ಪಿಂಚಣಿ ಇಲ್ಲ, ತುತ್ತು ಅನ್ನಕ್ಕಾಗಿ ಬಿಪಿಎಲ್ ಕಾರ್ಡನ್ನು ಆಶ್ರಯಿಸಿದ ಮಾಜಿ ಶಾಸಕ!

By Santosh NaikFirst Published Jun 25, 2022, 11:03 AM IST
Highlights

1967 ರಿಂದ 1971ರವರೆಗೆ ಗುಜರಾತ್ ವಿಧಾನಸಭೆಯ ಶಾಸಕರಾಗಿದ್ದ ಜೀತಾಭಾಯಿ ರಾಥೋಡ್ ಇಂದು ತುತ್ತು ಅನ್ನಕ್ಕಾಗಿ ಸರ್ಕಾರದ ಬಿಪಿಎಲ್ ಕಾರ್ಡ್‌ಅನ್ನು ಆಶ್ರಯಿಸಿದ್ದಾರೆ. ಮಾಜಿ ಶಾಸಕನಾಗಿದ್ದ ಕಾರಣಕ್ಕೆ ಸಿಗಬೇಕಾಗಿದ್ದ ಪೆನ್ಶನ್ ಹಣವನ್ನು ಕೊಡಿಸುವಂತೆ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು.
 

ಅಹಮದಾಬಾದ್ (ಜೂನ್ 25): ಇಂದಿನ ರಾಜಕೀಯದಲ್ಲಿ ಕನಿಷ್ಠ ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ವ್ಯಕ್ತಿ, ಐಷಾರಾಮಿ ಬಂಗಲೆಗಳನ್ನು ಕಟ್ಟಿಸಿಕೊಂಡು, ಬಿಂದಾಸ್ ಆದ ಜೀವನ ನಡೆಸುತ್ತಿರುತ್ತಾರೆ. ಇನ್ನು ಒಮ್ಮೆ ಶಾಸಕನಾದರೆ ಅವರ ಇಡೀ ನಿವೃತ್ತಿ ಜೀವನ ಸರ್ಕಾರಿ ದುಡ್ಡಿನಲ್ಲಿ ನಡೆಯುತ್ತದೆ. ಆದರೆ, ಇದೇ ವಿಚಾರ ಗುಜರಾತ್‌ನ ಈ ಮಾಜಿ ಶಾಸಕರಿಗಿಲ್ಲ.

1967 ರಿಂದ 1971ರವರೆಗ ಗುಜರಾತ್‌ನ ವಿಧಾನಸಭೆಗೆ (Gujarat Assembly) ಖೇಡಬ್ರಹ್ಮ-ವಿಜಯನಗರ (Khedbrahma-Vijayanagar) ಕ್ಷೇತ್ರದ ಸ್ವತಂತ್ರ ಶಾಸಕರಾಗಿ (independent MLA) ಜೀತಾಭಾಯಿ ರಾಥೋಡ್ (Jethabhai Rathod) ಆಯ್ಕೆಯಾಗಿದ್ದರು. ಕಾಂಗ್ರೆಸ್ (Congress) ಅಭ್ಯರ್ಥಿಯನ್ನು ಬರೋಬ್ಬರಿ 17 ಸಾವಿರ ವೋಟುಗಳಿಂದ ಸೋಲಿಸಿದ್ದ ಇವರ ಈಗಿನ ಜೀವನ ಸರ್ಕಾರವೇ ನೀಡುವ ಬಿಪಿಎಲ್ ಕಾರ್ಡ್‌ನಿಂದ (BPL Card) ನಡೆಯುತ್ತಿದೆ. ಮಾಜಿ ಶಾಸಕರಿಗೆ ನೀಡಲಾಗುವ ಪೆನ್ಶನ್ ಕೂಡ ಇವರಿಗೆ ಬರುತ್ತಿಲ್ಲ. ಈ ಕುರಿತಾಗಿ ಕೋರ್ಟ್‌ ಮೆಟ್ಟಿಲೇರಿದ್ದರೂ ಅವರ ಪರಿಸ್ಥಿತಿ ಬದಲಾಗಿಲ್ಲ. ಸಬರಕಾಂತದಲ್ಲಿ ವಾಸಿಸುವ ಇವರ ಜೀವನ ನಮ್ಮ ವ್ಯವಸ್ಥೆಯ ವಿರುದ್ಧ ಅನೇಕ ಪ್ರಶ್ನೆಗಳನ್ನು ಎತ್ತುವುದು ನಿಜ.

ಇಂದಿನ ಸ್ಥಿತಿಯಲ್ಲಿ ಯಾವುದೇ ಸಣ್ಣ ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಕೂಡ ಒಂದೇ ಅವಧಿಯಲ್ಲಿ ಆತನ ಜೀವನಶೈಲಿಯೇ ಬದಲಾಗಿ ಬಿಡುತ್ತದೆ. ಆದರೆ, ತತ್ವ ಆದರ್ಶಗಳಿಗೆ ಕಟ್ಟುಬಿದ್ದಿದ್ದ ಜೀತಾಭಾಯಿ ರಾಥೋಡ್‌ ಜೀವನ ಇಂದು ಭಿಕ್ಷುಕರಿಗಿಂತ ಕಡೆಯಾಗಿ ಹೋಗಿದೆ.

1967ರಲ್ಲಿ ಖೇಡಬ್ರಹ್ಮ-ವಿಜಯನಗರ ಕ್ಷೇತ್ರಕ್ಕೆ ಸ್ವತಂತ್ರ ಶಾಸಕರಾಗಿ ಸ್ಪರ್ಧೆ ಮಾಡಿದ್ದಾಗ ತಮ್ಮ ಕ್ಷೇತ್ರದ ಮತದಾರರನ್ನು ತಲುಪಲು ಸೈಕಲ್ ಮೂಲಕ ಹೋಗುತ್ತಿದ್ದರು. ಸ್ಥಳೀಯ ಜನರ ಪ್ರಕಾರ, ಜೀತಾಭಾಯಿ ರಾಥೋಡ್ ಶಾಸಕರಾಗಿದ್ದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದವು. ಅದರಲ್ಲೂ ಈ ಊರಿಗೆ ರಸ್ತೆಗಳು ಹಾಗೂ ಕೆರೆಗಳ ಪುನರುಜ್ಜೀವನ ಮಾಡಿದ್ದು ಜೀತಾಭಾಯಿ ರಾಥೋಡ್‌ ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ. ಕ್ಷೇತ್ರದ ಪ್ರತಿ ಮತದಾರರ ಬಳಿ ಸೈಕಲ್ ಏರಿ ಹೋಗುತ್ತಿದ್ದ ಅವರು, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಜನರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅವಶ್ಯಕತೆ ಇದ್ದರೆ, ಸಾರಿಗೆ ಸಂಸ್ಥೆಯ ಬಸ್ ಏರಿ ರಾಜಧಾನಿಗೆ ಹೋಗಿ ಸಮಸ್ಯೆ ಬಗೆಹರಿಸುತ್ತಿದ್ದರು. ಜನರಿಗಾಗಿ ಅಂದು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಶಾಸಕ ಇದು ಜನರ ನೆನಪಿನಿಂದ ಮರೆಯಾಗಿ ಹೋಗಿದ್ದಾರೆ.  80 ವರ್ಷದ ಜೀತಾಭಾಯಿಗೆ ಐದು ಜನ ಮಕ್ಕಳ ಅವಿಭಕ್ತ ಕುಟುಂಬ. ಇಡೀ ಕುಟುಂಬವೀಗ ಬಿಪಿಎಲ್ ಕಾರ್ಡ್‌ನ ಆಶ್ರಯದಲ್ಲಿ ಬದುಕುತ್ತಿದೆ.

ಸದ್ಯ ಪಿತ್ರಾರ್ಜಿತವಾಗಿ ಬಂದ ಗುಡಿಸಲಿನಂತಿರುವ ಮನೆಯಲ್ಲಿ ವಾಸವಾಗಿದ್ದು, ಬಿಪಿಎಲ್ ಕಾರ್ಡ್ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅವರ ಐವರು ಪುತ್ರರು ಕೂಲಿ ಕೆಲಸ ಮಾಡುತ್ತಾರೆ. ಜೇತಾಭಾಯಿ ಪಿಂಚಣಿಗಾಗಿ ನ್ಯಾಯಾಲಯದ ಬಾಗಿಲು ತಟ್ಟಿದರು. ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತು. ಆದರೆ, ಇವರಿಗೆ ಇದುವರೆಗೂ ಪಿಂಚಣಿ ಹಣ ಬಂದಿಲ್ಲ, ಯಾವುದೇ ಸರ್ಕಾರ ಕೂಡ ಸಹಾಯ ಮಾಡಿಲ್ಲ.

2002 ಗುಜರಾತ್‌ ಹಿಂಸಾಚಾರದ ವೇಳೆ ನಡೆದಿದ್ದೇನು? ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ!

ಇಡೀ ಕುಟುಂಬವು ಬಿಪಿಎಲ್ ಪಡಿತರ ಚೀಟಿಯ ಸಹಾಯದಿಂದ ಜೀವನ ಸಾಗಿಸುತ್ತಿದೆ. ಕೆಟ್ಟ ಕಾಲದಲ್ಲಿ ಸಾರ್ವಜನಿಕರ ಕಣ್ಣೀರು ಒರೆಸಿದ ಶಾಸಕನಿಗೆ ಇಂದು ಕಣ್ಣೀರು ಒರೆಸುವವರೇ ಇಲ್ಲದಂತಾಗಿದೆ. ಈಗ ಸರಕಾರ ನೆರವಿಗೆ ಧಾವಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಮೋದಿ ಹೋದ್ರೆ, ಗುಜರಾತ್ ಕೂಡ ಹೋಗುತ್ತೆ ಅಂತಾ ಆಡ್ವಾಣಿಗೆ ಹೇಳಿದ್ರು ಬಾಳಾಸಾಹೇಬ್ ಠಾಕ್ರೆ!

ಇಂದು ಶಾಸಕರ ಒಂದು ತಿಂಗಳ ವೇತನ 2 ಲಕ್ಷದಿಂದ 2.5 ಲಕ್ಷದವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಅಂದಾಜು ಸುಮಾರು 12 ಕೋಟಿ ರೂಪಾಯಿಗಳನ್ನು ಸರಾಸರಿಯಾಗಿ ವಿವಿಧ ಮೂಲಗಳಿಂದ ಗಳಿಸುತ್ತಾರೆ. ಆದರೆ ಗುಜರಾತ್‌ನ ಮಾಜಿ ಶಾಸಕ ಜೀತಾಭಾಯ ರಾಥೋಡ್ ಅವರ ದಯನೀಯ ಸ್ಥಿತಿಯನ್ನು ನೋಡಿದರೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.

click me!