
ಚೆನ್ನೈ(ಸೆ.02): ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾರ ಆಪ್ತೆ ವಿ.ಕೆ. ಶಶಿಕಲಾಗೆ ಸೇರಿದ 300 ಕೋಟಿ ರು.ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಒಟ್ಟು ವಶಪಡಿಸಿಕೊಂಡ 65 ಆಸ್ತಿಗಳ ಪಟ್ಟಿಯಲ್ಲಿ ಜಯಲಲಿತಾ ವಾಸವಿದ್ದ ವೇದನಿಲಯಂ ಎದುರಿನ ವಿಶಾಲ ಜಾಗ ಮತ್ತು ಅಲ್ಲಿ ನಿರ್ಮಿಸುತ್ತಿದ್ದ ಬೃಹತ್ ಬಂಗಲೆ ಕೂಡ ಸೇರಿದೆ. 4 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ಬಳಿಕ ಈ ಬಂಗಲೆಯಲ್ಲಿ ಉಳಿದುಕೊಳ್ಳಲು ಶಶಿಕಲಾ ನಿರ್ಧರಿಸಿದ್ದರು. ಆದರೆ ಆ ಬಂಗಲೆ ಮತ್ತು ಜಾಗ ಇದೀಗ ಅವರ ಕೈತಪ್ಪಿದೆ. ಬೇನಾಮಿ ವಹಿವಾಟು (ತಡೆ) ಕಾಯ್ದೆಯಡಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಶಶಿಕಲಾ, ಅವರ ಪತಿ ನಟರಾಜನ್ ಮತ್ತು ಅವರ ಬಂಧುಗಳಿಗೆ ಸೇರಿದ ನೂರಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 1430 ಕೋಟಿ ರು. ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಜೊತೆಗೆ 7 ಕೋಟಿ ರು. ನಗದು ಮತ್ತು 5 ಕೋಟಿ ರು.ಮೌಲ್ಯದ ಆಭರಣಗಳು ಪತ್ತೆಯಾಗಿದ್ದವು. ಆ ಪ್ರಕರಣ ಸಂಬಂಧ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ