Ajit Pawar Funeral: ಅಜಿತ್ ಪವಾರ್ ಅಂತ್ಯಕ್ರಿಯೆಯಲ್ಲೂ ಕಳ್ಳರ ಕೈಚಳಕ, 15 ಜನರ ಚಿನ್ನದ ಸರ ಕದ್ದ ಕಿಡಿಗೇಡಿಗಳು!

Published : Feb 02, 2026, 04:14 PM IST
Ajit pawar last rites photo

ಸಾರಾಂಶ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ವೇಳೆ ನಡೆದ ಜನಜಂಗುಳಿಯಲ್ಲಿ ಕಳ್ಳರು ಸುಮಾರು 15 ಜನರ ಚಿನ್ನದ ಸರಗಳನ್ನು ದೋಚಿದ್ದಾರೆ. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ನಡೆದ ಈ ಘಟನೆಯಲ್ಲಿ 25-30 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಮುಂಬೈ (ಫೆ.02): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ದುಃಖತಪ್ತರಾಗಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರನ್ನೇ ಗುರಿಯಾಗಿಸಿಕೊಂಡ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಅಂತಿಮ ಸಂಸ್ಕಾರದ ಜನಜಂಗುಳಿಯ ಲಾಭ ಪಡೆದ ಖದೀಮರು ಸುಮಾರು 15 ಜನರ ಚಿನ್ನದ ಸರಗಳನ್ನು ಕಿತ್ತೊಯ್ದಿದ್ದು, ಇದರ ಒಟ್ಟು ಮೌಲ್ಯ 25 ರಿಂದ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಘಟನೆಯ ವಿವರ:

ಜನವರಿ 28ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಕಾಲಿಕ ನಿಧನರಾಗಿದ್ದ ಅಜಿತ್ ಪವಾರ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ತಳ್ಳಾಟ-ನುಗ್ಗುಾಟದ ಲಾಭ ಪಡೆದ ಕಳ್ಳರು ಜನರ ಕುತ್ತಿಗೆಯಲ್ಲಿದ್ದ ಸರಗಳನ್ನು ಹರಿದು ಪರಾರಿಯಾಗಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಜನರು ತಮ್ಮ ಸರಗಳು ನಾಪತ್ತೆಯಾಗಿರುವುದನ್ನು ಕಂಡು ಆತಂಕಕ್ಕೆ ಒಳಗಾದರು.

ಬಿಗಿ ಭದ್ರತೆಯ ನಡುವೆಯೂ ಕಳ್ಳತನ:

ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ, ಅಂದು ಬಾರಾಮತಿ ನಗರದಾದ್ಯಂತ ಸುಮಾರು 8,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಷ್ಟೇ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಶರದ್ ಪವಾರ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಡಿಸಿಎಂ ಏಕನಾಥ್ ಶಿಂಧೆ ಸೇರಿದಂತೆ ದೇಶದ ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂತಹ ಹೈ-ಪ್ರೊಫೈಲ್ ಭದ್ರತಾ ವಲಯದಲ್ಲೂ ಕಳ್ಳರು ನುಗ್ಗಿ ಕೈಚಳಕ ತೋರಿಸಿರುವುದು ಪೊಲೀಸರ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಐವರ ಬಂಧನ, ತನಿಖೆ ಚುರುಕು:

ಸರ ಕಳೆದುಕೊಂಡ ಸಂತ್ರಸ್ತರ ದೂರಿನ ಮೇರೆಗೆ ಬಾರಾಮತಿ ತಾಲೂಕು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮೊಹಮ್ಮದ್ ಯೂನುಸ್, ರಾಜ್‌ಕುಮಾರ್ ಅಠಾವಳೆ, ಇಜಾಜ್ ಮಿರ್ವಾಲೆ, ಮೊಹಮ್ಮದ್ ಸಿರಾಜ್ ಮತ್ತು ಬಾಲು ಬೋತ್ರೆ ಎಂಬ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಕಳುವಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರಾಷ್ಟ್ರಧ್ವಜದಲ್ಲಿ ಸುತ್ತಿದ ಪವಾರ್ ಅವರ ಪಾರ್ಥಿವ ಶರೀರಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿರುವಾಗ ನಡೆದ ಈ ಕಳ್ಳತನದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿ-ಡಾಕ್‌ನ ದೇಶಾದ್ಯಂತ ಒಟ್ಟು 805 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಹಲವು ಹುದ್ದೆಗಳು
ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮ ಸಲ್ಲಾಪ; ಸತ್ತರೂ ಬಿಡದ ಕಾಮಪಿಶಾಚಿ ಕೈಗೆ ಸಿಕ್ಕು ಮಸಣ ಸೇರಿದ ಯುವತಿ!