The Kashmir Files: ಎಲ್ಲರೂ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ: ಮೋದಿ

By Girish GoudarFirst Published Mar 16, 2022, 5:51 AM IST
Highlights

*  ವಾಕ್‌ ಸ್ವಾತಂತ್ರ್ಯ ಹೋರಾಟಗಾರರಿಗೆ ತಿವಿತ
*  ಇಂಥ ಸಿನಿಮಾಗಳು ಹೆಚ್ಚು ಬರಬೇಕು
*  ಚೆನ್ನಾಗಿಲ್ಲ ಎನ್ನುವವರು ನಿಮ್ಮದೇ ಸಿನಿಮಾ ಮಾಡಿ
 

ನವದೆಹಲಿ(ಮಾ.16):  ಕಾಶ್ಮೀರದಲ್ಲಿ(Jammu and Kashmir) ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ‘ದ ಕಾಶ್ಮೀರಿ ಫೈಲ್ಸ್‌’(The Kashmir Files) ಅತ್ಯುತ್ತಮ ಚಿತ್ರವಾಗಿದ್ದು, ಇನ್ನಷ್ಟು ಇಂಥ ಚಿತ್ರಗಳು ನಿರ್ಮಾಣವಾಗಬೇಕು. ಬಹಳ ಸಮಯದಿಂದ ಮರೆಮಾಚಲಾಗಿದ್ದ ಸತ್ಯ ಕೊನೆಗೂ ಹೊರಬಂದಿದೆ. ಇದನ್ನು ಪ್ರತಿಯೊಬ್ಬ ಬಿಜೆಪಿ ಸಂಸದರೂ ವೀಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ.

ಮಂಗಳವಾರ ಸಂಸದೀಯ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಜನರು ದ ಕಾಶ್ಮೀರಿ ಫೈಲ್ಸ್‌ ಚಿತ್ರದ(Movie) ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ತಮ್ಮ ಇಡೀ ಜೀವನವನ್ನು ವಾಕ್‌ ಸ್ವಾತಂತ್ರ್ಯದ ಬಗ್ಗೆ ಬೋಧನೆ ಮಾಡುವುದಕ್ಕೇ ಸವೆಸುವ ಕೆಲ ಹೋರಾಟಗಾರರು ಇದ್ದಕ್ಕಿದ್ದಂತೆ ಆಕ್ರೋಶಭರಿತರಾಗಿದ್ದಾರೆ. ಅವರೆಲ್ಲಾ ಚಿತ್ರವನ್ನು ಒಂದು ಕಲಾಕೃತಿಯಂತೆ ಚರ್ಚಿಸುತ್ತಿಲ್ಲ. ಬದಲಾಗಿ ಚಿತ್ರಕ್ಕೆ ಸಲ್ಲಬೇಕಾದ ಗೌರವವನ್ನು ನಿರಾಕರಿಸುವ ರೀತಿ ಕೆಲಸ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಸತ್ಯ ತೋರಿಸುವ ಧೈರ್ಯ ತೋರಿಸಿದ್ದಾರೆ. ಅವರು ತಮಗೆ ಏನು ಸತ್ಯ ಎನ್ನಿಸಿತ್ತೋ ಅದನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ವಿರೋಧಿಗಳು ಈ ಸತ್ಯವನ್ನು ಒಪ್ಪಿಕೊಳ್ಳುವ ಅಥವಾ ಸ್ವಾಗತಿಸುವ ಗೋಜಿಗೆ ಹೋಗಿಲ್ಲ. ಬದಲಾಗಿ ಬೇರೆಯವರೂ ಚಿತ್ರವನ್ನು ನೋಡಬಾರದು ಎಂದು ಅಡ್ಡಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ

‘ಈ ಚಿತ್ರ ಚೆನ್ನಾಗಿಲ್ಲ ಎನ್ನುವವರು ತಮ್ಮದೇ ಆದ ಚಿತ್ರಗಳನ್ನು ಮಾಡಬಹುದು. ಹಾಗೆ ಮಾಡದಂತೆ ಅವರನ್ನು ಯಾರು ತಡೆಯುತ್ತಿದ್ದಾರೆ? ಆದರೆ ಇಷ್ಟು ದಿನ ಮುಚ್ಚಿಡಲಾಗಿದ್ದ ಸತ್ಯ ಹೊರಬಂದಿದ್ದಕ್ಕೆ ಇವರೆಲ್ಲಾ ಆಘಾತಗೊಂಡಿದ್ದಾರೆ’ ಎಂದು ಚಿತ್ರದ ವಿರೋಧಿಗಳ ವಿರುದ್ಧ ಮೋದಿ ಹರಿಹಾಯ್ದರು. ಇದೇ ವೇಳೆ ಪ್ರತಿಯೊಬ್ಬರು ಕೂಡಾ ಸತ್ಯದ ಜೊತೆಗೆ ನಿಲ್ಲುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದ ಕಾಶ್ಮೀರಿ ಫೈಲ್ಸ್‌ ಚಿತ್ರ ಮಾ.12ರಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಭಾರೀ ಪರ, ವಿರೋಧಿ ಚರ್ಚೆಗೆ ನಾಂದಿ ಹಾಡಿದೆ.

ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

ಬೆಂಗಳೂರು: ಸದ್ಯ ಬಹುದೊಡ್ಡ ಚರ್ಚೆಯಲ್ಲಿರುವ 'ದಿ ಕಾಶ್ಮೀರ ಫೈಲ್ಸ್​​'  ಚಿತ್ರಕ್ಕೆ ಕರ್ನಾಟಕದಲ್ಲಿಯೂ (Karnataka)  ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ.

ಚಿತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವೀಕ್ಷಣೆ ಮಾಡಿದ ನಂತರ ತೆರಿಗೆ ವಿನಾಯಿತಿ ಘೋಷಿಸಿದರು.  ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶ, ಗುಜರಾತ್ ಗಳು ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದವು.  ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಚಿತ್ರ ವೀಕ್ಷಣೆ ಮಾಡುತ್ತ ಭಾವುಕರಾಗಿದ್ದರು

ಕಾಶ್ಮೀರಿ ಪಂಡಿತರು ತಮ್ಮ ನೆಲದಿಂದ ವಲಸೆ ಹೋಗುವಂತೆ ಮಾಡಿದ ಪರಿಸ್ಥಿತಿಯ ಕುರಿತ ಚಿತ್ರದಲ್ಲಿ ಹಲವು ಸತ್ಯಗಳು ಅಡಗಿವೆ.  ಕಾಶ್ಮೀರ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತ ನೈಜ ಘಟನೆಗಳ ಆಧಾರಿತವಾಗಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಅಭಿನಯಿಸಿದ್ದು ಮೆಚ್ಚುಗೆ ಪಡೆದುಕೊಳ್ಳುವುದರ ಜತೆಗೆ ಚರ್ಚೆ ಹುಟ್ಟುಹಾಕುತ್ತಿದೆ.

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?

ಕಾಶ್ಮೀರಿ ಪಂಡಿತರ ನೋವು, ಉಗ್ರರ ಕೃತ್ಯಗಳಿಂದ ತೊಂದರೆಗೆ ಒಳಗಾದ ಜನರ ಕುರಿತು ಚಿತ್ರಿಸಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಚಲನಚಿತ್ರಕ್ಕೆ ಗುಜರಾತ್‌, ಹರಿಯಾಣ ಬಳಿಕ ಇದೀಗ ಕರ್ನಾಟಕದಲ್ಲೂ ಶೇ.100ರಷ್ಟು ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಭಾನುವಾರ ನಗರದ ಒರಾಯನ್‌ ಮಾಲ್‌ನ ಪಿವಿಆರ್‌ನಲ್ಲಿ ಈ ಚಿತ್ರ ವೀಕ್ಷಿಸಿದ ಬಳಿಕ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೆರಿಗೆ ವಿನಾಯಿತಿ ಘೋಷಿಸಿದರು. ಚಿತ್ರ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಲನಚಿತ್ರ ನೋಡಿದ ಮೇಲೆ ಮಾತನಾಡಲು ಆಗುತ್ತಿಲ್ಲ. ಯಾವ ಪರಿಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿ ಆಯ್ತು. ಅದೆಷ್ಟೋ ಜನ ಉಗ್ರರ ದಾಳಿಗೆ ಬಲಿಯಾಗಿದ್ದರು. ಇದೆಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರ ವೀಕ್ಷಿಸಬೇಕು ಎಂದು ತಿಳಿಸಿದರು.
 

click me!