
ನವದೆಹಲಿ(ಮಾ.11): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ 4 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಮಾ.26ರಂದು ಭಾರತ ಬಂದ್ಗೆ ಕರೆ ನೀಡಿವೆ.
ಇದೇ ವೇಳೆ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಕೆಲವು ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಮಾ.15ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿವೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಡಿಸೆಂಬರ್ 8ರಂದು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು.
ಈ ಮುಷ್ಕರಕ್ಕೆ ಕಾಂಗ್ರೆಸ್, ಎಡರಂಗ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳೂ ಬೆಂಬಲ ಘೋಷಿಸಿದ್ದವು.
ಇನ್ನೂ ಮೂರೂವರೆ ವರ್ಷ ಪ್ರತಿಭಟನೆಗೆ ನಾವು ಸಿದ್ಧ: ರೈತ ನಾಯಕ ಟಿಕಾಯತ್
ಕೃಷಿ ಕಾಯ್ದೆ ವಿರೋಧಿಸಿ ಇನ್ನೂ ಮೂರೂವರೆ ವರ್ಷ (ಮೋದಿ 2.0 ಸರ್ಕಾರದ ಉಳಿದ ಅವಧಿ) ದೆಹಲಿ ಗಡಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಲು ನಾವು ಸಿದ್ಧ. ಯಾವುದೇ ಕಾರಣಕ್ಕೂ ರೈತ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರೈತ ನಾಯಕ ನರೇಂದ್ರ ಟಿಕಾಯತ್ ಹೇಳಿದ್ದಾರೆ.
ನರೇಂದ್ರ ಟಿಕಾಯತ್ ರೈತ ಆಂದೋಲನದಲ್ಲಿ ಮುಂಚೂಣಿ ಪಾತ್ರ ವಹಿಸಿರುವ ರಾಕೇಶ್ ಟಿಕಾಯತ್ ಅವರ ಕಿರಿಯ ಸಹೋದರ. ರೈತ ಹೋರಾಟದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಹಲವು ತಂತ್ರಗಳನ್ನು ಬಳಸಿ ಪ್ರತಿಭಟನೆ ಹತ್ತಿಕ್ಕಬಹುದು ಎಂಬ ತಪ್ಪು ಗ್ರಹಿಕೆಯಲ್ಲಿ ಸರ್ಕಾರ ಇದೆ. ಆದರೆ ಈ ಪ್ರತಿಭಟನೆಯ ದಿಕ್ಕುತಪ್ಪಿಸಲು ಸಾಧ್ಯವೇ ಇಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ.
ಮೋದಿ ಸರ್ಕಾರದ ಈ ಅವಧಿಯು ಇನ್ನು ಮೂರೂವರೆ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೂ ನಾವು ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ