ಇಡೀ ದಿನ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಸಿಟ್ಟಿನಲ್ಲಿ ಇರುವಂತೆ ಕಾಣುತ್ತಿದೆ. ಇದು ನಿದ್ರೆ ಬರದೇ ಇರುವ ರೋಗದ ಲಕ್ಷಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿ (ಮಾ.23): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಮೋದಿ ಅವರಿಗೆ ಸ್ಲೀಪಿಂಗ್ ಸಿಕ್ನೆಸ್ ಇದೆ ಅಂದರೆ, ಅವರಿಗೆ ನಿದ್ರೆ ಬರದೇ ಇರುವ ರೋಗವಿದೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಮೋದಿ ಹಟಾವೋ ದೇಶ್ ಬಚಾವೋ ಸಮಾವೇಶವನ್ನು ನಡೆಸಿತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕೂಡ ಇದರಲ್ಲಿ ಹಾಜರಿದ್ದರು. ದೆಹಲಿಯ ಸಚಿವರಾದ ಗೋಪಾಲ್ ರೈ, ಸೌರಭ್ ಭಾರದ್ವಾಜ್, ಸಂಸದ ಸಣಜಯ್ ಸಿಂಗ್, ಸುಶೀಲ್ ಗುಪ್ತಾ ಮತ್ತು ಶಾಸಕಿ ರಾಖಿ ಬಿರ್ಲಾ ಕೂಡ ಕಾರ್ಯಕ್ರಮದಲ್ಲಿದ್ದರು. ಶಹೀದ್ ದಿವಸ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನರೇಂದ್ರ ಮೋದಿ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದರು. ಅವರಿಗೆ ನಿದ್ರೆ ಬರದೇ ಇರುವ ರೋಗವಿದೆ ಎಂದು ಹೇಳಿದರು.
ನಾನು ಬಿಜೆಪಿಯ ಕಾರ್ಯಕರ್ತರೊಂದಿಗೆ ಮಾತನಾಡಿದ್ದೇನೆ. ಅವರು ಪ್ರತಿ ಬಾರಿ ಹೇಳೋದಿಷ್ಟೇ ಮೋದಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕೇವಲ ಮೂರು ಗಂಟೆಗಳ ಕಾಲ ಮಾತ್ರವೇ ಅವರು ನಿದ್ರೆ ಮಾಡುತ್ತಾರೆ. ಕೇವಲ ಮೂರೇ ಗಂಟೆ ನಿದ್ರೆ ಮಾಡಿದರೆ, ದಿನಪೂರ್ತಿ ಉಳಿದ ಕೆಲಸಗಳನ್ನು ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಆತ ಮೋದಿ ಅವರಿಗೆ ದೈವಿಕ ಶಕ್ತಿಯಿದೆ ಎಂದು ಆತ ಹೇಳಿದ್ದ. ಇದಕ್ಕೆ ಉತ್ತರಿಸಿದ್ದ ನಾನು, ಇದನ್ನು ದೈವಿಕ ಶಕ್ತಿ ಎಂದು ಹೇಳೋದಿಲ್ಲ. ಸ್ಲೀಪಿಂಗ್ ಸಿಕ್ನೆಸ್ ಎನ್ನುತ್ತಾರೆ. ಅದಕ್ಕಾಗಿಯೇ ಪ್ರದಾನಿ ಇಡೀ ದಿನ ಪೂರ್ತಿ ಸಿಟ್ಟಿನಲ್ಲೇ ಇರುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮೋದಿ ತುರ್ತಾಗಿ ವೈದ್ಯರನ್ನು ಭೇಟಿ ಮಾಡಬೇಕು, ಔಷಧೋಪಚಾರ ಮಾಡಿಕೊಳ್ಳಬೇಕು. ನಿದ್ರೆಯ ಕೊರತೆಯಿಂದಾಗಿ ಅವರು ಕಿರಿಕಿರಿಗೊಂಡಿದ್ದಾರೆ ಮತ್ತು ಎಲ್ಲರನ್ನೂ ಜೈಲಿಗೆ ಹಾಕುತ್ತಿದ್ದಾರೆ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ಆರೋಗ್ಯವಾಗಿದ್ದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಅವರು ಸರಿಯಾಗಿ ನಿದ್ರೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಕಿರಿಕಿರಿಯಾಗುತ್ತದೆ. ಮೋದಿ ನಗೋದನ್ನು ನೀವು ಎಂದಾದರೂ ನೋಡಿದ್ದೀರಾ? ಪ್ರತಿ ದಿನ ಅವರಿಗೆ ಕಿರಿಕಿರಿಗಳೇ ಎದುರಾಗುತ್ತದೆ. ಕೋಪ ಬರುತ್ತಲೇ ಇರುತ್ತದೆ. ಪ್ರಧಾನಿ ಅವರ ಆರೋಗ್ಯ ಚೆನ್ನಾಗಿರಲಿ ಎಂದು ನಾನೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಮೋದಿ ಹಟಾವೋ-ದೇಶ್ ಬಚಾವೋ ಪೋಸ್ಟರ್ಗಾಗಿ ದೆಹಲಿಯಲ್ಲಿ ಆಪ್ನ ಕಾರ್ಯಕರ್ತರನ್ನು ಬಂಧಿಸಿರುವ ಕುರಿತಾಗಿ ಮಾತನಾಡಿದ ಕೇಜ್ರಿವಾಲ್, ಬ್ರಿಟಿಷ್ ರಾಜ್ನಲ್ಲೂ ಕೂಡ ಬರೀ ಪೋಸ್ಟರ್ಗಳನ್ನು ಅಂಟಿಸಿದ್ದಕ್ಕೆ ಎಫ್ಐಆರ್ಗಳನ್ನು ದಾಖಲು ಮಾಡುತ್ತಿರಲಿಲ್ಲ. ಆದರೆ, ಬ್ರಿಟಿಷರು ಭಾರತ ಬಿಟ್ಟು ತೊಲಗಿದ ಇಷ್ಟು ವರ್ಷಗಳ ಬಳಿಕ ಬರೀ ಪೋಸ್ಟರ್ಗಳನ್ನು ಹಾಕಿದ್ದಕ್ಕಾಗಿ 138 ಎಫ್ಐಆರ್ಗಳನ್ನು ದಾಖಲು ಮಾಡಲಾಗಿದ್ದಲ್ಲದೆ, ಕೆಲವರನ್ನು ಬಂಧಿಸಲಾಗಿದೆ ಎಂದಿದ್ದಾರೆ.
BJP वाला -
"Modi जी 18-18 घंटे काम करते हैं। सिर्फ़ 3 घंटे सोते हैं। उन्हें दैवीय शक्ति मिली हुई है।"
CM -
"पगले, उसे दैवीय शक्ति नहीं, नींद की बीमारी कहते हैं।
तभी मोदी जी चिड़चिड़े रहते हैं।" pic.twitter.com/Om9NgkUC0x
ಪ್ರಧಾನಿ ಮೋದಿ ವಿರುದ್ಧ ದೆಹಲಿಯಲ್ಲಿ ಪೋಸ್ಟರ್, 100 ಎಫ್ಐಆರ್ ದಾಖಲು!
ಕರ್ನಾಟಕ 40 ಪರ್ಸೆಂಟ್ ಸರ್ಕಾರ: ಕರ್ನಾಟಕ ಸರ್ಕಾರವನ್ನು 40% ಸರ್ಕಾರ ಎಂದು ಕರೆಯಲಾಗುತ್ತದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. "ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರ ಬರೆದು ಸಹಾಯ ಕೋರಿ, ಅಧಿಕಾರಿಗಳು ಮತ್ತು ಮಂತ್ರಿಗಳಿಗೆ 40% ಕಮಿಷನ್ ಕೊಡದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದರು. ಮೋದಿಜಿ ಬಿಜೆಪಿ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಿಗೆ ಅವರು ಸಂಘದ ಅಧ್ಯಕ್ಷರನ್ನೇ ಜೈಲಿಗೆ ಹಾಕಿದರು ಎಂದು ಆರೋಪಿಸಿದರು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಿಂದ 6 ಕೋಟಿ ರೂ. ದಾಳಿ ವೇಳೆ ವಶಪಡಿಸಿಕೊಂಡಿರುವ ವಿಷಯವನ್ನೂ ಅವರು ಪ್ರಸ್ತಾಪಿಸಿದರು.
Arvind Kejriwal: ರಾಜ್ಯದಲ್ಲಿ ಆಪ್ ಖಾತೆ ತೆರೆಯಲು ದೆಹಲಿ ಮಾದರಿಯಲ್ಲಿ ತಂತ್ರಗಾರಿಕೆ!
ಬಿಜೆಪಿ ಶಾಸಕರ ಮನೆಯಲ್ಲಿ 8 ಕೋಟಿ ರೂ. ಪತ್ತೆಯಾಗಿದೆ, ಆದರೆ ಅವರನ್ನು ಬಂಧಿಸಲಾಗಿಲ್ಲ, ಮರುದಿನ ಅವರಿಗೆ ಜಾಮೀನು ಸಿಕ್ಕಿತು. ಆದರೆ ಮನೀಶ್ ಸಿಸೋಡಿಯಾ ಅಥವಾ ಸತ್ಯೇಂದ್ರ ಜೈನ್ ಅವರ ಮನೆಯಲ್ಲಿ ಒಂದು ರೂಪಾಯಿಯೂ ಸಿಕ್ಕಿಲ್ಲ. ಆದರೂ ಅವರು ಜೈಲಿನಲ್ಲಿದ್ದಾರೆ ಎಂದರು.