IST
Gulf War Crisis: PM Modi Appeals for National Unity; Slams Opposition for Politicizing Conflict

ಸಾರಾಂಶ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗುವ ಸವಾಲುಗಳನ್ನು ಭಾರತ ಎದುರಿಸುತ್ತಿದೆ. ಇಂಥ ಸಮಯದಲ್ಲಿ ದೇಶದ ಜನರು ತಾಳ್ಮೆ ವಹಿಸಬೇಕು, ರಾಜಕೀಯ ಪಕ್ಷಗಳು ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಪಿಟಿಐ ನೋಯ್ಡಾ (ಮಾ.29): ‘ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸುವ ಸವಾಲುಗಳನ್ನು ಭಾರತ ಪೂರ್ಣ ಬಲದಿಂದ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ದೇಶದ ಜನರು ತಾಳ್ಮೆ ವಹಿಸಬೇಕು. ರಾಜಕೀಯ ಪಕ್ಷಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಜೇವಾರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ‘ಪಶ್ಚಿಮ ಏಷ್ಯಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಂಘರ್ಷ ಮುಂದುವರೆದಿದೆ. ಭಾರತ ಈ ಸವಾಲನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತಿದೆ. ದೇಶವು ತನ್ನ ನಾಗರಿಕರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಪ್ರತಿಪಾದಿಸಿದರು.

‘ಭಾರತವು ಸಂಘರ್ಷ ಪೀಡಿತ ಪ್ರದೇಶಗಳಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಅವಲಂಬಿಸಿದೆ ಎಂದು ಒತ್ತಿ ಹೇಳಿದ ಮೋದಿ, ‘ಸಾಮಾನ್ಯ ನಾಗರಿಕರು ಮತ್ತು ರೈತರ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಹೇಳಿದರು.

ಅಲ್ಲದೆ, ‘ವಿಕಸಿತ ಭಾರತ’ ನಿರ್ಮಿಸಲು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು 140 ಕೋಟಿ ನಾಗರಿಕರಲ್ಲಿ ಸಾಮೂಹಿಕ ಪ್ರಯತ್ನ ಮತ್ತು ಏಕತೆಯ ಅಗತ್ಯವಿರುತ್ತದೆ ಎಂದು ಹೇಳಿದರು.

ತಾಳ್ಮೆ ಇರಲಿ, ಬೇಜವಾಬ್ದಾರಿ ಹೇಳಿಕೆ ಬೇಡ:

‘ಯುದ್ಧದ ಬಿಕ್ಕಟ್ಟನ್ನು ನಾವು ಶಾಂತವಾಗಿ, ತಾಳ್ಮೆ ಮತ್ತು ಒಗ್ಗಟ್ಟಿನಿಂದ ಎದುರಿಸಬೇಕು. ಇದು ಜಾಗತಿಕ ಬಿಕ್ಕಟ್ಟು, ಆದರೆ ನಾವು ಭಾರತದ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು. ಅದು ನಮ್ಮ ದೊಡ್ಡ ಶಕ್ತಿ’ ಎಂದು ಅವರು ಹೇಳಿದರು.‘ಸಂಸತ್ತಿನಲ್ಲಿ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವ್ಯಾಪಕ ಮತ್ತು ತುಂಬಾ ಸಕಾರಾತ್ಮಕ ಚರ್ಚೆ ನಡೆಸಿದ್ದೇನೆ’ ಎಂದರು.

‘ಇಂತಹ ಸಮಯದಲ್ಲಿ ರಾಜಕೀಯ ಪಕ್ಷಗಳು ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು. ದೇಶಕ್ಕೆ ಹಾನಿ ಮಾಡುವ ಹೇಳಿಕೆಗಳನ್ನು ನೀಡುವವರು ರಾಜಕೀಯ ಚರ್ಚೆಗಳಲ್ಲಿ ಕೆಲವು ‘ಅಂಕ’ಗಳನ್ನು ಗಳಿಸಬಹುದು, ಆದರೆ ಅಂತಹ ಕ್ರಮಗಳನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಮತದಾರರು ತಪ್ಪು ಮಾಹಿತಿ ಅಭಿಯಾನಗಳನ್ನು ತಿರಸ್ಕರಿಸಿದ್ದರು’ ಎಂದು ನೆನಪಿಸಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ವಿಮಾನ ನಿಲ್ದಾಣದಲ್ಲಿ 2KG ಚಿನ್ನ ಧರಿಸಿದ್ದ ಬಂಗಾರು ಬಾಬು ಆಭರಣ ಜಪ್ತಿ!
ಭಾರತ ವಿರೋಧಿ ಉಗ್ರರಿಗೆ ಪಾಕ್‌ ಆಶ್ರಯ; ಇಸ್ಲಾಮಿಕ್ ಸ್ಟೇಟ್‌ನ 6,000 ಉಗ್ರರು ಸಕ್ರಿಯ: ಅಮೆರಿಕ ವರದಿ