
ಜೈಪುರ (ಡಿ.14): ಆರ್ಬಿಐ ಮಾಜಿ ಗವರ್ನರ್ ಎನ್ ರಘುರಾಮ್ ರಾಜನ್ ಇಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ರಘುರಾಮ್ ರಾಜನ್ ಅವರೊಂದಿಗೆ ರಾಹುಲ್ ಗಾಂಧಿ ಸುದೀರ್ಘ ಚರ್ಚೆ ನಡೆಸಿದರು. ಚಹಾ ವಿರಾಮದವರೆಗೂ ಇಬ್ಬರೂ ನಿರಂತರವಾಗಿ ಮಾತನಾಡುತ್ತಿದ್ದರು. ದೇಶದ ಆರ್ಥಿಕ ವಿಚಯಗಳ ವಿಚಾರವಾಗಿ ತಮ್ಮದೇ ಆದ ಸ್ಪಷ್ಟವಾದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ವಿವಿಧ ಪ್ರದೇಶಗಳ ಜನರು ನಿರಂತರವಾಗಿ ಸೇರುತ್ತಿರುವುದು ಗಮನಾರ್ಹವಾಗಿದೆ. ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಇಬ್ಬರೂ ಆರ್ಥಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರಕ್ಕಾಗಿಯೂ ಮಂಡಿಸಿದರು. ಯುಪಿಎ ಎರಡನೇ ಅವಧಿಯಲ್ಲಿ ರಘುರಾಮ್ ರಾಜನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.
ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ, ದೌಸಾದಲ್ಲಿಯೇ ರಾಹುಲ್ ಗಾಂಧಿ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಜಿಲ್ಲಾಡಳಿತದ ಕ್ರಮ ಕೈಗೊಂಡಿದೆ. ನಗರದ ಆಗ್ರಾ ರಸ್ತೆ ಮತ್ತು ಲಾಲ್ಸೋಟ್ ಮೇಲ್ಸೇತುವೆಯಲ್ಲಿ ಬರೆದಿರುವ ಈ ಘೋಷಣೆಗಳನ್ನು ತಕ್ಷಣವೇ ತೆಗೆದುಹಾಕಲಾಗಿದೆ.
ಬುಧವಾರ ಸವಾಯಿ ಮಾಧೋಪುರದ ಭಡೋತಿಯಿಂದ ರಾಹುಲ್ ಯಾತ್ರೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಗೆ ಯಾತ್ರೆಯು ಬಮನ್ವಾಸ್ನ ಬದ್ಶ್ಯಾಮಪುರ ತೋಂಡ್ಗೆ ತಲುಪಲಿದೆ. ತೋಂಡ್ನಲ್ಲಿ ಭಾರತ್ ಜೋಡೋ ಯಾತ್ರೆಯ ಟೀಮ್, ಭೋಜನ ವಿರಾಮದಲ್ಲಿ ಇರಲಿದೆ. 2ನೇ ಹಂತದ ಪ್ರಯಾಣ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಕೊನೆಯಲ್ಲಿ ದೌಸಾ ಜಿಲ್ಲೆ ಲಾಲ್ಸೋಟ್ನ ಬಗ್ಡಿ ಗ್ರಾಮದ ಚೌಕದಲ್ಲಿ ಸಂಜೆ 6.30ಕ್ಕೆ ಇರಲಿದೆ. ಇಲ್ಲಿ ರಾಹುಲ್ ಗಾಂಧಿ ಅವರ ಸಭೆಯನ್ನು ಇರಿಸಲಾಗಿದೆ. ಲಾಲ್ಸೋಟ್ ಬಳಿಯ ಬೀಲೋನಾ ಕಲಾನ್ನಲ್ಲಿ ರಾತ್ರಿ ತಂಗಲಿದ್ದಾರೆ.
ಇಂದು ರಾಹುಲ್ ಗಾಂಧಿಯವರ ರಾಜಸ್ಥಾನ ಪ್ರವಾಸದ 10ನೇ ದಿನವಾಗಿದ್ದು, ಡಿಸೆಂಬರ್ 19 ರವರೆಗೆ ಈ ಯಾತ್ರೆಯೂ ದೌಸಾ ಜಿಲ್ಲೆಯಲ್ಲಿ ಇರುತ್ತದೆ. ಈ ದೌಸಾ ಜಿಲ್ಲೆಯಲ್ಲಿಯೇ ಡಿಸೆಂಬರ್ 16ಕ್ಕೆ ರಾಹುಲ್ ಗಾಂಧಿ ಭೇಟಿಯ 100 ದಿನಗಳ ಪೂರ್ಣವಾಗಲಿದೆ. ರಾಜಸ್ಥಾನದಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚಿನ ಪ್ರಯಾಣವನ್ನು ಪೂರ್ಣ ಮಾಡಲಾಗಿದೆ. ರಾಹುಲ್ ಗಾಂಧಿ ಪಯಣ ಇದೀಗ ಸಚಿನ್ ಪೈಲಟ್ ಪ್ರಭಾವದ ಕ್ಷೇತ್ರಗಳ ಮೂಲಕ ಸಾಗುತ್ತಿದೆ. ಯಾತ್ರೆಯಲ್ಲಿ ಪೈಲಟ್ ಬೆಂಬಲಿಗರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಯಾತ್ರೆಯ ಸಂದರ್ಭದಲ್ಲಿ ಪೈಲಟ್ ಬೆಂಬಲಿಗರು ಅವರ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ.
ಯಾತ್ರೆಯು ರಾಜಸ್ಥಾನ ಹಾಗೂ ಹರಿಯಾಣ ಗಡಿ ದಾಟಿದ ಬಳಿಕ, ಒಂದು ವಾರಗಳ ವಿರಾಮ ಇರಲಿದೆ. ಡಿಸೆಂಬರ್ 24 ರಿಂದ ಜನವರಿ 2ರವರೆಗೆ ವಿರಾಮವಿರಲಿದ್ದು, ಈ ಸಮಯದಲ್ಲಿ ರಾಹುಲ್ ಗಾಂಧಿ ಲೋಕಸಭೆ ಕಲಾಪದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಭಾರತ್ ಜೋಡೋ ಯಾತ್ರೆಗೆ ಹೊಸ ತಲೆನೋವು, ಕಳ್ಳರಿದ್ದಾರೆ ಎಚ್ಚರಿಕೆ ಎಂದ ಪೊಲೀಸ್!
ಡಿಸೆಂಬರ್ 16ರಂದು ಯಾತ್ರೆ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಜೈಪುರಕ್ಕೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಅಲ್ಲಿ ಎಲ್ಲಾ ಪ್ರಯಾಣಿಕರು ಸುನಿಧಿ ಚೌಹಾಣ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೊಟ್ಟ ಮಾತನ್ನು ಈಡೇರಿಸಿದ ರಾಹುಲ್ ಗಾಂಧಿ, ಮೂವರು ಯುವತಿಯರಿಗೆ ಹೆಲಿಕಾಪ್ಟರ್ ರೈಡ್!
ರಾಜಸ್ಥಾನದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ಗೆ ಈ ಪ್ರಯತ್ನ ಸುಲಭವಿಲ್ಲ. ರಾಜಸ್ಥಾನದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವುದು ಆಮ್ ಆದ್ಮಿ ಪಾರ್ಟಿ. ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಪ್ ಯಾವ ರೀತಿಯಲ್ಲಿ ಹಾನಿ ಮಾಡಿದೆಯೋ ಅದೇ ರೀತಿಯಲ್ಲಿ ರಾಜಸ್ಥಾನದಲ್ಲಿ ಆಪ್ ಕಾಂಗ್ರೆಸ್ಗೆ ಹಾನಿ ಮಾಡಲಿದೆ. ಈ ಎಚ್ಚರಿಕೆಯಲ್ಲಿ ಅಲ್ಲಿನ ಸರ್ಕಾರ ಕೂಡ ಇದ್ದು, ರಾಹುಲ್ ಗಾಂಧಿ ಯಾತ್ರೆ ಅಲ್ಲಿ ಮತ್ತೊಮ್ಮ ಸರ್ಕಾರ ರಚನೆಗೆ ಬಲ ನೀಡುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ