
ಹೈದರಾಬಾದ್(ಮೇ.09): ತಿರುಮಲಕ್ಕೆ ಕರ್ನಾಟಕದಿಂದ ತೆರಳಿದ್ದ ವಾಹನಗಳ ಮೇಲಿದ್ದ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಫೋಟೋಗಳನ್ನು ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸಿಬ್ಬಂದಿ ತೆಗೆಸಿದ್ದು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಈ ಕುರಿತು ಟಿಟಿಡಿ ಸ್ಪಷ್ಟನೆ ನೀಡಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಯಾವುದೇ ಧರ್ಮದ ಚಿಹ್ನೆ, ದೇವರು, ವ್ಯಕ್ತಿ, ರಾಜಕೀಯ ನಾಯಕರ ಫೋಟೋ, ಪಕ್ಷದ ಧ್ವಜದಂತಹ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿದೆ.
‘ಈ ನಿಯಮವನ್ನು ಹಲವು ದಶಕಗಳಿಂದಲೂ ಟಿಟಿಡಿ ಜಾರಿ ಮಾಡಿಕೊಂಡು ಬಂದಿದೆ. ಆದರೆ ಇದರ ಬಗ್ಗೆ ಅರಿವಿಲ್ಲದ ಕೆಲವು ಭಕ್ತಾದಿಗಳು ತಮ್ಮ ಧರ್ಮ, ನೆಚ್ಚಿನ ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳ ಫೋಟೋಗಳು, ರಾಜಕೀಯ ಪಕ್ಷಗಳ ಧ್ವಜಗಳನ್ನು ವಾಹನಗಳಿಗೆ ಕಟ್ಟಿಕೊಂಡು ಬರುತ್ತಿದ್ದಾರೆ’ ಎಂದು ಟಿಟಿಡಿ ಹೇಳಿಕೆ ಬಿಡುಗಡೆ ಮಾಡಿದೆ.
‘ತಿರುಮಲ ಪ್ರವೇಶಕ್ಕೂ ಮುನ್ನ ಅಲಿಪಿರಿಯಲ್ಲಿ ವಾಹನ ತಪಾಸಣೆ ನಡೆಸುವ ಸಿಬ್ಬಂದಿ ಈ ನಿಯಮವನ್ನು ವಾಹನಗಳಲ್ಲಿ ಇರುವವರಿಗೆ ತಿಳಿಸುತ್ತಾರೆ. ಸ್ಟಿಕ್ಕರ್ ಹಾಗೂ ಧ್ವಜಗಳು ಟಿಟಿಡಿ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಅವನ್ನು ತೆಗೆಯಲು ಸೂಚನೆ ನೀಡುತ್ತಾರೆ. ಹೀಗಾಗಿ ದೇಗುಲದ ಈ ಮಹತ್ವದ ನಿಯಂತ್ರಣವನ್ನು ಭಕ್ತಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಆಡಳಿತ ಮಂಡಳಿ ಜತೆ ಸಹಕರಿಸಬೇಕು’ ಎಂದು ಮನವಿ ಮಾಡಿದೆ.
ಕೆಲ ವಾರಗಳ ಹಿಂದೆ ಬೆಂಗಳೂರಿನಿಂದ ತಿರುಮಲಕ್ಕೆ ಹೋಗುತ್ತಿದ್ದ ವಾಹನಗಳ ಮೇಲಿದ್ದ ಪುನೀತ್ ಭಾವಚಿತ್ರವನ್ನು ಟಿಟಿಡಿ ಸಿಬ್ಬಂದಿ ತೆಗೆಸಿದ್ದರು. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ, ಬೆಂಗಳೂರಿನ ಟಿಟಿಡಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ