
ಅಹ್ಮದಾಬಾದ್: ಸರ್ಕಾರಿ ನೌಕರಿಯೇ ಆಗಲಿ ಖಾಸಗಿ ನೌಕರಿಯೇ ಆಗಲಿ ರಜೆಯ ವಿಚಾರಕ್ಕೆ ಮೇಲಾಧಿಕಾರಿಗಳು ಕಿರಿಕಿರಿ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಉದ್ಯೋಗಿಗಳು ಇಲ್ಲದ ನೆಪ ಹೇಳಿ ರಜೆ ಪಡೆದು ಹಾಯಾಗಿರಲು ಹವಣಿಸುತ್ತಾರೆ. ಬಾರದ ಜ್ವರ, ಹೊಟ್ಟೆನೋವು ಹೀಗೆ ಕಾಯಿಲೆಯ ನೆಪ ಹೇಳಿ ರಜೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಗುಜರಾತ್ನಲ್ಲಿ ಹೀಗೆ ಸುಳ್ಳು ನೆಪ ಹೇಳಿ ರಜೆ ಪಡೆದುಕೊಂಡವಉದ್ಯೋಗಿಯ ಕಿತಾಪತಿ ಮೇಲಾಧಿಕಾರಿಗೆ ತಿಳಿದು ಕೆಲಸವೇ ಹೋಗಿದೆ. ಹಾಗಾದರೆ ಈ ಉದ್ಯೋಗಿ ಹೇಳಿದ್ದ ಸುಳ್ಳಾದರು ಎಂತಹದ್ದು, ನಿಮಗೆ ಗೊತ್ತಾಗುತ್ತೆ ಈ ಸ್ಟೋರಿ ಓದಿ..
ರಜೆಗಾಗಿ ಅಜ್ಜಿಗೆ ಹುಷಾರಿಲ್ಲ, ಅಜ್ಜ ತೀರಿಕೊಂಡರು ಅತ್ತೆಗೆ ಅಸೌಖ್ಯ ಹೀಗೆಲ್ಲಾ ಹೇಳಿ ರಜೆ ತೆಗೆದುಕೊಳ್ಳುವುದು ಸಾಮಾನ್ಯ. ಒಂದು ವೇಳೆ ಅಸೌಖ್ಯವಾಗಿದ್ದಲ್ಲಿ ಪಡೆದ ರಜೆಗೆ ವೈದ್ಯಕೀಯ ಪ್ರಮಾಣಪತ್ರವನ್ನು ಕಚೇರಿಗೆ ನೀಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬರು ಟ್ರೈನಿ ಪೊಲೀಸ್ ಅಧಿಕಾರಿ ರಜೆಗಾಗಿ ವಿವಾಹ ನಿಶ್ಚಿತಾರ್ಥದ ಕತೆ ಕಟ್ಟಿದ್ದಾರೆ. ಬರೀ ಇಷ್ಟೇ ಅಲ್ಲ ಇದಕ್ಕಾಗಿ ನಿಶ್ಚಿತಾರ್ಥದ ಕಾರ್ಡ್ನ್ನು ಕೂಡ ನಿರ್ಮಿಸಿ ತಾನು ಉದ್ಯೋಗ ಮಾಡುತ್ತಿದ್ದ ಇಲಾಖೆಗೆ ನೀಡಿದ್ದಾರೆ. ಇದು ಮೇಲಾಧಿಕಾರಿಗೆ ತಿಳಿದು ಈಗ ತರಬೇತಿಯಲ್ಲಿದ್ದ ಅಧಿಕಾರಿಯ ಕೆಲಸವೇ ಹೋಗಿದೆ.
ಸಿಕ್ ಲೀವ್ ಹಾಕ್ಕೊಂಡು ಟ್ರಿಪ್ ಹೊರಟವಳಿಗ ವಿಮಾನ ಏರ್ತಿದ್ದಂತೆ ಕಾದಿತ್ತು ಶಾಕ್!
ಟ್ರೈನಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಮುನ್ನಾ ಅಲ್ ಎಂಬಾತನೇ ಹೀಗೆ ವಿವಾಹ ನಿಶ್ಚಿತಾರ್ಥದ ನಕಲಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ಕೆಲಸ ಕಳೆದುಕೊಂಡವ. ಗುಜರಾತ್ನ ಬನಸ್ಕಾಂತ ಜಿಲ್ಲೆಯ ಪಲನ್ಪುರದ ಸಂಗ್ರಾ ಗ್ರಾಮದ ಈತನ ವಿರುದ್ಧ ಈಗ ಫೋರ್ಜರಿ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಂದಹಾಗೆ ಈತ ಈ ರೀತಿ ನಕಲಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿದ್ದು, ಕೇವಲ 2 ದಿನಗಲ ರಜೆಗಾಗಿ ಎಂಬುದು ಕೂಡ ವಿಚಿತ್ರ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸರು ಮಾಹಿತಿ ನೀಡಿದ್ದು, ಅಮಾನತ್ತಾದ ಮುನ್ನಾ ಅಲ್ 2023ರ ಬ್ಯಾಚ್ನ ಪಿಎಸ್ಐ ಆಗಿದ್ದು, ಈತ ಕಳೆದ ವರ್ಷದ ನವಂಬರ್ ಕೊನೆ ವಾರದಲ್ಲಿ ಎರಡು ದಿನಗಳ ರಜೆ ಬೇಕು ಎಂದು ಮನವಿ ಮಾಡಿದ್ದ, ಡಿಸೆಂಬರ್ 1 ರಂದು ತನಗೆ ತನ್ನ ಊರಿನಲ್ಲಿ ವಿವಾಹ ನಿಶ್ಚಿತಾರ್ಥವಿದ್ದು, 2ನೇ ದಿನ ಸಮುದಾಯದ ಸಮಾರಂಭವಿದೆ ಎಂದು ಆತ ಹೇಳಿದ್ದ. ತನ್ನ ಮನವಿಯ ಜೊತೆ ಆತ ವಿವಾಹ ನಿಶ್ಚಿತಾರ್ಥದ ಆಹ್ವಾನ ಪತ್ರಿಕೆಯನ್ನು ನೀಡಿದ್ದ. ಇಲ್ಲೇ ಆಗಿದ್ದು ಎಡವಟ್ಟು ನೋಡಿ.
ಕಚೇರಿಗೆ ಬನ್ನಿ ಇಲ್ಲ ಪರಿಣಾಮ ಎದುರಿಸಿ: ಟಿಸಿಎಸ್ ಉದ್ಯೋಗಿಗಳಿಗೆ ಸಂಸ್ಥೆಯ ಲಾಸ್ಟ್ ವಾರ್ನಿಂಗ್
ಕೇವಲ ರಜೆ ಕೇಳಿ ಸುಮ್ಮನಿದ್ದರೆ ಈಗೆ ಕೆಲಸ ಕಳೆದುಕೊಳ್ಳುವ ಸಂದರ್ಭ ಬರುತ್ತಿರಲಿಲ್ಲವೇನೋ? ಆದರೆ ಇರಲಾರದನ್ನು ಮಾಡಲು ಹೋಗಿ ಈಗ ಕೆಲಸ ಕಳೆದುಕೊಂಡಿದ್ದಾನೆ. ಮನವಿಯ ಜೊತೆ ಇದ್ದ ಆಹ್ವಾನ ಪತ್ರಿಕೆಯನ್ನು ನೋಡಿದ ಮೇಲಾಧಿಕಾರಿಗಳಿಗೆ ಅದರಲ್ಲಿದ್ದ ಆತನ ಸಂಗಾತಿಯ ಹೆಸರು ಹಾಗೂ ಆಕೆಯ ಪೋಷಕರು ಹಾಗೂ ಕುಟುಂಬದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ್ದು ನೋಡಿ ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆದು ತನಿಖೆಗೆ ಆದೇಶಿಸಲಾಗಿತ್ತು.
ಅಲ್ಲದೇ ಈ ಆಹ್ವಾನ ಪತ್ರಿಕೆ ಮಾಡಿಕೊಟ್ಟವರನ್ನು ಇಬ್ಬರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದರಲೊಬ್ಬ ಮುನ್ನಾ ಅಲ್ ತರಬೇತಿ ಪಡೆಯುತ್ತಿದ್ದ ಕರೈ ಅಕಾಡೆಮಿಗೆ ಈ ಆಹ್ವಾನ ಪತ್ರಿಕೆಯನ್ನು ತಲುಪಿಸಿದ್ದ, ವಿಚಾರಣೆ ವೇಳೆ ಆರೋಪಿ ಮುನ್ನಾ ಅಲ್ ತಾನು ರಜೆಗಾಗಿ ನಕಲಿ ಆಹ್ವಾನ ಪತ್ರಿಕೆಯನ್ನು ಸಲ್ಲಿಕೆ ಮಾಡಿದ್ದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಫೆ. 3 ರಂದು ಆತನನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 471 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ