ನಿಮ್ಮ ಚಿನ್ನದ ಮೇಲೆ ಕೇಂದ್ರ ಸರ್ಕಾರ ಕಣ್ಣು..!

By Kannadaprabha NewsFirst Published Aug 1, 2020, 7:24 AM IST
Highlights

5 ವರ್ಷದ ಹಿಂದೆ ಮನೆ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ಬಳಕೆಯಾಗದೇ ಉಳಿದ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಜನರ ಚಿನ್ನದ ಮೇಲೆ ಕಣ್ಣು ಇಟ್ಟಿದೆ. ಆದರೆ ಈ ಬಾರಿ ಸರ್ಕಾರದ ಗಮನ ಹರಿದಿರುವುದು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಚಿನ್ನದ ದಾಸ್ತಾನಿನ ಮೇಲೆ.

ನವದೆಹಲಿ(ಆ.01): 5 ವರ್ಷದ ಹಿಂದೆ ಮನೆ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ಬಳಕೆಯಾಗದೇ ಉಳಿದ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಜನರ ಚಿನ್ನದ ಮೇಲೆ ಕಣ್ಣು ಇಟ್ಟಿದೆ. ಆದರೆ ಈ ಬಾರಿ ಸರ್ಕಾರದ ಗಮನ ಹರಿದಿರುವುದು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಚಿನ್ನದ ದಾಸ್ತಾನಿನ ಮೇಲೆ.

ದೇಶದ ಜನರು ಅಕ್ರಮ ಚಿನ್ನದ ದಾಸ್ತಾನು ಹೊಂದಿದ್ದರೆ ಅದನ್ನು ಸಕ್ರಮಗೊಳಿಸಿ ಕ್ಷಮಾದಾನ ನೀಡುವ ಯೋಜನೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಚಿನ್ನದ ಬೆಲೆ ಗಗನಕ್ಕೇರಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ.

ಹಲೋ ಟಿ.ಎ. ಶರವಣ: ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?

ನಮ್ಮ ದೇಶಕ್ಕೆ ಬೇಕಾದ ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಜೊತೆಗೆ, ಅಕ್ರಮವಾಗಿ ಚಿನ್ನ ಖರೀದಿಸಿ ಇಟ್ಟುಕೊಂಡವರಿಂದ ತೆರಿಗೆ ವಂಚನೆಯೂ ನಡೆಯುತ್ತಿದೆ. ಇವೆರಡಕ್ಕೂ ಪರಿಹಾರವಾಗಿ ‘ಅಕ್ರಮ ಚಿನ್ನ ಸಕ್ರಮ’ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಜಾರಿಗೆ ಹಣಕಾಸು ಇಲಾಖೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದೆ. ಯೋಜನೆ ಜಾರಿಗೊಂಡರೆ ಸರ್ಕಾರವು ಜನರ ಬಳಿ ನಿಮ್ಮಲ್ಲಿರುವ ಅನಧಿಕೃತ ಚಿನ್ನವನ್ನು ತೆರಿಗೆ ಅಧಿಕಾರಿಗಳ ಬಳಿ ಘೋಷಿಸಿಕೊಂಡು, ಅದಕ್ಕೆ ತೆರಿಗೆ ಮತ್ತು ದಂಡ ಕಟ್ಟಿಸಕ್ರಮವಾಗಿಸಿಕೊಳ್ಳಿ ಎಂದು ಕೋರಲಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಆದಾಯ ಹರಿದುಬರುವುದರ ಜೊತೆಗೆ ಜನರಿಗೆ ತಮ್ಮಲ್ಲಿರುವ ಚಿನ್ನವನ್ನು ಯಾವುದೇ ಆತಂಕವಿಲ್ಲದೆ ಮಾರಾಟ ಮಾಡಲು ಅವಕಾಶ ಸಿಗಲಿದೆ. ಆದರೆ, ತಮ್ಮಲ್ಲಿರುವ ಅಕ್ರಮ ಚಿನ್ನವನ್ನು ಘೋಷಿಸಿಕೊಳ್ಳುವ ಜನರು ಅದರಲ್ಲಿ ಒಂದು ಪಾಲನ್ನು ಸರ್ಕಾರದಲ್ಲಿ ಕೆಲ ವರ್ಷಗಳ ಕಾಲ ಠೇವಣಿ ಇಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ-ಬೆಳ್ಳಿ ದರ ಸಾರ್ವಕಾಲಿಕ ದಾಖಲೆ: ದರ ಏರಿಕೆಗೆ ಕಾರಣವೂ ಬಹಿರಂಗ!

ಕಳೆದ ವರ್ಷವೇ ಇಂತಹದ್ದೊಂದು ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ತೆರಿಗೆ ಅಧಿಕಾರಿಗಳು ಒಪ್ಪಿರಲಿಲ್ಲ. ಅಕ್ರಮ ಎಸಗಿದವರಿಗೆ ಕ್ಷಮಾದಾನ ನೀಡುವುದರಿಂದ ಪ್ರಾಮಾಣಿಕ ತೆರಿಗೆದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯಗಳೂ ಬೇರೆ ಬೇರೆ ಸಂದರ್ಭದಲ್ಲಿ ಹೇಳಿರುವುದರಿಂದ ಈ ಯೋಜನೆ ನ್ಯಾಯಾಲಯದ ಆಕ್ಷೇಪಕ್ಕೆ ಗುರಿಯಾಗಬಹುದು ಎಂದು ತೆರಿಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.

ಇನ್ನು, ದೇಶದ ಜನರ ಬಳಿ ನಿರುಪಯುಕ್ತವಾಗಿ ದಾಸ್ತಾನಿರುವ ಸುಮಾರು 25,000 ಟನ್‌ ಚಿನ್ನ ಮಾರುಕಟ್ಟೆಗೆ ಬರುವಂತೆ ಮಾಡಲು ಮೂರು ಯೋಜನೆಗಳನ್ನು ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿತ್ತು. ಆದರೆ, ಅವು ನಿರೀಕ್ಷಿತ ಫಲ ನೀಡಿಲ್ಲ.

"

click me!