Expressway Repair: ₹4,200 ಕೋಟಿ ವೆಚ್ಚದ ರಸ್ತೆ 2 ವಾರಕ್ಕೇ ಕಿತ್ತು ಬಂತು! ಟಾರ್ ಒಣಗಿಸಲು ಫ್ಯಾನ್ ಇಟ್ಟ ಭೂಪರು!

Published : Aug 08, 2026, 07:25 AM IST
Fans Used to Dry Lucknow Kanpur Expressway After Rain Damage Sparks Outrage

ಸಾರಾಂಶ

ಉದ್ಘಾಟನೆಯಾದ ಎರಡೇ ವಾರದಲ್ಲಿ ಲಖನೌ-ಕಾನ್ಪುರ ಎಕ್ಸ್‌ಪ್ರೆಸ್‌ವೇ ಮಳೆಗೆ ಹಾಳಾಗಿದೆ. ರಸ್ತೆ ಒಣಗಿಸಿ, ದುರಸ್ತಿ ಮಾಡಲು ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ಬಳಸಿದ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿ ಗುಣಮಟ್ಟ ಮತ್ತು ವಿಚಿತ್ರ ದುರಸ್ತಿ ವಿಧಾನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಲಖನೌ-ಕಾನ್ಪುರ ಎಕ್ಸ್‌ಪ್ರೆಸ್‌ವೇ, ಮಳೆಗಾಲದ ಮೊದಲ ಮಳೆಗೆ ಅಲ್ಲಲ್ಲಿ ಕಿತ್ತು ಹೋಗಿದೆ. ಇದರ ದುರಸ್ತಿ ವೇಳೆ, ಹೊಸದಾಗಿ ಹಾಕಿದ ಟಾರ್ ಬೇಗ ಒಣಗಲಿ ಅಂತ ಅಧಿಕಾರಿಗಳು ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ಬಳಸಿದ್ದಾರೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮಳೆಯಿಂದಾಗಿ ರಸ್ತೆಯ ಒಂದು ಭಾಗ ಹಾಳಾದ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಶುರುಮಾಡಲಾಗಿತ್ತು. ಹೊಸದಾಗಿ ಮುಚ್ಚಿದ ಗುಂಡಿಗಳು ಬೇಗ ಒಣಗಲಿ ಎಂಬ ಕಾರಣಕ್ಕೆ ಫ್ಯಾನ್‌ಗಳನ್ನು ಇಡಲಾಗಿತ್ತು ಎಂದು ವರದಿಗಳು ಹೇಳಿವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಭಾರತದ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಮತ್ತು ಈ ವಿಚಿತ್ರ ದುರಸ್ತಿ ವಿಧಾನದ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಫೇವರಿಟ್ ರಾಜಕಾರಣಿ ಕಾಂಗ್ರೆಸ್ ನಾಯಕರಲ್ಲ, ಬಿಜೆಪಿಯ ಈ ಲೀಡರ್!

ಮಳೆಯಲ್ಲಿ ಹಾಕಿದ ಟಾರ್ ಒಣಗಿಸಲು ಫ್ಯಾನ್!

ಸುಮಾರು 4,200 ಕೋಟಿಯಿಂದ 4,700 ಕೋಟಿ ರೂಪಾಯಿ ವೆಚ್ಚದಲ್ಲಿ ಲಖನೌ-ಕಾನ್ಪುರ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಲಾಗಿದೆ. ಜುಲೈ 13 ರಂದು ಈ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಕೇವಲ ಎರಡು ವಾರ ಕಳೆಯುವುದರೊಳಗೆ ಸುರಿದ ಮಳೆಗೆ ರಸ್ತೆ ಹಾಳಾಗಿ, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಹೀಗಾಗಿ, ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆಯ ಹಾಳಾದ ಭಾಗದ ಬಳಿ ಸಾಲಾಗಿ ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ಇಟ್ಟು, ದುರಸ್ತಿ ಕೆಲಸ ಮಾಡುವುದನ್ನು ಕಾಣಬಹುದು. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದ್ದಲ್ಲದೆ, ಅದನ್ನು ಸರಿಪಡಿಸಲು ಅನುಸರಿಸಿದ ಈ ವಿಚಿತ್ರ ವಿಧಾನವನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನಿಸಿದ್ದಾರೆ. "ಟಾರ್ ಹಾಕಿದ ರಸ್ತೆ ಒಣಗಿಸಲು ಫ್ಯಾನ್ ಬಳಸೋದು ಯಾವಾಗ ಶುರುವಾಯ್ತು?" ಎಂದು ಒಬ್ಬರು ಪ್ರಶ್ನಿಸಿದರೆ, "ದೇಶ ತಾಂತ್ರಿಕವಾಗಿ ಮುಂದೆ ಹೋಗುತ್ತಿದೆಯೋ ಅಥವಾ ಹಿಂದಕ್ಕೋ?", "ನಾವು ಶಿಲಾಯುಗಕ್ಕೆ ವಾಪಸ್ ಹೋಗುತ್ತಿದ್ದೇವೆಯೇ?" ಎಂಬಂತಹ ವ್ಯಂಗ್ಯಭರಿತ ಟೀಕೆಗಳು ಹರಿದಾಡಿವೆ.

ಇದನ್ನೂ ಓದಿ: Centre Warns Meta: ಡೀಪ್‌ಫೇಕ್‌, ಅಪಪ್ರಚಾರ ತಡೆಗೆ ಅಲ್ಗಾರಿದಂ ಸೆಟ್‌ ಮಾಡಿ; 'ಮೆಟಾ'ಗೆ ಕೇಂದ್ರ ಖಡಕ್ ಎಚ್ಚರಿಕೆ!

ವ್ಯಂಗ್ಯ, ವಿವಾದ

ಸೋಶಿಯಲ್ ಮೀಡಿಯಾದಲ್ಲಿ ವಿವಾದ ಭುಗಿಲೇಳುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 'ದುರಸ್ತಿಗಾಗಿ ಬಳಸಿದ ಸಾಮಗ್ರಿ ಬೇಗನೆ ಒಣಗಲಿ ಮತ್ತು ಮಳೆಯಿಂದ ಉಂಟಾದ ತೇವಾಂಶವನ್ನು ಕಡಿಮೆ ಮಾಡಲು ಫ್ಯಾನ್‌ಗಳನ್ನು ಬಳಸಲಾಗಿದೆ. ಇದು ಕೇವಲ ತಾತ್ಕಾಲಿಕ ತಾಂತ್ರಿಕ ಕ್ರಮ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾದ ನಂತರ ಫ್ಯಾನ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಉತ್ತರ ಪ್ರದೇಶದಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಎಕ್ಸ್‌ಪ್ರೆಸ್‌ವೇಯ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಿದರೆ, ರಸ್ತೆಯ ಹಾನಿಯನ್ನು ಸರಿಪಡಿಸುವ ಕ್ರಮಗಳು ವೇಗವಾಗಿ ನಡೆಯುತ್ತಿವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೈರಲ್ ವಿಡಿಯೋ ಭಾರತದಲ್ಲಿನ ಮೂಲಸೌಕರ್ಯ ಯೋಜನೆಗಳ ಗುಣಮಟ್ಟ ಮತ್ತು ಮೇಲ್ವಿಚಾರಣೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Centre Warns Meta: ಡೀಪ್‌ಫೇಕ್‌, ಅಪಪ್ರಚಾರ ತಡೆಗೆ ಅಲ್ಗಾರಿದಂ ಸೆಟ್‌ ಮಾಡಿ; 'ಮೆಟಾ'ಗೆ ಕೇಂದ್ರ ಖಡಕ್ ಎಚ್ಚರಿಕೆ!
India Latest News Live: ಮೊಟ್ಟೆಗ್ಯಾಕೆ ಹೆದರ್ತೀರಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸುಪ್ರೀಂ ಪ್ರಶ್ನೆ