ಕನ್ಯಾಕುಮಾರಿ(ಡಿ.8): ಮೀನು ವಾಸನೆ ಬರುತ್ತಿದ್ದಾಳೆಂದು ಮೀನು ಮಾರುವ ವೃತ್ತಿ ಮಾಡುತ್ತಿದ್ದ ವೃದ್ಧ ಮಹಿಳೆಯನ್ನು ಬಸ್ನಿಂದ ಒತ್ತಾಯ ಪೂರ್ವಕವಾಗಿ ಇಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕನ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮಹಿಳೆಯರಿಗಾಗಿಯೇ ಮೀಸಲಿರುವ ಸರ್ಕಾರಿ ಬಸ್ಗೆ ಕುಲಚಲ್(Kulachal) ಬಸ್ ನಿಲ್ದಾಣದಲ್ಲಿ 65 ವರ್ಷದ ಮೀನು ಮಾರುವ ಮಹಿಳೆ ಸೆಲ್ವಂ(Selvam) ಹತ್ತಿದ್ದಾರೆ. ಈ ವೇಳೆ ಆಕೆ ವಾಸನೆ ಬರುತ್ತಿದ್ದಾರೆಂದು ಆರೋಪಿಸಿದ ಬಸ್ನ ನಿರ್ವಾಹಕ ಆಕೆಯನ್ನು ಬಸ್ನಿಂದ ಕೆಳಗಿಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಸಾರಿಗೆ ಇಲಾಖೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದೆ. , ಬಸ್ನ ಚಾಲಕ, ನಿರ್ವಾಹಕ ಹಾಗೂ ಸಮಯ ಪಾಲಕನನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಬಸ್ನಿಂದ ಇಳಿಸಲ್ಪಟ್ಟ ಸೆಲ್ವಂ ಕನ್ಯಾಕುಮಾರಿ(Kanyakumari) ಜಿಲ್ಲೆಯ ಕುಲಚಲ್ ಸಮೀಪದ ವನಿಯಕುಡಿ( Vaniyakudi) ಗ್ರಾಮದವರಾಗಿದ್ದು. ಈ ಗ್ರಾಮದಲ್ಲಿ ಮೀನಿನ ಮಾರಾಟವೇ ಪ್ರಮುಖ ಕಸುಬಾಗಿದೆ. ದಿನವೂ ಕೆರೆಗೆ ತೆರಳುವ ಇವರು ಅಲ್ಲಿಂದ ಮೀನುಗಳನ್ನು ಹಿಡಿದು ತಂದು ಮಾರಾಟ ಮಾಡುತ್ತಿದ್ದರು. ದಿನ ಬೆಳಗ್ಗೆ ಕೆರೆಯ ಬಳಿಯಿಂದ ಮೀನನ್ನು ತಲೆಯಲ್ಲಿ ಹೊತ್ತು ತರುವ ಇವರು ನಂತರ ಅದನ್ನು ನಾಗರಕೊಯಿಲ್( Nagercoil)ನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಮೀನು ಮಾರಿ ರಾತ್ರಿ ವೇಳೆ ಇವರು ಮನೆಗೆ ಬರುತ್ತಿದ್ದರು. ಪ್ರತಿದಿನ ಇವರು ಮಹಿಳೆಯರಿಗೆ ಪ್ರಯಾಣಿಸಲು ಮೀಸಲಿರುವ ಉಚಿತ ಬಸ್ನಲ್ಲಿ ಮನೆಗೆ ಬರುತ್ತಿದ್ದರು.
ಘಟನೆ ನಡೆದಂದೂ ಕೂಡ ಅವರು ಎಂದಿನಂತೆಯೇ ಮೀನುಗಳನ್ನು ಮಾರಿ ಕುಲಚಲ್ ಬಸ್ ನಿಲ್ದಾಣದಲ್ಲಿ ನಾಗರಕೊಯಿಲ್ನಿಂದ ಕೊಡಿಮುನೈ(Kodimunai)ಗೆ ತೆರಳುವ ಬಸ್ನಲ್ಲಿ ಹತ್ತಿದ್ದರು. ಅಂದು ಇವರು ಬಸ್ ಹತ್ತುತ್ತಿದ್ದಂತೆ ಬಸ್ ನಿಲ್ಲಿಸಿದ ಬಸ್ ಚಾಲಕ ಇವರಿಗೆ ಮೀನು ವಾಸನೆ ಬರುತ್ತಿದ್ದೀರಿ ಬಸ್ನಿಂದ ಇಳಿಯಿರಿ ಎಂದಿದ್ದಾನೆ ಎಂದು ತಿಳಿದು ಬಂದಿದೆ.
ಇದರಿಂದ ಅಂದು ಮನೆಗೆ ತೆರಳದ ಸೆಲ್ವಂ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಮಾರನೇ ದಿನ ಸೀದಾ ಕುಲಚಲ್ ಬಸ್ ನಿಲ್ದಾಣದ ನಿಯಂತ್ರಕ ಕೊಠಡಿಗೆ ಬಂದ ಸೆಲ್ವಂ ಜೋರಾಗಿ ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನು ವಾಸನೆ ಬರುತ್ತಿದ್ದೇನೆ ಎಂದು ಬಸ್ನಿಂದ ಇಳಿಯಲು ಹೇಳುತ್ತಿದ್ದಾರೆ. ಹಾಗಿದ್ದರೆ ನಾನೇನು ವೈನಕುಡಿಗೆ ನಡೆದುಕೊಂಡು ಹೋಗಲೇ ಎಂದು ಪ್ರಶ್ನಿಸಿದ್ದಾರೆ. ಹೀಗೆ ಆಕ್ರೋ ವ್ಯಕ್ತಪಡಿಸಿದ ಆಕೆ ನಂತರ ಬಸ್ ನಿಲ್ದಾಣದ ಗೋಡೆಗೆ ಒರಗಿ ನಿಂತುಕೊಂಡರು. ಈ ದೃಶ್ಯವನ್ನು ಅಲ್ಲಿ ನಿಂತಿದ್ದ ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನಂತರ ಎಲ್ಲೆಡೆ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದು, ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಂತಹ ವಿಷಯ ತಿಳಿದು ಅಘಾತವಾಯಿತು. ಮೀನು ಮಾರುತ್ತಿದ್ದ ಮಹಿಳೆಯೊಬ್ಬರನ್ನು ಬಸ್ನಿಂದ ಇಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ. ನಾವೆಲ್ಲರೂ ವಿಶಾಲವಾದ ಮನಸ್ಸು ಹಾಗೂ ಹೃದಯವನ್ನು ಹೊಂದಿರಬೇಕು ಎಂದು ಅವರು ಹೇಳಿದರು.
Abandoned Parents : ಒಂಭತ್ತು ಮಕ್ಕಳಿದ್ದರೂ ಒಂಟಿಯಾದ 85 ವರ್ಷದ ವೃದ್ಧೆ!
ಹಾಗೆಯೇ ಸಾಮಾಜಿಕ ಹೋರಾಟಗಾರರು ಕೂಡ ಈ ವಿಡಿಯೋವನ್ನು ಗಮನಿಸಿದ್ದು, ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕುಮಾರಿ ಸರ್ಕಾರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕುಮಾರಿ ರಾಜ್ಯ ಸಾರಿಗೆ ಸಂಸ್ಥೆಯ ಜನರಲ್ ಮ್ಯಾನೇಜರ್ ಅರವಿಂದ್ ಉತ್ತರಾ(Arvind Uttara) ತನಿಖಾಧಿಕಾರಿ ಜೆರೋಲಿನ್ ಲಿಸ್ಬೆನ್ಸಿಂಗ್ ಸೀದಾ ಸಂತ್ರಸ್ತ ಮಹಿಳೆ ಸೆಲ್ವಂ ಮನೆಗೆ ಭೇಟಿ ನೀಡಿದ್ದು, ಘಟನೆಯ ವಿವರ ಪಡೆದು ಆರೋಪಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ಮಿಚೆಲ್(Michel), ಕಂಡಕ್ಟರ್ ಮಣಿಕಂಡನ್(Manikandan) ಹಾಗೂ ಕೀಪರ್ ಜಯಕುಮಾರ್(Jayakumar) ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.