
ಚೆನ್ನೈ (ಮೇ.7): ತಮಿಳುನಾಡು ರಾಜಕೀಯದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಗುರುವಾರ ಎರಡನೇ ಬಾರಿಗೆ ಶಾಕ್ ನೀಡಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೋದ ವಿಜಯ್ ಅವರಿಗೆ, "ಕೇವಲ ಮೌಖಿಕ ಬೆಂಬಲ ಸಾಲದು, 118 ಶಾಸಕರ ಸಹಿ ಇರುವ ಪತ್ರ ತಂದರಷ್ಟೇ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗುವುದು" ಎಂದು ರಾಜ್ಯಪಾಲರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ಸತತ ಎರಡನೇ ದಿನವೂ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮಗೆ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಮೂಲಗಳ ಪ್ರಕಾರ, ರಾಜ್ಯಪಾಲರು ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ. "ದಯವಿಟ್ಟು 118 ಶಾಸಕರ ಸಹಿಯೊಂದಿಗೆ ಬನ್ನಿ. ನಿಮ್ಮ ಬಳಿ ಬಹುಮತವಿದೆ ಎಂದು ಸಾಬೀತುಪಡಿಸಿ, ಆನಂತರವೇ ಪ್ರಮಾಣವಚನ ನಡೆಯಲಿದೆ" ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ರಚನೆಯಾದ ನಂತರ ಅದು ಪತನಗೊಳ್ಳಬಾರದು ಎಂಬ ದೃಷ್ಟಿಯಿಂದ ಲಿಖಿತ ಬೆಂಬಲ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ವಿಜಯ್ ಅವರಿಗೆ ಒಂದು ಸಮಾಧಾನಕರ ಸಂಗತಿಯೆಂದರೆ, ವಿಜಯ್ ಅವರು ಸಹಿಯೊಂದಿಗೆ ಮರಳಿ ಬರುವವರೆಗೆ ರಾಜ್ಯಪಾಲರು ಬೇರೆ ಯಾವುದೇ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ರಾಜ್ಯಪಾಲರ ಭೇಟಿಗೆ ಯಾವುದೇ ಸಮಯ ಕೇಳಿಲ್ಲ. ಪ್ರಸ್ತುತ ವಿಧಾನಸಭೆಯ ಅವಧಿ ಮೇ 9ಕ್ಕೆ ಮುಕ್ತಾಯಗೊಳ್ಳಲಿದ್ದು, ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರಿಗೆ ಇನ್ನೂ ಕೆಲವೇ ದಿನಗಳ ಕಾಲಾವಕಾಶವಿದೆ.
ಚೊಚ್ಚಲ ಚುನಾವಣೆಯಲ್ಲೇ ದ್ರಾವಿಡ ಪಕ್ಷಗಳನ್ನು ಬೆಚ್ಚಿಬೀಳಿಸಿರುವ ವಿಜಯ್ ಪಕ್ಷ 108 ಸ್ಥಾನ ಗೆದ್ದಿದೆ. ಆದರೆ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಹೀಗಾಗಿ ಪಕ್ಷದ ಬಲ 107ಕ್ಕೆ ಇಳಿಯಲಿದೆ. ಐವರು ಶಾಸಕರಿರುವ ಕಾಂಗ್ರೆಸ್ ವಿಜಯ್ಗೆ ಬೆಂಬಲ ಘೋಷಿಸಿದೆ. ಇದರಿಂದಾಗಿ ವಿಜಯ್ ಪಕ್ಷಕ್ಕೆ ಒಟ್ಟು 112 ಶಾಸಕರ ಬೆಂಬಲ ಇದ್ದಂತಾಗಿದೆ. ಆದರೆ, ಮ್ಯಾಜಿಕ್ ನಂಬರ್ 118ಕ್ಕೆ ತಲುಪಲು ಇನ್ನೂ 6 ಶಾಸಕರ ಕೊರತೆಯಿದೆ. ಬುಧವಾರವೂ 112 ಶಾಸಕರ ಬೆಂಬಲವಿದೆ ಎಂದು ವಿಜಯ್ ಹಕ್ಕು ಮಂಡಿಸಿದ್ದರು. ಕಾಂಗ್ರೆಸ್ ಬೆಂಬಲದ ಬಗ್ಗೆ ಮೌಖಿಕವಾಗಿ ತಿಳಿಸಿ, ಹೆಚ್ಚಿನ ಸಂಖ್ಯೆ ಹೊಂದಿಸಲು ಕಾಲಾವಕಾಶ ಕೇಳಿದ್ದರು. ಆದರೆ ರಾಜ್ಯಪಾಲರು ಲಿಖಿತ ಪುರಾವೆಗಾಗಿ ಪಟ್ಟು ಹಿಡಿದಿದ್ದಾರೆ.
ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ವಿಜಯ್ ಪರವಾಗಿ ಬ್ಯಾಟ್ ಬೀಸಿದ್ದಾರೆ. "ವಿಜಯ್ ಅವರನ್ನು ಅತ್ಯಂತ ದೊಡ್ಡ ಪಕ್ಷದ ನಾಯಕ ಎಂದು ಪರಿಗಣಿಸಿ ಮೊದಲು ಪ್ರಮಾಣವಚನಕ್ಕೆ ಆಹ್ವಾನಿಸಬೇಕು. ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಬೇಕು. ಬಿಜೆಪಿ, ಅಮಿತ್ ಶಾ ಮತ್ತು ಮೋದಿ ಅವರು ತಮಿಳುನಾಡು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಿಪಿಐ (CPI) ಪಕ್ಷ ಕೂಡ ರಾಜ್ಯಪಾಲರ ನಡೆಯನ್ನು ಖಂಡಿಸಿದ್ದು, ಪ್ರಮಾಣವಚನಕ್ಕೂ ಮುನ್ನವೇ ಬಹುಮತ ಸಾಬೀತುಪಡಿಸಲು ಕೇಳುವುದು ಸಂವಿಧಾನ ಬಾಹಿರ ಮತ್ತು ಅನುಚಿತ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಸಂವಿಧಾನದ ವಿಧಿ 164(1) ರ ಪ್ರಕಾರ ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರ ರಾಜ್ಯಪಾಲರಿಗಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಯಾರನ್ನು ಸಿಎಂ ಆಗಿ ನೇಮಿಸಬೇಕು ಎಂಬ ವಿವೇಚನಾ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಅತ್ಯಂತ ದೊಡ್ಡ ಪಕ್ಷದ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸಿದ ಇತಿಹಾಸವಿದೆ. ಆದರೆ ಇಲ್ಲಿ ರಾಜ್ಯಪಾಲರು ಸ್ಥಿರ ಸರ್ಕಾರದ ದೃಷ್ಟಿಯಿಂದ ಸಹಿ ಇರುವ ಪತ್ರಕ್ಕೆ ಪಟ್ಟು ಹಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ