
ಮುಂಬೈ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT), ಜೀ ಗ್ರೂಪ್ (Zee Group) ಸಂಸ್ಥಾಪಕ ಸುಭಾಷ್ ಚಂದ್ರ ಅವರಿಗೆ ಬೃಹತ್ ಸಾಲ ಮರುಪಾವತಿ ವಿನಾಯಿತಿ ನೀಡಿರುವುದನ್ನು ಉಲ್ಲೇಖಿಸಿ, ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸುಭಾಷ್ ಚಂದ್ರ ಅವರ ಬರೋಬ್ಬರಿ ₹22,006.57 ಕೋಟಿ ಮೊತ್ತದ ವೈಯಕ್ತಿಕ ಸಾಲದ ಪೈಕಿ, ಕೇವಲ ₹6.5 ಕೋಟಿ ಪಾವತಿಸಲು NCLT ಅನುಮತಿ ನೀಡಿದೆ. ಅಂದರೆ ಸಾಲ ನೀಡಿದ ಬ್ಯಾಂಕುಗಳಿಗೆ ಶೇಕಡಾ 99.97 ರಷ್ಟು ಬೃಹತ್ ನಷ್ಟ ಉಂಟಾಗಿದ್ದು, ಕೇವಲ 0.03% ನಷ್ಟು ಮೊತ್ತ ಮಾತ್ರ ವಸೂಲಿಯಾಗಲಿದೆ. ಸಾಲಗಾರರಿಗೆ ಬರಬೇಕಾದ ಅಸಲು ಮೊತ್ತದಲ್ಲಿ ಸಿಗುವ ಅತ್ಯಲ್ಪ ಮರುಪಾವತಿಯ ವ್ಯತ್ಯಾಸವನ್ನು ಹಣಕಾಸು ಕ್ಷೇತ್ರದಲ್ಲಿ 'ಹೇರ್ಕಟ್' ಎಂದು ಕರೆಯಲಾಗುತ್ತದೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿರುವ ವಿಜಯ್ ಮಲ್ಯ, ವರದಿಗಳು ನಿಜವಾಗಿದ್ದರೆ ನನ್ನ ಸ್ನೇಹಿತ ಸುಭಾಷ್ಗೆ ಅಭಿನಂದನೆಗಳು! ನನ್ನ ವಿಷಯಕ್ಕೆ ಬಂದರೆ ₹6,203 ಕೋಟಿ ನ್ಯಾಯಾಲಯದ ಸಾಲದ ಬಾಕಿಗೆ ಪ್ರತಿಯಾಗಿ ಬ್ಯಾಂಕುಗಳು ಮತ್ತು ಸರ್ಕಾರ ನನ್ನಿಂದ ₹14,100 ಕೋಟಿಗಳನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿವೆ. ಇತ್ತ ಅನೇಕ ದೊಡ್ಡ ಸಾಲಗಾರರು ಕೇವಲ ಅಲ್ಪ ಪ್ರಮಾಣದ ಹಣ ಪಾವತಿಸಿ ಇತ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ 'ಭಾರತೀಯ ಸಾಲ ಪರಿಹಾರ ನ್ಯಾಯ' ಶೈಲಿ ಇರಬೇಕು. ಮಾಧ್ಯಮಗಳು ಇದರ ಬಗ್ಗೆ ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ತೀಕ್ಷ್ಣವಾಗಿ ಲೇವಡಿ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ವಿವರಣೆಯಲ್ಲಿ ತಮ್ಮನ್ನು "ಭಾರತ ಸರ್ಕಾರದ ಸನ್ನಿವೇಶ ಬಲಿಪಶು" (Targeted Victim) ಎಂದು ಕರೆದುಕೊಳ್ಳುವ ಮಲ್ಯ, ಈ ಹಿಂದೆಯೂ ಸರ್ಕಾರ ಮತ್ತು ಬ್ಯಾಂಕುಗಳು ನೀಡುತ್ತಿರುವ ವಸೂಲಾತಿ ಅಂಕಿ-ಅಂಶಗಳ ವ್ಯತ್ಯಾಸವನ್ನು ಪ್ರಶ್ನಿಸಿದ್ದರು. ನನ್ನಿಂದ ಎಷ್ಟು ಹಣ ವಸೂಲಿ ಮಾಡಲಾಗಿದೆ ಎಂಬುದರ ಕುರಿತು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಬ್ಯಾಂಕುಗಳು ಪರಸ್ಪರ ವಿರುದ್ಧವಾದ ಮಾಹಿತಿ ನೀಡುತ್ತಿವೆ. ಈ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದರು.
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಸಂಸ್ಥೆಯು ಎಸ್ಸೆಲ್ ಗ್ರೂಪ್ ಪಡೆದಿದ್ದ ಸಾಲಕ್ಕೆ ವೈಯಕ್ತಿಕ ಶೂರಿಟಿ ನೀಡಿದ್ದ ಸುಭಾಷ್ ಚಂದ್ರ ವಿರುದ್ಧ ವೈಯಕ್ತಿಕ ದಿವಾಳಿತನ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ NCLT ಯ ಇಬ್ಬರು ಸದಸ್ಯರ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಅಧ್ಯಯನಕ್ಕಾಗಿ ನಿಲೇಶ್ ಶರ್ಮಾ ಅವರನ್ನು ಮೂರನೇ ಸದಸ್ಯರನ್ನಾಗಿ ನೇಮಿಸಲಾಯಿತು. ಅಂತಿಮವಾಗಿ 144 ಪುಟಗಳ ಸುದೀರ್ಘ ಆದೇಶ ನೀಡಿದ ನಿಲೇಶ್ ಶರ್ಮಾ, ಎಲ್ಐಸಿ ಹೌಸಿಂಗ್ ಫೈನಾನ್ಸ್ (LIC Housing Finance) ನೇತೃತ್ವದ ಸಾಲದಾತರ ಆಕ್ಷೇಪಣೆಯನ್ನು ತಿರಸ್ಕರಿಸಿದರು.
"ಸಾಲಗಾರನ ಆಸ್ತಿ ಮೌಲ್ಯವು ಈ ಯೋಜನೆಗಿಂತ ತೀರ ಕಡಿಮೆಯಾಗಿದೆ. ಆತನನ್ನು ಸಂಪೂರ್ಣ ದಿವಾಳಿ ಮಾಡುವ ಬದಲು, ಈ ಮರುಪಾವತಿ ಯೋಜನೆಗೆ ಅನುಮೋದನೆ ನೀಡಿ ಆತ ಮತ್ತೆ ಉದ್ಯಮ ನಡೆಸಿ ಕಾಲಿನ ಮೇಲೆ ನಿಲ್ಲುವಂತೆ ಮಾಡಿದರೆ, ಸಾಲದಾತರು ಮುಂದಿನ ದಿನಗಳಲ್ಲಿ ತಮ್ಮ ಬಾಕಿ ಹಣವನ್ನು ನೇರವಾಗಿ ಮೂಲ ಸಾಲಗಾರರಿಂದ ವಸೂಲಿ ಮಾಡಲು ಉತ್ತಮ ಅವಕಾಶ ಸಿಗುತ್ತದೆ," ಎಂದು NCLT ತನ್ನ ಆದೇಶದಲ್ಲಿ ಸಮರ್ಥಿಸಿಕೊಂಡಿದೆ.
ಸುಭಾಷ್ ಚಂದ್ರ ಅವರಿಗೆ ನೀಡಲಾದ ಈ ಅಭೂತಪೂರ್ವ 99.97% ಸಾಲ ಮನ್ನಾ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. 2016 ರ 'ದಿವಾಳಿತನ ಮತ್ತು ದಿವಾಳಿ ಸಂಹಿತೆ' (Insolvency and Bankruptcy Code - IBC) ಕಾಯ್ದೆಯನ್ನು ಇದು ಸಂಪೂರ್ಣ ಅಪಹಾಸ್ಯ ಮಾಡುವಂತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಇನ್ನೊಂದೆಡೆ, ಮಾಜಿ ಕಿಂಗ್ಫಿಷರ್ ಏರ್ಲೈನ್ಸ್ (KFA) ಮಾಲೀಕ ವಿಜಯ್ ಮಲ್ಯ ಅವರ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಸ್ಪಷ್ಟನೆ ಕೇಳಿದೆ. ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಮಲ್ಯ ಅವರ ಆಸ್ತಿಗಳ ಮಾರಾಟದಿಂದ ಬಂದ ಹಣದಲ್ಲಿ ಬ್ಯಾಂಕ್ ಒಕ್ಕೂಟಗಳ ಬಾಕಿ ಹಣ ಸಂಪೂರ್ಣ ಇತ್ಯರ್ಥವಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಡಿ ಗೆ ನ್ಯಾಯಮೂರ್ತಿ ಮಿಲಿಂದ್ ಜಾಧವ್ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ