
ಪ್ರಕೃತಿ ಸೌಂದರ್ಯ ಝುಳು ಝುಳು ಹರಿಯುವ ನೀರು ದಣಿದ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ. ಅಂತಹ ಪ್ರದೇಶಗಳನ್ನು ಅರಸಿ ನಗರ ನಿವಾಸಿಗಳು ಪ್ರವಾಸ ಹೋಗುವುದು ಸಾಮಾನ್ಯ ಎನಿಸಿದೆ. ಈಗಂತೂ ಬಿರು ಬೇಸಿಗೆ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮನೆಯ ಒಳಗೂ ಕೂರಲಾಗದೇ ಹೊರಗೋ ಓಡಾಡಲಾಗದೇ ಜನ ಕಂಗೆಟ್ಟಿದ್ದಾರೆ. ಬೇಸಿಗೆಯ ರಜೆ ಬೇರೆ ಇದ್ದು, ಮಕ್ಕಳನ್ನು ನಿಯಂತ್ರಣ ಮಾಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಹಳ್ಳಿಯ ಮಕ್ಕಳು ಬೇಸಿಗೆ ರಜೆಗಳಲ್ಲಿ ಸಮೀಪದ ನೀರಿನ ಮೂಲಗಳನ್ನು ಅರಸಿ ಈಜಾಡಿ ಬೇಸಿಗೆಯ ದಣಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಪೇಟೆಯ ಮಕ್ಕಳಿಗೆ ಈ ಅವಕಾಶವಿಲ್ಲ. ಒಂದೋ ಬೇಸಿಗೆ ಶಿಬಿರಗಳನ್ನು ಅರಸಿ ಹೋಗಬೇಕು ಅಥವಾ ಮನೆಯಲ್ಲಿ ಅಪ್ಪ ಅಮ್ಮನ ಸ್ಮಾರ್ಟ್ಫೋನ್ಗೆ ಕಿತ್ತಾಡಬೇಕು. ಹೀಗಾಗಿ ಪಟ್ಟಣದ ಪೋಷಕರಿಗೆ ಮಕ್ಕಳನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸಾಹಸವಾಗಿದೆ.
ಮಕ್ಕಳನ್ನು ಸುಮ್ಮನಿರಿಸಲು ಅಥವಾ ಬೇಸಿಗೆಯ ದಾಹ ಧಗೆ ಇಳಿಸಿಕೊಳ್ಳಲು ನೀವೇನಾದರೂ ಬೇಸಿಗೆ ಟ್ರಿಪ್ ಪ್ಲಾನ್ ಮಾಡಿದ್ದರೆ ಈ ಸ್ಥಳಕ್ಕೆ ಹೋಗಲು ಮರೆಯದಿರಿ. ಅದ್ಯಾವ ಸ್ಥಳ ಅಂತೀರಾ ದೇವರನಾಡಿನ ಪ್ರವಾಸಿ ಸ್ಥಳ ಮುನಾರ್. ಏಕೆ ಅಲ್ಲಿಗೆ ಹೋಗ್ಬೇಕು ಅಂತ ಕೇಳ್ತಿದ್ದೀರಾ? ಏಕೆಂದರೆ ಅಲ್ಲಿನ ಪ್ರಕೃತಿ ಸೌಂದರ್ಯದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು., ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಈ ವಿಡಿಯೋವನ್ನು Siddharth Bakaria ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೇರಳ ಟ್ರಿಪ್ ಹೋಗೋ ಪ್ಲ್ಯಾನ್ ಇದ್ಯಾ? ಮುನ್ನಾರ್ನಲ್ಲಿ ಈ ಪ್ಲೇಸ್ ನೋಡಲು ಮರೀಬೇಡಿ!
ಡ್ರೋನ್ನಲ್ಲಿ ಸೆರೆ ಹಿಡಿದ ದೃಶ್ಯಾವಳಿ ಇದಾಗಿದೆ. ವಿಡಿಯೋದಲ್ಲಿ ಕಾಣಸುವಂತೆ ಹಸಿರು ಹೊದ್ದು ಮಲಗಿರುವ ಚಹಾ ತೋಟಗಳ ಮಧ್ಯೆ ರಸ್ತೆಯೊಂದು ಸಾಗಿದ್ದು, ಬೆಟ್ಟಗಳ ಮೇಲೆ ಸೂರ್ಯಾಸ್ತದ (Sunset) ದೃಶ್ಯ ಕಣ್ಮನ ಸೆಳೆಯುವಂತಿದೆ. ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳವು ತನ್ನ ಹಚ್ಚ ಹಸಿರಿನಿಂದ ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ದೊಡ್ಡ ಚಹಾ ತೋಟಗಳು ಮತ್ತು ಹಸಿರು ಬೆಟ್ಟಗಳು ಯಾವುದೇ ನಿಸರ್ಗ-ಪ್ರೇಮಿಗಳಿಗೆ ಒಂದು ದೃಶ್ಯಕಾವ್ಯವಾಗಿದೆ. ಹಾಗೆಯೇ ಈಗ ಮುನ್ನಾರ್ನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ.
ಈ ಸೌಂದರ್ಯವನ್ನು ವ್ಯಾಖ್ಯಾನಿಸಲು ಪದಗಳಿಲ್ಲ, ಕೇರಳದ (kerala)ಸ್ಥಳವನ್ನು ಊಹಿಸಿ ಎಂದು ಬರೆದು ಸಿದ್ಧಾರ್ಥ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅನೇಕರು ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದು, ಇದು ಯಾವ ಪ್ರದೇಶ ಎಂಬುದನ್ನು ತಿಳಿಸಿದ್ದಾರೆ. ಬಹಳಷ್ಟು ಜನರು ಈ ಸ್ಥಳವನ್ನು ಸರಿಯಾಗಿ ಊಹಿಸಿದ್ದಾರೆ. ಇದು ಮುನ್ನಾರ್ ಟು ತೆಕ್ಕಡಿ ಹ್ಯಾರಿಸನ್ಸ್ ಎಸ್ಟೇಟ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಇದು ದೇವರ ಸ್ವಂತ ನಾಡು ಎಂದು ಕಾಮೆಂಟ್ ಮಾಡಿದ್ದಾರೆ.
ದೇವರನಾಡಿನ ದೇವಿಕುಲಂನಲ್ಲಿದೆ ಸೀತೆ ಸ್ನಾನ ಮಾಡಿದ ಸರೋವರ
ಮತ್ತೆ ಅನೇಕರು ಈ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗರೀಕರಣವನ್ನು ಟೀಕಿಸಿದ್ದು, ನಿಮ್ಮ ಸುತ್ತಮುತ್ತಲ ಮರಗಿಡಗಳನ್ನು ಕಡಿಯಿರಿ, ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ, ಪರಿಸರವನ್ನು ನಾಶ ಮಾಡಿ, ನಂತರ ಕೇರಳಕ್ಕೆ ಬನ್ನಿ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಕೇರಳದ ಪ್ರಕೃತಿ ಸೌಂದರ್ಯದ ಹಲವು ವಿಡಿಯೋಗಳನ್ನು ಕಾಮೆಂಟ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಬರೀ ಕೇರಳ ಮಾತ್ರವಲ್ಲದೇ ಸಾಕಷ್ಟು ಪ್ರಾಕೃತಿಕ ವೈವಿಧ್ಯತೆಯನ್ನು (Nature Diversity) ಭಾರತ ಹೊಂದಿದೆ. ಇವು ಪ್ರವಾಸಿಗರನ್ನು ಮೂಕವಿಸ್ಮಿತರನಾಗಿಸಿದೆ. ಸಿದ್ಧಾರ್ಥ ಬಕರಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂತಹ ಪ್ರಕೃತಿ ಸೌಂದರ್ಯದಿಂದ ಕೂಡಿದ ದೇಶದ ವಿವಿಧ ಭಾಗಗಳ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ಒಂದಕ್ಕಿಂತ ಒಂದು ಪ್ರದೇಶ ನೋಡುಗರನ್ನು ವಿಸ್ಮಯಗೊಳಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ