
ಆಪರೇಷನ್ ಸಿಂದೂರ್ ವೇಳೆ ಉಗ್ರ ಮಸೂದ್ ಕುಟುಂಬವೇ ನಾಶ
ನವದೆಹಲಿ: ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಮ್ಮ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ ಮಸೂದ್ ಅಜರ್ ಪರಿವಾರವೇ ಪೀಸ್ ಪೀಸ್ ಆಗಿದೆ ಎಂದು ಜೈಷ್-ಎ-ಮೊಹಮ್ಮದ್ ಸಂಘಟನೆಯ ನಾಯಕನೊಬ್ಬ ಹೇಳಿಕೆ ನೀಡಿದ್ದಾನೆ. ಇದು ಆಪರೇಷನ್ ಸಿಂದೂರದ ವೇಳೆ ಉಗ್ರ ಅಜರ್ ಕುಟುಂಬದ ಸರ್ವನಾಶ ಕುರಿತು ಮೊದಲ ಬಾರಿ ಉಗ್ರ ಸಂಘಟನೆಯಿಂದ ಹೊರಬಿದ್ದ ಹೇಳಿಕೆಯಾಗಿದೆ.
ಮೊದಲ ಬಾರಿ ಬಾಯ್ಬಿಟ್ಟ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ
ಜೈಷ್ ಸಂಘಟನೆಯ ಹಿರಿಯ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಸೆ.6ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ನಾವು ನಮ್ಮ ಸಿದ್ದಾಂತ ಮತ್ತು ಭೌಗೋಳಿಕೆ ಗಡಿ ಕಾಪಾಡುವ ನಿಟ್ಟಿನಲ್ಲಿ ದೆಹಲಿ ಸೇರಿ ಹಲವು ಕಡೆ ದಾಳಿ ನಡೆಸಿದ್ದೆವು. ಈ ಎಲ್ಲಾ ಬಲಿದಾನದ ಹೊರತಾಗಿಯೂ ಮೇ 7ರಂದು ಬಹಾವಲ್ಪುರದಲ್ಲಿನ ಅಜರ್ ಮಸೂದ್ ಕುಟುಂಬ ಪೀಸ್ ಪೀಸ್ (ಭಾರತದ ದಾಳಿ) ಆಯಿತು ಎಂದು ಹೇಳಿದ್ದಾನೆ. ಈ ಕುರಿತ ವಿಡಿಯೋವನ್ನು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಡೆದಿದ್ದ ಆಪರೇಷನ್ ಸಿಂದೂರ್
ಏ.22ರ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ನಡೆಸಿದ್ದು, ಬಹಾವಲ್ಪುರ ಸೇರಿದಂತೆ 9 ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರೀ ದಾಳಿ ನಡೆಸಿತ್ತು. ಈ ವೇಳೆ ಅಜರ್ನ ಸಹೋದರಿ, ಭಾವ ಸೇರಿದಂತೆ ಪರಿವಾರದ 10 ಮಂದಿ ಹತರಾಗಿದ್ದರು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅವರೆಲ್ಲರ ಅಂತ್ಯಸಂಸ್ಕಾರ ನಡೆದಿದ್ದು, ಅದರಲ್ಲಿ ಅಜರ್ ಭಾಗವಹಿಸಿದ್ದ. ಜತೆಗೆ ಪಾಕ್ ಸೇನೆಯ ಕೆಲ ಅಧಿಕಾರಿಗಳೂ ಉಪಸ್ಥಿತರಿದ್ದು, ಉಗ್ರರು ಹಾಗೂ ಸೇನೆಗೂ ಇರುವ ನಂಟನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದರು.
2016ರ ಪಠಾಣ್ಕೋಟ್ ದಾಳಿ, 2019ರ ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಆಗಿರುವ ಅಜರ್, ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಲ್ಟಿಸ್ತಾನ್ ಪ್ರಾಂತ್ಯದಲ್ಲಿ ಇರುವ ಬಗ್ಗೆ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಆದರೆ ಪಾಕ್ನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮಾತ್ರ, ಆತ ಆಫ್ಘಾನಿಸ್ತಾನದಲ್ಲಿ ಇರಬಹುದು ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ