
ಆಯೋಧ್ಯೆ (ನ.22) ಬರೋಬ್ಬರಿ 500 ವರ್ಷಗಳ ಹೋರಾಟ, ಬಲಿದಾನಗಳ ಬಳಿಕ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ 2024ರಲ್ಲಿ ಉದ್ಘಾಟನೆಗೊಂಡಿತ್ತು. ಮೊಘಲರ ಆಡಳಿತದಲ್ಲಿ ಕೆಡವಿದ ರಾಮ ಮಂದಿರ ದೇಗುಲವನ್ನು ದೇಶ ವಿದೇಶದ ರಾಮ ಭಕ್ತರು ನೀಡಿದ ದೇಣಿಗೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಉದ್ಘಾಟನೆ ವೇಳೆ ರಾಮ ಮಂದಿರದ ಕಾಮಗಾರಿ ಸಂಪೂರ್ಣವಾಗಿರಲಿಲ್ಲ. ಇದೀಗ ಸರಿಸುಮಾರು ಒಂದು ವರ್ಷದ ಬಳಿಕ ರಾಮಮಂದಿರದ ಕಾಮಗಾರಿ ಸಂಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯೋಧ್ಯೆ ರಾಮ ಮಂದಿರದ ವಿಡಿಯೋ ಬಿಡುಗಡೆ ಮಾಡಿದೆ. ಭವ್ಯ ರಾಮ ಮಂದಿರ ಅತ್ಯಂತ ಆಕರ್ಷಕ ಮಾತ್ರವಲ್ಲ, ಶ್ರೀರಾಮನ ಸಾನಿಧ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬಿಡುಗಡೆ ಮಾಡಿದ ವಿಡಿಯೋದಲ್ಲಿ ರಾಮ ಮಂದಿರದ ಗರ್ಭಗುಡಿ ಗೋಪುರ ಮೇಲೆ ಚಿನ್ನ ಲೇಪಿತ ಕಳಶ ಇಡಲಾಗಿದೆ. ಇನ್ನು ರಾಮಮಂದಿರ ಆವರಣ, ಕಾಂಪ್ಲೆಕ್ಸ್ ಕಲೆಸಗಳು ಪೂರ್ಣಗೊಂಡಿದೆ. ಇದೀಗ ರಾಮ ಮಂದಿರ ಮತ್ತಷ್ಟು ಅಕರ್ಷಕವಾಗಿದೆ. ಭವ್ಯ ರಾಮ ಮಂದಿರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭವ್ಯ ರಾಮ ಮಂದಿರ ಪಕ್ಷಿನೋಟದ ವಿಡಿಯೋವನ್ನು ಟ್ರಸ್ಟ್ ಬಿಡುಗಡೆ ಮಾಡಿದೆ.
ಆಯೋಧ್ಯೆ ರಾಮಮಂದಿರ ಕಾಮಗಾರಿ ಸಂಪೂರ್ಣಗೊಂಡಿರುವ ಹಿನ್ನಲೆಯಲ್ಲಿ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ರಾಮ ಮಂದಿರ ಮುಂಭಾಗದಲ್ಲಿ ಸ್ಥಾಪಿಸಿರುವ ಬರೋಬ್ಬರಿ 191 ಅಡಿ ಎತ್ತರದ ಸ್ಥಂಭದಲ್ಲಿ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಈಗಾಗಲೇ ಅರ್ಚಕರು, ಹಿರಿಯ ಸ್ವಾಮೀಜಿಗಳು ಸೇರಿದಂತೆ ಟ್ರಸ್ಟ್ ಸದಸ್ಯರು ರಾಮ ಮಂದಿರದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇತ್ತ ಎಂಜಿನೀಯರ್ ಸೇರಿದಂತೆ ಹಲವು ಸಿಬ್ಬಂದಿಗಳು ಮೋದಿ ಧ್ವಜಾರೋಹಣ ಕಾರ್ಯಕ್ರಮದ ಸಿದ್ಧತೆ ಮಾಡಿದ್ದಾರೆ.
ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಆಯೋಧ್ಯೆ ಚಿತ್ರಣ ಬದಲಾಗಿದೆ. ರಾಮಾಯಣ ಕಾಲದಲ್ಲಿ ಆಯೋಧ್ಯೆ ಸುಭೀಕ್ಷವಾಗಿತ್ತು. ದಶರತ ಮಹರಾಜ, ಶ್ರೀರಾಮನ ಆಳ್ವಿಕೆಯಲ್ಲಿ ಪ್ರಜೆಗಳು ಸಂತೋಷವಾಗಿದ್ದರು. ಪ್ರತಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆಯೋಧ್ಯೆ ಜನರಿಂದ ತುಂಬಿ ತುಳುಕುತಿತ್ತು. ಬಳಿಕ ನಡೆದ ದಾಳಿ, ದೇವಸ್ಥಾನ ಧ್ವಂಸಗೊಂಡ ಕಾರಣ ಆಯೋಧ್ಯೆಯ ಪರಂಪರೆ ನಶಿಸಿಹೋಗಿತ್ತು. ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ಬಳಿಕ ಆಯೋಧ್ಯೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. 2020ರಲ್ಲಿ 60 ಲಕ್ಷ ಮಂದಿ ಆಯೋಧ್ಯೆಗೆ ಬೇಟಿ ನೀಡಿದ್ದರು. 2025ರ ಜನವರಿಯಿಂದ ಜೂನ್ ತಿಂಗಳ ವರೆಗೆ ಬರೋಬ್ಬರಿ 23 ಕೋಟಿ ಭಕ್ತರು, ಪ್ರವಾಸಿಗರು ಭೇಟಿ ನೀಡಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ 50 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆಯೋಧ್ಯೆಯಲ್ಲಿ ಇದೀಗ ಗತಕಾಲದ ವೈಭವ ಮರುಕಳಿಸಿದೆ. ಈ ಬಾರಿಯ ಆಯೋಧ್ಯೆ ದೀಪಾವಳಿಯಲ್ಲಿ 26 ಲಕ್ಷಕ್ಕೂ ಅದಿಕ ದೀಪಗಳ ಬೆಳಗಿ ದಾಖಲೆ ಬರೆಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ