ಬಾರಮತಿ(ಮೇ.14): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಅದೆಷ್ಟೋ ಜೀವಗಳು ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಆಸ್ಪತ್ರೆ ವರಾಂಡದಲ್ಲಿ, ಆ್ಯಂಬುಲೆನ್ಸ್ನಲ್ಲಿ, ಆಟೋ ರಿಕ್ಷಾದಲ್ಲಿ ಪ್ರಾಣ ಬಿಡುತ್ತಿವೆ. ಇದರ ನಡುವೆ ಆಸ್ಪತ್ರೆ ಬೆಡ್ ಸಿಗದೆ ಅಸ್ವಸ್ಥಗೊಂಡ ಅಜ್ಜಿ ನಿಧನರಾಗಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಲು ಹೊರಟ ಕುಟುಂಬದ ಕತೆ ಇಲ್ಲಿದೆ.
ತಾಯಿ ಶವಸಂಸ್ಕಾರದ ಬೆನ್ನಲ್ಲೇ ಕೆಲಸಕ್ಕೆ ಹಾಜರಾದ ವೈದ್ಯರು!.
ಬಾರಮತಿಯ ಮುಧಾಲೆ ಗ್ರಾಮದ 76 ವರ್ಷದ ಶಕುಂತಲಾ ಗಾಯಕ್ವಾಡ್ಗೆ ಕೊರೋನಾ ಅಂಟಿಕೊಂಡಿತ್ತು. ಆದರೆ ಹೆಚ್ಚಿನ ಸಮಸ್ಯೆ ಇಲ್ಲದ ಕಾರಣ ಹೋಮ್ ಐಸೋಲೇಶನ್ ಮಾಡಲಾಗಿತ್ತು. ಆದರೆ ದಿನದಿಂದ ದಿನಕ್ಕೆ ಶಕುಂತಲಾ ಆರೋಗ್ಯ ಕ್ಷೀಣಿಸತೊಡಗಿತು. ಹೀಗಾಗಿ ಕುಟುಂಬಸ್ಥರು ಅಜ್ಜಿಯನ್ನು ಬಾರಮತಿಯಲ್ಲಿರುವ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
ಬಾರಮತಿಯಲ್ಲಿ ಹಲವು ಆಸ್ಪತ್ರೆ ಅಲೆದರೂ ಬೆಡ್ ಸಿಗಲಿಲ್ಲ. ಇದರಿಂದ ತೀವ್ರ ಅಸ್ವಸ್ಥಗೊಂಡ ಅಜ್ಜಿಯ ಮಾತು , ಚಲನವಲನ ನಿಂತುಹೋಗಿದೆ. ಇತ್ತ ಉಸಿರಾಟ ಇದೆ ಅನ್ನೋದೇ ತಿಳಿಯದ ಪರಿಸ್ಥಿತಿಗೆ ಬಂದಿದೆ. ಕುಟುಂಬಸ್ಥರು ಪರಿಶೀಲಿಸಿ ಅಜ್ಜಿಯ ಉಸಿರು ನಿಂತುಹೋಗಿದೆ ಎಂದಿದ್ದಾರೆ.
ಹೀಗಾಗಿ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದ ಕುಟುಂಬಸ್ಥರು, ಅಜ್ಜಿ ನಿಧನ ವಾರ್ತೆಯನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೊರೋನಾ ಮಾರ್ಗಸೂಚಿ ಪ್ರಕಾರ ಅಂತ್ಯ ಸಂಸ್ಕಾರಕ್ಕೆ ಹೆಚ್ಚಿನವರು ಸೇರುವಂತಿಲ್ಲ. ಹೀಗಾಗಿ ಕುಟುಂಬದ ಕೆಲವೇ ಕೆಲವು ಸದಸ್ಯರು ಅಂತ್ಯಕ್ರಿಯೆ ಮಾಡಲು ಸಜ್ಜಾಗಿದ್ದಾರೆ. ವಿಧಿ ವಿಧಾನ ಮಾಡಿದ ಬಳಿಕ ಅಜ್ಜಿಯನ್ನು ಚಿತೆ ಮೇಲಿರಿಸಿದ್ದಾರೆ. ಈ ವೇಳೆ ಅಜ್ಜಿ ಕೊಂಚ ಸುಧಾರಿಸಿಕೊಂಡು ಎದ್ದು ಕುಳಿತು ಗಳಗಳನೆ ಅತ್ತಿದ್ದಾರೆ.
ನೋವಿನಲ್ಲಿದ್ದ ಕುಟುಂಬಕ್ಕೆ ಆಘಾತವಾಗಿದೆ. ಇದು ನಿಜವೇ ಎಂಬ ಅನುಮಾನವೂ ಮೂಡಿದೆ. ತಕ್ಷಣವೇ ಅಜ್ಜಿಯನ್ನು ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಜ್ಜಿ ಆರೋಗ್ಯ ಚೇತರಿಕೆ ಕಂಡಿದೆ.