
ನವದೆಹಲಿ (ಸೆ.19): ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ, ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧವನ್ನು 'ವೆರಿ ಗುಡ್; ಎಂದು ಬಣ್ಣಿಸಿದ್ದಾರೆ. ನಾನು ಭಾರತಕ್ಕೆ ಹಾಗೂ ಪ್ರಧಶನಿ ನರೇಂದ್ರ ಮೋದಿ ಅವರಿಗೆ ತುಂಬಾ ಆಪ್ತನಾಗಿದ್ದೇನೆ. ಹಿಂದಿನ ದಿನ ಅವರೊಂದಿಗೆ ನಾನು ಮಾತನಾಡಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ನಮ್ಮ ನಡುವೆ ಉತ್ತಮ ಸಂಬಂಧವಿದೆ' ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ ಡೊನಾಲ್ಡ್ ಟ್ರಂಪ್ ಶುಭಾಶಯ ಹೇಳಿದ ಒಂದು ದಿನದ ನಂತರ ಅವರ ಈ ಹೇಳಿಕೆ ಬಂದಿದೆ. ಇದೇ ವೇಳೆ ಭಾರತ-ಯುಎಸ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಪ್ರತಿಜ್ಞೆ ಮಾಡಿದರು. "ನಿಮ್ಮಂತೆಯೇ, ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ" ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದಿದ್ದರು.
ಇದಕ್ಕೆ ಪ್ರತಿಯಾಗಿ, ಡೊನಾಲ್ಡ್ ಟ್ರಂಪ್, ಟ್ರುತ್ ಸೋಶಿಯಲ್ನಲ್ಲಿ ತಮ್ಮ ವಿನಿಮಯವನ್ನು ಹೈಲೈಟ್ ಮಾಡಿ, "ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅದ್ಭುತವಾದ ಫೋನ್ ಕರೆ ಮಾಡಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ! ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ನರೇಂದ್ರ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!" ಎಂದು ಪೋಸ್ಟ್ ಮಾಡಿದ್ದಾರೆ.
ಯಾವುದೇ ದೇಶಕ್ಕೆ ಅನ್ವಯಿಸುವ ಕಠಿಣ ಕ್ರಮಗಳಲ್ಲಿ ಒಂದು ಎನ್ನುವಂತೆ, ಭಾರತೀಯ ಸರಕುಗಳ ಮೇಲೆ ಆಮದುಗಳ ಮೇಲೆ 50% ಸುಂಕ ಮತ್ತು ರಷ್ಯಾದ ತೈಲ ಖರೀದಿ ಕಾರಣಕ್ಕಾಗಿ ಭಾರತೀಯ ಖರೀದಿಗಳ ಮೇಲೆ 25% ಹೆಚ್ಚುವರಿ ಸುಂಕವನ್ನು ವಾಷಿಂಗ್ಟನ್ ಭಾರತಕ್ಕೆ ವಿಧಿಸಿತ್ತು. ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧ ಬಿಗಡಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಉಭಯ ದೇಶಗಳ ನಾಯಕರ ನಡುವೆ ಸಮಾಧಾನದ ಮಾತುಗಳು ಬಂದಿವೆ.
ಸುಂಕಗಳನ್ನು ಘೋಷಿಸಿದ ನಂತರ ಮೊದಲ ಬಾರಿಗೆ, ಮುಂದಿನ ಹಂತಗಳನ್ನು ರೂಪಿಸಲು ಎರಡೂ ಕಡೆಯ ಸಮಾಲೋಚಕರು ಈ ವಾರ ಭೇಟಿಯಾದರು. ಅಮೆರಿಕ "ಸಕಾರಾತ್ಮಕ" ಎಂದು ಬಣ್ಣಿಸಿದ ಈ ಮಾತುಕತೆಯನ್ನು ದ್ವಿಪಕ್ಷೀಯ ಚರ್ಚೆಗಳಲ್ಲಿ ಪುನಃಸ್ಥಾಪಿಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ. ವಿವಾದದ ಮಧ್ಯೆ, ಭಾರತ ಮತ್ತು ಅಮೆರಿಕ ಬಹುತೇಕ ವಾರಕ್ಕೊಮ್ಮೆ ವ್ಯಾಪಾರ, ಮಂತ್ರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ತೊಡಗಿಸಿಕೊಂಡಿವೆ. ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಐದು ಸುತ್ತಿನ ಮಾತುಕತೆಗಳು ಈಗಾಗಲೇ ಪೂರ್ಣಗೊಂಡಿವೆ, ಆದರೆ ಆಗಸ್ಟ್ 25–29ಕ್ಕೆ ಮೂಲತಃ ನಿಗದಿಯಾಗಿದ್ದ ಆರನೇ ಸುತ್ತಿನ ಮಾತುಕತೆಯನ್ನು ಸುಂಕ ಹೆಚ್ಚಳದ ನಂತರ ಮುಂದೂಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ