ಹೆಂಡ್ತಿ ಕೊಂದು ಮೆಟ್ರೋ ಸ್ಟೇಷನ್‌ನಿಂದ ಹಾರಿ ಗಂಡ ಸಾವಿಗೆ ಶರಣು: ಅಮ್ಮನ ಹೆಣದ ಮುಂದೆ ಮಗುವಿನ ರೋದನೆ

By Anusha KbFirst Published Jan 2, 2024, 11:46 AM IST
Highlights

ಹೆಂಡತಿಯನ್ನು ಕೊಂದು ಗಂಡನೋರ್ವ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಗೌರವ್‌ ಶರ್ಮಾ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದ ವ್ಯಕ್ತಿ.

ನವದೆಹಲಿ/ಗಾಜಿಯಾಬಾದ್: ಹೆಂಡತಿಯನ್ನು ಕೊಂದು ಗಂಡನೋರ್ವ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಗೌರವ್‌ ಶರ್ಮಾ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದ ವ್ಯಕ್ತಿ.  ಗುರುಗ್ರಾಮದಲ್ಲಿದ್ದ ತನ್ನ ಮನೆಯಲ್ಲಿ ಪತ್ನಿ ಲಕ್ಷ್ಮಿ ರಾವತ್ ಎಂಬಾಕೆಯನ್ನು ಕೊಂದ ಈತನಿಗೆ ಬಳಿಕ ಪೊಲೀಸರ ಭಯ ಶುರುವಾಗಿದ್ದು, ಮನೆ ಬಿಟ್ಟು ಓಡಿ ಬಂದಿದ್ದಾನೆ. ಹೀಗೆ ಬಂದವನೇ ಇಂದು ಮುಂಜಾನೆ  ಉತ್ತರಪ್ರದೇಶದ ಗಾಜಿಯಾಬಾದ್‌ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರ ರಾಜಧಾನಿಗೆ ಸಮೀಪದಲ್ಲಿರುವ ಕೌಶಂಬಿ ಮೆಟ್ರೋ ನಿಲ್ದಾಣ ತಲುಪಿದ್ದಾನೆ. ಬಳಿಕ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾನೆ. 

ಮೂಲತಃ ಉತ್ತರಪ್ರದೇಶದ ಆಗ್ರಾ ನಿವಾಸಿಗಳಾದ ಈ ದಂಪತಿ ಗುರುಗ್ರಾಮದ ಡಿಎಲ್‌ಎಫ್‌ ಫೇಸ್‌ 3 ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಆರು ತಿಂಗಳ ಹಿಂದಷ್ಟೇ ಈ ಪ್ರದೇಶಕ್ಕೆ ಬಂದಿದ್ದರು. ಇತ್ತ ಗೌರವ್ ಶರ್ಮಾ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯ  ನಿಲ್ದಾಣದಲ್ಲಿದ್ದ ಪ್ಲಾಟ್‌ಫಾರ್ಮ್‌ ನಂಬರ್ ಒಂದರಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆ ನಡೆಯುವ ವೇಳೆ ರೈಲು ಪೂರ್ವಕ್ಕೆ ಅಂದರೆ ವೈಶಾಲಿ ಕಡೆಗೆ ಚಲಿಸುತ್ತಿತ್ತು. ಇದು ನೀಲಿ ಮಾರ್ಗದಲ್ಲಿರುವ ಕೊನೆಯ ನಿಲ್ದಾಣವಾಗಿತ್ತು. 

ಗಂಡನಿಂದ ಹೆಂಡ್ತಿ, ಆಕೆಯ ಅಪ್ಪ ಹಾಗೂ ನಾಲ್ವರ ಕೊಚ್ಚಿ ಕೊಲೆ

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಸಾವಿಗೆ ಶರಣಾದ ವ್ಯಕ್ತಿ ಪ್ಲಾಟ್‌ಫಾರ್ಮ್‌ನ ರೇಲಿಂಗ್‌ನ ಹತ್ತಿರ ನಿಂತಿರುವುದು ಕಂಡು ಬರುತ್ತದೆ. 
ಕೌಶಂಬಿ ಮೆಟ್ರೋ ನಿಲ್ದಾಣದ ಈ ಪ್ಲಾಟ್‌ಫಾರ್ಮ್ ಜನವಸತಿ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಪ್ಲಾಟ್‌ಫಾರ್ಮ್‌ನಿಂದ ಜಿಗಿದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೆಟ್ರೋ ನಿಲ್ದಾಣದ ಪಕ್ಕದ ಸರ್ವಿಸ್ ಲೇನ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಆತನ ಮೃತದೇಹ ಪತ್ತೆಯಾಗಿದೆ. 

ಗೌರವ್‌ ಶರ್ಮಾಗೆ ಅಂದಾಜು 30 ವರ್ಷವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈತ ಪತ್ನಿಯನ್ನು ಏಕೆ ಕೊಂದ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ. ಘಟನೆಯ ನಂತರ ಪೊಲೀಸರು ಮನೆಗೆ ಹೋಗಿ ನೋಡಿದಾಗ ಅಲ್ಲಿ ಪತ್ನಿ ಹೆಣವಾಗಿರುವುದು ತಿಳಿದು ಬಂದಿದೆ. ಜೊತೆಗೆ ಒಂದು ವರ್ಷದ ಮಗು ತಾಯಿಯ ಹೆಣದ ಸಮೀಪದಲ್ಲಿ ಅಳುತ್ತಾ ಕುಳಿತಿರುವುದು ಕಂಡು ಬಂದಿದೆ.  ಹರಿತವಾದ ಆಯುಧದಿಂದ ಈತ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಈತ ನಂತರ ಇಟ್ಟಿಗೆಯಿಂದ ಆಕೆಯ ತಲೆಗೆ ಬಡಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟಿನಲ್ಲಿ ತಂದೆ ತಾಯಿ ಕಿತ್ತಾಟದಿಂದ ಜಗದ ಅರಿವಿಲ್ಲದ ಮಗುವೊಂದು ಅಪ್ಪ ಅಮ್ಮನಿಲ್ಲದೇ ಅನಾಥವಾಗಿದೆ.

ಸಂಸಾರದಲ್ಲಿ ಕಲಹ, ಡ್ರಾಪ್‌ ಕೊಡುವ ನೆಪದಲ್ಲಿ ಕತ್ತು ಸೀಳಿ ಕೊಂದ ಪತಿ!

click me!