
ಪಿಟಿಐ ನವದೆಹಲಿ(ಡಿ.26): ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ರೈತರ ಭೂಮಿಯನ್ನು ಖಾಸಗಿ ಕಂಪನಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರೈತರಿಂದ ಕಂಪನಿಗಳು ಗುತ್ತಿಗೆ ಕೃಷಿ ಪದ್ಧತಿ ಅಡಿಯಲ್ಲಿ ಕೇವಲ ಬೆಳೆಗಳನ್ನು ಮಾತ್ರ ಖರೀದಿಸುತ್ತವೆ’ ಎಂದು ಹೇಳಿದ್ದಾರೆ.
ಹೊಸ ಕೃಷಿ ಕಾಯ್ದೆಗಳಿಂದ ತಮ್ಮ ಜಮೀನು ಖಾಸಗಿ ಕಂಪನಿಗಳ ಪಾಲಾಗುತ್ತವೆ ಎಂದು ದಿಲ್ಲಿ ಹೊರವಲಯದಲ್ಲಿ ಪಂಜಾಬ್, ಹರಾರಯಣ, ಉತ್ತರಪ್ರದೇಶ ರೈತರು ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಮೋದಿ ನೀಡಿರುವ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.
ಕಿಸಾನ್ ಸಮ್ಮಾನ್ಗೆ ಮೋದಿ ಚಾಲನೆ; ರೈತರಿಗೆ ಬಂಪರ್ ಬಹುಮಾನ..!
ಪಿಎಂ-ಕಿಸಾನ್ ಯೋಜನೆಯಡಿ 18 ಸಾವಿರ ಕೋಟಿ ರು.ಗಳನ್ನು 9 ಕೋಟಿ ರೈತರಿಗೆ ಶುಕ್ರವಾರ ಬಿಡುಗಡೆ ಮಾಡಿದ ಮೋದಿ ಅವರು, 7 ರಾಜ್ಯಗಳ ಆಯ್ದ 7 ರೈತರ ಜತೆ ಸಂವಾದ ನಡೆಸಿದರು. ಈ ವೇಳೆ ಹೊಸ ಕಾಯ್ದೆಗಳು ತಮಗೆ ಲಾಭದಾಯಕವಾಗಿವೆ ಎಂದು ಈ ರೈತರು ಅನುಭವ ಹಂಚಿಕೊಂಡರು.
‘ಹೊಸ ಕೃಷಿ ಕಾಯ್ದೆ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಆದರೆ ನಿಮ್ಮ ಅನುಭವಗಳಿಂದ ಈ ಅಪಪ್ರಚಾರ ಸುಳ್ಳು ಎಂದು ಸಾಬೀತಾಗಿದೆ. ಹೊಸ ಕಾಯ್ದೆಗಳು ರೈತರಿಗೆ ವರ. ಗುತ್ತಿಗೆ ಉಲ್ಲಂಘನೆಯಾದರೆ ಕಂಪನಿಗೆ ದಂಡ ಹಾಕಲಾಗುತ್ತದೆ. ಈ ಹಿಂದಿನಂತೆ ರೈತರ ಮೇಲೆ ದಂಡ ಇಲ್ಲ. ಬೆಳೆ ಹಾಳಾದರೂ, ನಿಗದಿತ ದರವನ್ನೇ ಕಂಪನಿಗಳು ರೈತರಿಗೆ ನೀಡಬೇಕು. ಖಾಸಗಿ ಕಂಪನಿಗಳು ಮನಬಂದಾಗ ಗುತ್ತಿಗೆ ರದ್ದು ಮಾಡುವಂತಿಲ್ಲ. ಇದು ರೈತಪರ ಕಾಯ್ದೆಯಲ್ಲದೇ ಮತ್ತಿನ್ನೇನು?’ ಎಂದು ಮೋದಿ ಪ್ರಶ್ನಿಸಿದರು.
ಕೀಳು ರಾಜಕೀಯಕ್ಕೆ ರೈತರ ಬಲಿಕೊಡಬೇಡಿ; ದೀದಿ ಸೇರಿದಂತೆ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!
ಸಂವಾದದ ವೇಳೆ ಅರುಣಾಚಲ ಪ್ರದೇಶದ ರೈತ ಗಗನ್ ಪರೀನ್ ಮಾತನಾಡಿ, ‘ಗುತ್ತಿಗೆ ಕೃಷಿ ಪದ್ಧತಿ ಅಡಿ ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡ ರೈತರು ಜಮೀನು ಕಳೆದುಕೊಳ್ಳುವುದಿಲ್ಲ. ಬೆಳೆ ಮಾತ್ರ ಮಾರುತ್ತಾರೆ. ಬೆಳೆ ಖರೀದಿಗೆ ಮಾತ್ರ ಒಪ್ಪಂದ ಆಗಿರುತ್ತದೆ. 446 ರೈತರು ಇರುವ ನಮ್ಮ ಕೃಷಿ ಉತ್ಪನ್ನ ಸಂಸ್ಥೆಯು ಖಾಸಗಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯು ಬೆಂಗಳೂರು ಸೇರಿ ಅನೇಕ ಕಡೆ ನಮ್ಮ ಉತ್ಪನ್ನ ಮಾರುತ್ತಿದೆ’ ಎಂದರು.
ಮಧ್ಯಪ್ರದೇಶದ ರೈತ ಮನೋಜ ಪಾಟೇಕರ್ ಮಾತನಾಡಿ, ‘ಈ ಮುನ್ನ ನಮ್ಮ ವ್ಯಾಪ್ತಿಯಲ್ಲಿ ಕೇವಲ 1 ಮಂಡಿ ಇತ್ತು. ಈಗ ನಾವು ಯಾವುದೇ ಕಂಪನಿಗಳಿಗೆ ನಮ್ಮ ಉತ್ಪನ್ನ ಮಾರಬಹುದು. 85 ಕ್ವಿಂಟಾಲ್ ಸೋಯಾ ಅವರೆಯನ್ನು ಖಾಸಗಿ ಕಂಪನಿಗೆ ಕ್ವಿಂಟಾಲ್ಗೆ 4800 ರು. ಬೆಲೆಗೆ ಮಾರಿದೆ. ಮಾರುವ 1 ದಿನ ಮೊದಲು ಒಪ್ಪಂದ ಮಾಡಿಕೊಂಡೆ. ಮಾರಿದ ಕೂಡಲೇ ಹಣ ಸಿಕ್ಕಿತು. ಈ ಲಾಭವನ್ನು ಅನೇಕ ರೈತರು ಪಡೆದಿದ್ದಾರೆ’ ಎಂದರು.
Fact Check : ಮೋದಿ ಸೋದರರೆಲ್ಲಾ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರಾ?
ಉತ್ತರಪ್ರದೇಶದ ಮಹಾರಾಜಗಂಜ್ ರೈತ ರಾಮ್ ಗುಲಾಬ್ ಮಾತನಾಡಿ, ‘ಸಿಹಿ ಆಲೂಗಡ್ಡೆಯನ್ನು ಅಹಮದಾಬಾದ್ನ ಖಾಸಗಿ ಕಂಪನಿಗೆ ಮಾರುತ್ತಿದ್ದೇವೆ. ಈ ಮುನ್ನ ಕೇಜಿಗೆ 10-15 ರು. ದರ ಸಿಗುತ್ತಿತ್ತು. ಈಗ 25 ರು. ಸಿಕ್ಕಿದೆ’ ಎಂದು ಅನುಭವ ಹಂಚಿಕೊಂಡರು.
ರಾಜಕೀಯ ವೈರಿಗಳಿಂದ ರೈತರ ಪ್ರತಿಭಟನೆ ದುರ್ಬಳಕೆ
ನವದೆಹಲಿ: ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ರಾಜಕೀಯ ವೈರಿಗಳು ತಮ್ಮ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಂತಹ ವಿಷಯಗಳ ಬಗ್ಗೆ ಇದ್ದ ಪ್ರಾಮಾಣಿಕ ಆತಂಕಗಳು ಈಗ ಗಲಭೆಕೋರರ ಬಿಡುಗಡೆ, ಹೆದ್ದಾರಿ ಟೋಲ್ ರದ್ದತಿ ಮುಂತಾದ ಬೇಡಿಕೆಗಳಡಿ ಕಳೆದುಹೋಗಿವೆ ಎಂದು ಪ್ರಧಾನಿ ಮೋದಿಯವರು ಕಿಡಿಕಾರಿದ್ದಾರೆ. ವಿವರ ಪುಟ 7
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ