Land For Job Scam: ಲಾಲೂ ಪ್ರಸಾದ್‌ ಯಾದವ್‌ಗೆ ಸೇರಿದ 15 ಸ್ಥಳಗಳಲ್ಲಿ ಇಡಿ ದಾಳಿ!

By Santosh NaikFirst Published Mar 10, 2023, 2:55 PM IST
Highlights

ದೆಹಲಿಯಲ್ಲಿರುವ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ಬಿಹಾರದ ಆರ್‌ಜೆಡಿ ನಾಯಕ ಮತ್ತು ಮಾಜಿ ಶಾಸಕ ಅಬು ದೋಜಾನಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ (ಮಾ.10): ಲ್ಯಾಂಡ್‌ ಫಾರ್‌ ಜಾಬ್‌ ಹಗರಣದಲ್ಲಿ ದೆಹಲಿ, ಎನ್‌ಸಿಆರ್‌ ಮತ್ತು ಬಿಹಾರದ ಅನೇಕ ಸ್ಥಳಗಳಲ್ಲಿ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಅನೇಕ ಸಂಬಂಧಿಕರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೊಡ್ಡ ಮಟ್ಟದ ದಾಳಿ ನಡೆಸಿದೆ. ದೆಹಲಿಯಲ್ಲಿರುವ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ಬಿಹಾರದ ಆರ್‌ಜೆಡಿ ನಾಯಕ ಮತ್ತು ಮಾಜಿ ಶಾಸಕ ಅಬು ದೋಜಾನಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ದೆಹಲಿ, ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌) ಮತ್ತು ಬಿಹಾರದಾದ್ಯಂತ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಇಡಿಯ ಹಲವು ತಂಡಗಳು ಈ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧಗಳನ್ನು ನಡೆಸಿದ್ದು, ಶಂಕಿತರು ಮತ್ತು ಉದ್ಯೋಗಕ್ಕಾಗಿ ಭೂ ಹಗರಣದ (ಲ್ಯಾಂಡ್‌ ಫಾರ್‌ ಜಾಬ್‌ ಸ್ಕ್ಯಾಮ್‌) ಫಲಾನುಭವಿಗಳ ಮನೆ ಮತ್ತು ಕಚೇರಿ ಆವರಣಗಳನ್ನು ಒಳಗೊಂಡಿತ್ತು.  ಈ ವಿಷಯದಲ್ಲಿ ಲಾಲು ಪ್ರಸಾದ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಜಾರಿ ನಿರ್ದೇಶನಾಲಯ   ಜಾರಿ ಪ್ರಕರಣದ ಮಾಹಿತಿ ವರದಿಯನ್ನು (ಇಸಿಐಆರ್) ಸಲ್ಲಿಕೆ ಮಾಡಿತ್ತು. ಅದರ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇಡಿ ಈ ಶೋಧ ಕಾರ್ಯಗಳನ್ನು ನಡೆಸಿದೆ.

ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಲಾಲು ಪ್ರಸಾದ್ ಅವರನ್ನು ಪ್ರಶ್ನಿಸಿದ ದಿನಗಳ ನಂತರ ಫೆಡರಲ್ ಏಜೆನ್ಸಿ ಈ ಶೋಧಗಳನ್ನು ನಡೆಸಿತು. ಸಿಬಿಐ ಮಂಗಳವಾರ ಲಾಲು ಪ್ರಸಾದ್ ಅವರನ್ನು ಎರಡು ಸೆಷನ್‌ಗಳಲ್ಲಿ ಸುಮಾರು ಐದು ಗಂಟೆಗಳ ಕಾಲ ಪ್ರಶ್ನೆ ಮಾಡಲಾಗಿದೆ. ಸಿಬಿಐ ಸೋಮವಾರ ಲಾಲು ಪ್ರಸಾದ್ ಅವರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ (ಬಿಹಾರ) ನಿವಾಸದಲ್ಲಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತು.

ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್‌: ರಾಬ್ಢಿ ದೇವಿ ವಿಚಾರಣೆ

ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲಾಲು ಪ್ರಸಾದ್, ರಾಬ್ರಿ ದೇವಿ ಮತ್ತು ಇತರ 14 ಜನರ ವಿರುದ್ಧ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ದೆಹಲಿ ನ್ಯಾಯಾಲಯವು ಕಳೆದ ತಿಂಗಳು ಲಾಲು ಪ್ರಸಾದ್ ಮತ್ತು ಇತರ ಆರೋಪಿಗಳಿಗೆ ಮಾರ್ಚ್ 15 ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ಮೂವರನ್ನು ಬಂಧಿಸಿದೆ--  ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದ ಭೋಲಾ ಯಾದವ್‌, ಈ ಹಗರಣದ ಫಲಾನುಭವಿ ಹಾಗೂ ರೈಲ್ವೇ ಉದ್ಯೋಗಿ ಹೃದಯಾನಂದ್ ಚೌಧರಿ, ಹಾಗೂ ಇನ್ನೊಬ್ಬ ಆಪಾದಿತ ಫಲಾನುಭವಿ ಧರ್ಮೇಂದ್ರ ರೈ ಅನ್ನು ಬಂಧನ ಮಾಡಿದೆ.

ಲಾಲೂ ಪ್ರಸಾದ್‌ ಯಾದವ್‌ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, ಮಗಳಿಂದಲೇ ಕಿಡ್ನಿ ದಾನ!

2004 ಮತ್ತು 2009 ರ ನಡುವೆ ಅವರು ರೈಲ್ವೆ ಸಚಿವರಾಗಿದ್ದಾಗ ಭಾರತೀಯ ರೈಲ್ವೇಯಲ್ಲಿ ಉದ್ಯೋಗಕ್ಕಾಗಿ ಲಾಲು ಪ್ರಸಾದ್ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಲಂಚದ ರೂಪದಲ್ಲಿ ಜಮೀನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು.

click me!