ಲೋಕಸಭೆಯಲ್ಲಿ ಸೆಂಚುರಿ ಬಾರಿಸಿದ ಓಂ ಬಿರ್ಲಾ, ಡಿಕೆ ಸುರೇಶ್‌ ಸೇರಿದಂತೆ ಮೂವರ ಸಸ್ಪೆಂಡ್‌!

By Santosh NaikFirst Published Dec 21, 2023, 5:05 PM IST
Highlights

ಇದರೊಂದಿಗೆ, ಈಗ 146 ಸಂಸದರು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಂಡಿದ್ದಾರೆ. ಲೋಕಸಭೆಯಿಂದ 100 ಸಂಸದರು ಮತ್ತು ರಾಜ್ಯಸಭೆಯಿಂದ 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅದರೊಂದಿಗೆ ಸಂಸತ್‌ ಅಧಿವೇಶನವನ್ನು ಅನಿರ್ದಾಷ್ಟವಧಿಗೆ ಮುಂದೂಡಿಕೆ ಮಾಡಲಾಗಿದೆ.

ನವದೆಹಲಿ (ಡಿ.21): ಲೋಕಸಭೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಸೆಂಚುರಿ ಹೊಡೆದಿದ್ದಾರೆ. ಸಂಸತ್ತಿನಲ್ಲಿ ನಡೆಯುತ್ತಿರುವ ಅಮಾನತು ಗದ್ದಲದ ನಡುವೆ ಲೋಕಸಭೆ ಸ್ಪೀಕರ್‌ ಡಿಸೆಂಬರ್ 21ರ ಗುರುವಾರದಂದು ಪ್ರತಿಪಕ್ಷದ ಇನ್ನೂ ಮೂವರು ಸಂಸದರನ್ನು ಅಮಾನತುಗೊಳಿಸಿದರು. ಇದರಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್, ನಕುಲ್ ನಾಥ್ ಮತ್ತು ದೀಪಕ್ ಬೈಜ್ ಹೆಸರುಗಳು ಸೇರಿದ್ದವು. ಇದರೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಮಾನತುಗೊಂಡ ಸಂಸದರ ಸಂಖ್ಯೆ ಈಗ 146ಕ್ಕೆ ಏರಿದಂತಾಗಿದೆ. ಲೋಕಸಭೆಯಿಂದ 100 ಸಂಸದರು ಮತ್ತು ರಾಜ್ಯಸಭೆಯಿಂದ 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಬುಧವಾರ, ಇಬ್ಬರು ವಿರೋಧ ಪಕ್ಷದ ಸಂಸದರಾದ ಥಾಮಸ್ ಚಾಜಿಕಾಡನ್ ಮತ್ತು ಎಎಂ ಆರಿಫ್ ಅವರನ್ನು "ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ" ಕಾರಣಕ್ಕಾಗಿ ಲೋಕಸಭೆಯಿಂದ ಅಮಾನತುಗೊಳಿಸಲಾಯಿತು.

ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ,  ಡಿಸೆಂಬರ್ 15 ರಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸಂಸದರ ಅಮಾನತು ಪ್ರಕ್ರಿಯೆ ಆರಂಭವಾಯಿತು.

ಸಂಸತ್ತಿನ ಉಳಿದ ಚಳಿಗಾಲದ ಅಧಿವೇಶನಕ್ಕಾಗಿ ಡಿಸೆಂಬರ್ 14 ರಂದು ಕಾಂಗ್ರೆಸ್‌ನ ಐವರು ಸೇರಿದಂತೆ 14 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಕಾಂಗ್ರೆಸ್‌ನಿಂದ ಟಿಎನ್ ಪ್ರತಾಪನ್, ಹೈಬಿ ಈಡನ್, ಎಸ್ ಜೋತಿಮಣಿ, ರಮ್ಯಾ ಹರಿದಾಸ್, ಡೀನ್ ಕುರಿಯಾಕೋಸ್, ಬೆನ್ನಿ ಬೆಹನನ್, ವಿಕೆ ಶ್ರೀಕಂಠನ್, ಮೊಹಮ್ಮದ್ ಜಾವೇದ್ ಮತ್ತು ಮಾಣಿಕಂ ಟ್ಯಾಗೋರ್, ಡಿಎಂಕೆಯಿಂದ  ಕನಿಮೊಳಿ, ಎಸ್‌ಆರ್ ಪಾರ್ತಿಬನ್; ಸಿಪಿಐ-ಎಂನಿಂದ ಪಿಆರ್ ನಟರಾಜನ್, ಎಸ್ ವೆಂಕಟೇಶನ್ ಮತ್ತು ಸಿಪಿಐನಿಂದ ಕೆ ಸುಬ್ಬರಾಯನ್ ಅವರನ್ನು ಸಸ್ಪೆಂಡ್‌ ಮಾಡಲಾಗಿತ್ತು.

ಡಿಸೆಂಬರ್ 18 ರಂದು ಲೋಕಸಭೆಯ 45 ಸಂಸದರು ಮತ್ತು ರಾಜ್ಯಸಭೆಯ 33 ಸಂಸದರು ಸೇರಿದಂತೆ 78 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಮುಂದುವರಿದು, ಡಿಸೆಂಬರ್ 19 ರಂದು ಅಮಾನತಿನ ಮೂರನೇ ದಿನದಲ್ಲಿ, ಕೆಳಮನೆಯಿಂದ 49 ಸಂಸದರನ್ನು ಅಮಾನತುಗೊಳಿಸಲಾಯಿತು. ಅಲ್ಲದೆ, ಅಮಾನತುಗೊಂಡ ಸಂಸದರ 27 ಪ್ರಶ್ನೆಗಳನ್ನು ಲೋಕಸಭೆಯ ಪ್ರಶ್ನೆ ಪಟ್ಟಿಯಿಂದ ಅಳಿಸಲಾಗಿತ್ತು.

ಲೋಕಸಭೆಯಲ್ಲಿ ಮತ್ತಿಬ್ಬರು ಸಂಸದರು ಸಸ್ಪೆಂಡ್‌!

ಇನ್ನು ತಮ್ಮ ಅಮಾನತಿಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಿಕೆ ಸುರೇಶ್‌, ಪ್ರಜಾಪ್ರಭುತ್ವದ ದೇವಸ್ಥಾನದೊಳಗೆ ಕೆಲವರು ಅಕ್ರಮವಾಗಿ ದಾಳಿ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳು ಮಾತನಾಡಬೇಕು ಮತ್ತು ತನಿಖೆಯಲ್ಲಿ ಪಾಸ್ ನೀಡಿದವರನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದೇವೆ. ಇಲ್ಲಿ ಸಂಸದರಿಗೆ ರಕ್ಷಣೆ ಇಲ್ಲ, ಬೇರೆಯವರಿಗೆ ರಕ್ಷಣೆ ಹೇಗೆ ಎಂದು ಪ್ರಶ್ನೆ ಮಾಡಿದ್ದೆವು, ಪ್ರತಿಭಟನೆ ನಡೆಸಿದ ಸಂಸದರನ್ನು ಅಮಾನತು ಮಾಡಿದ್ದಾರೆ . ನಿಯಮಗಳನ್ನು ಗಾಳಿಗೆ ತೂರಿ ಅಮಾನತು ಮಾಡಿದ್ದಾರೆ. ಇದೊಂದು ದುರ್ದೈವದ‌ ಸಂಗತಿ ಎಂದು ಹೇಳಿದ್ದಾರೆ.

Mimicry Row: 'ನಾನು ಕೂಡ 20 ವರ್ಷ ಇಂಥ ಅವಮಾನ ಎದುರಿಸಿದ್ದೆ..' ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಟೀಕೆ

ನನ್ನನ್ನೂ ಇಂದು ಅಮಾನತು ಮಾಡಿದ್ದಾರೆ. ನಾವು ಮಾತನಾಡಲು ಸೂಕ್ತವಾದ ಅವಕಾಶ‌ ಕೇಳಿದ್ದೆವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಲೋಕಸಭೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದೆವು. ಇದಕ್ಕೆ ಸ್ಪೀಕರ್ ಅಸಮಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ಮೂವರನ್ನು ಅಮಾನತು ಮಾಡಿದ್ದಾರೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ. ಆಡಳಿತ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಹಿಂದೆ ಬಿಜೆಪಿ ನಾಯಕರು ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ‌ನಡೆಸಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ‌ಇಷ್ಟು ಜನರನ್ನು ಅಮಾನತು ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಹಿಂದೆ ನಮ್ಮನ್ನು ವ್ಯಂಗ್ಯ ಮಾಡುವಾಗ ಬಿಜೆಪಿ ನಾಯಕರು ಎಂಜಾಯ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

click me!