ಕಾಶಿಯಲ್ಲಿ ಉಕ್ಕೇರಿದ ಗಂಗೆ: ರಸ್ತೆಯಲ್ಲೇ ಶವ ದಹನ!

By Kannadaprabha NewsFirst Published Aug 28, 2022, 12:27 PM IST
Highlights

ಗಂಗಾ ನದಿ ಉಕ್ಕೇರಿದೆ. ಇದರಿಂದಾಗಿ ಗಂಗಾ ನದಿಯ ಅಕ್ಕಪಕ್ಕದ ಪ್ರಸಿದ್ಧ ಘಾಟ್‌ಗಳು ಸಂಪೂರ್ಣ ಮುಳುಗಡೆ ಆಗಿವೆ. ಹೀಗಾಗಿ ಶವಸಂಸ್ಕಾರಕ್ಕೆ ಹೆಸರುವಾಸಿಯಾದ ಕಾಶಿಯ ಮಣಿಕರ್ಣಿಕಾ ಘಾಟ್‌ ಹಾಗೂ ಹರಿಶ್ಚಂದ್ರ ಘಾಟ್‌ಗಳಲ್ಲಿ ಶವದಹನ ಪ್ರಕ್ರಿಯೆಗೆ ತೀವ್ರ ಅಡ್ಡಿಯಾಗಿದೆ.

ಕಾಶಿ: ವಿಶ್ವನಾಥನ ಪವಿತ್ರ ಕ್ಷೇತ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಭಾರಿ ಮಳೆಯ ಕಾರಣ ಗಂಗಾ ನದಿ ಉಕ್ಕೇರಿದೆ. ಇದರಿಂದಾಗಿ ಗಂಗಾ ನದಿಯ ಅಕ್ಕಪಕ್ಕದ ಪ್ರಸಿದ್ಧ ಘಾಟ್‌ಗಳು ಸಂಪೂರ್ಣ ಮುಳುಗಡೆ ಆಗಿವೆ. ಹೀಗಾಗಿ ಶವಸಂಸ್ಕಾರಕ್ಕೆ ಹೆಸರುವಾಸಿಯಾದ ಕಾಶಿಯ ಮಣಿಕರ್ಣಿಕಾ ಘಾಟ್‌ ಹಾಗೂ ಹರಿಶ್ಚಂದ್ರ ಘಾಟ್‌ಗಳಲ್ಲಿ ಶವದಹನ ಪ್ರಕ್ರಿಯೆಗೆ ತೀವ್ರ ಅಡ್ಡಿಯಾಗಿದೆ. ಹೀಗಾಗಿ ಘಾಟ್‌ ಪಕ್ಕದ ರಸ್ತೆಗಳಲ್ಲೇ ಶವದಹನ ಆರಂಭವಾಗಿದೆ.

ಗಂಗಾ ಮತ್ತು ವರುಣಾ ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಪ್ರಮುಖ ಹಿಂದೂ ರುದ್ರ ಭೂಮಿಗಳಾದ ಹರಿಶ್ಚಂದ್ರ ಮತ್ತು ಮಣಿಕರ್ಣಿಕಾ ಘಾಟ್‌ಗಳು ಸೇರಿದಂತೆ ವಾರಣಾಸಿಯ ಹಲವಾರು ಭಾಗಗಳು ನೀರಿನಲ್ಲಿ ಮುಳುಗಿವೆ. ಇದು ಈ ಘಾಟ್‌ಗಳಿಗೆ ತಂದ ಶವಗಳನ್ನು ಟೆರೇಸ್‌ಗಳು ಮತ್ತು ಹತ್ತಿರದ ಬೀದಿಗಳಲ್ಲಿ ಸುಡುವಂತೆ ಮಾಡಿದೆ. ಘಾಟ್‌ಗಳಲ್ಲಿ ಶವಸಂಸ್ಕಾರ ನಡೆಯದ ಕಾರಣ ರಸ್ತೆಯಲ್ಲಿನ ಶವದಹನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. 

ಗಂಗೆಯಲ್ಲಿ 3 km ಈಜಿ ಮಾವುತನ ರಕ್ಷಿಸಿದ ಆನೆ: ವಿಡಿಯೋ ವೈರಲ್

ಹೀಗಾಗಿ ನೂರಾರು ಶವಗಳು ಸರದಿಯಲ್ಲಿ ಅಂತ್ಯಕ್ರಿಯೆಗೆ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಇದೇ ವೇಳೆ, ಗಂಗಾ ನದಿ ಅಕ್ಕಪಕ್ಕದ ರಮಣ, ಕಾಶಿಪುರಂ, ಮಾರುತಿ ನಗರ, ಸಾಮ್ನೆ ಘಾಟ್, ನಾಗವಾ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜಮೀನುಗಳು ಮುಳುಗಡೆ ಆಗಿದ್ದು ಕೃಷಿ ಕಾರ್ಯಕ್ಕೆ ಅಡಚಣೆ ಆಗಿದೆ. ಅಲ್ಲದೆ ಕಾಶಿ ಹಾಗೂ ಸುತ್ತಲಿನ ನದಿ ದಂಡೆಯ ಮನೆಗಳಿಗೆ ನೀರು ನುಗ್ಗಿದೆ. ಸಾವಿರಾರು ಜನರನ್ನು ಸಂತ್ರಸ್ತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ, ಪ್ರವಾಹದ ಕಾರಣ ರೋಗಭೀತಿ ಕೂಡ ಉಂಟಾಗಿದ್ದು, ಆರೋಗ್ಯ ಅಧಿಕಾರಿಗಳು ಇದರ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ.

Varanasi New Ropeway : ಆಗಸದಿಂದಲೇ ಕಾಶಿಯ ವೀಕ್ಷಣೆ ಮಾಡಬಹುದು!

ಈ ನಡುವೆ, ವಾರಾಣಸಿ ಸಂಸದರೂ ಆದ ಪ್ರಧಾನಿ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಸಚಿವ ಸ್ವತಂತ್ರದೇವ ಸಿಂಗ್‌ರನ್ನು ಕಾಶಿಗೆ ಕಳಿಸಿಕೊಟ್ಟು ಪರಿಹಾರ ಕಾರ‍್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ದಿಲ್ಲಿಯ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿ ರಕ್ಷಣೆ, ಪರಿಹಾರ ಕಾರ್ಯಕ್ಕೆ ಬೇಕಾದ ಅಗತ್ಯ ನೆರವು ಪಡೆದುಕೊಳ್ಳುವಂತೆ ವಾರಾಣಸಿ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.
 

click me!