
ನವದೆಹಲಿ (ಮಾ.22): ಸಾಕಷ್ಟು ವಿಚಾರಣೆಯ ಬಳಿಕ ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರನ್ನು 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ. ಇಡೀ ಪ್ರಕರಣದ ಕಿಂಗ್ ಪಿನ್ ಅರವಿಂದ್ ಕೇಜ್ರಿವಾಲ್ ಅವರಾಗಿದ್ದಾರೆ ಹಾಗಾಗಿ ಇನ್ನಷ್ಟು ಅವರ ವಿಚಾರಣೆ ನಡೆಸಬೇಕಿರುವ ಕಾರಣ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇಡಿ ಕೋರ್ಟ್ಗೆ ಮನವಿ ಮಾಡಿತ್ತು. ಈ ಕುರಿತಾಗಿ ಶುಕ್ರವಾರ ಇಡೀ ದಿನ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೆ 7 ದಿನಗಳ ಕಾಲ ಕಸ್ಟಡಿಗೆ ನೀಡಲು ಒಪ್ಪಿಕೊಂಡಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ರಾತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಬಂಧನ ಮಾಡಿತ್ತು. ಶುಕ್ರವಾರ ಬೆಳಗ್ಗೆ ಅವರನ್ನು ರೋಸ್ ಅವೆನ್ಯು ಕೋರ್ಟ್ಗೆ ಹಾಜರುಪಡಿಸಿತ್ತು. ಇಡೀ ದಿನ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶೇ ಕಾವೇರಿ ಬವೇಜಾ ರಾತ್ರಿಯ ವೇಳೆಗೆ 7 ದಿನ ಕಸ್ಟಡಿಗೆ ನೀಡುವ ತೀರ್ಪು ನೀಡಿದರು. ಗುರುವಾರ ದೆಹಲಿ ಹೈಕೋರ್ಟ್ ಕೂಡ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯನ್ನು ನಿರಾಕರಿಸಿತ್ತು. ಇಡಿಯ ಬಲವಂತದ ಕ್ರಮದಿಂದ ವಿನಾಯಿತಿ ಕೋರಿ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದಕ್ಕೂ ಮುನ್ನ ಅರವಿಂದ್ ಕೇಜ್ರಿವಾಲ್ ಅವರು ಇಡಿ ಜಾರಿ ಮಾಡಿದ 9 ಸಮನ್ಸ್ಗಳಿಗೆ ಉತ್ತರ ನೀಡಿರಲಿಲ್ಲ. ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೆಹಲಿ ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ವಜಾ ಮಾಡಿ: ಹೈಕೋರ್ಟ್ಗೆ ಪಿಐಎಲ್ ಅರ್ಜಿ
ಏಜೆನ್ಸಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು 10 ದಿನಗಳ ಕಸ್ಟಡಿಗೆ ಕೋರಿದ್ದರು. ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ಹಗರಣದ "ಕಿಂಗ್ಪಿನ್" ಆಗಿದ್ದಾರೆ ಮತ್ತು ಇದು ಒಟ್ಟು 100 ಕೋಟಿ ರೂಪಾಯಿ ಮೊತ್ತದ ಹಗರಣವಾಗಿದೆ. ಗುರುವಾರ ರಾತ್ರಿ ಹುಡುಕಾಟದ ವೇಳೆಯೂ ಕೇಜ್ರಿವಾಲ್ ಸರಿಯಾದ ಮಾಹಿತಿಗಳನ್ನು ಅವರು ನೀಡಿಲ್ಲ ಎಂದು ಆರೋಪಿಸಲಾಗಿದೆ. ಅವರನ್ನು ವಿಚಾರಣೆ ಮಾಡುವ ಅಗತ್ಯವಿದೆ. ಹಣದ ಹಾದಿಯ ಬಗ್ಗೆ ತನಿಖೆ ಮಾಡಬೇಕಾಗಿದ್ದು, ಇದು ರಿಮಾಂಡ್ಗೆ ನೀಡಲು ಸೂಕ್ತವಾದ ಪ್ರಕರಣವಾಗಿದೆ ಎಂದು ವಾದಿಸಿದ್ದರು.
Kejriwal story: ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರಮುಖ ನಾಯಕ ಈಗ ಭ್ರಷ್ಟಾಚಾರದ ಕೇಸ್ನಲ್ಲೇ ಜೈಲು ಹಕ್ಕಿ
ಅರವಿಂದ್ ಕೇಜ್ರಿವಾಲ್ ಪರವಾಗಿ ಮೂವರು ಹಿರಿಯ ವಕೀಲರಾದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ವಿಕ್ರಮ್ ಚೌಧರಿ ಹಾಗೂ ರಮೇಶ್ ಗುಪ್ತಾ ಹಾಜರಿದ್ದರು. ಕೇಜ್ರಿವಾಲ್ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ತನಿಖೆ ನಡೆಸಲಾಗುತ್ತಿದೆ ಎಂದು ನಿನ್ನೆಯವರೆಗೂ ಹೈಕೋರ್ಟ್ನ ವಿಚಾರಣೆಯಲ್ಲಿ ಇಡಿ ಬಹಿರಂಗಪಡಿಸಿಲ್ಲ ಎಂದು ಸಿಂಗ್ವಿ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧನದ ಮಿತಿ ತುಂಬಾ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ