ದೆಹಲಿ ಸ್ಫೋಟ ತನಿಖೆ ವೇಳೆ ಆತಂಕಕಾರಿ ಮಾಹಿತಿ ಬಯಲಿಗೆ : 32 ಕಾರಲ್ಲಿ 4 ನಗರ ಸ್ಫೋಟಕ್ಕೆ ಯತ್ನ

Kannadaprabha News   | Kannada Prabha
Published : Nov 14, 2025, 04:27 AM IST
Dr Umar Un Nabi

ಸಾರಾಂಶ

ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ಹಿಂದಿನ ‘ಟೆರರ್‌ ಡಾಕ್ಟರ್‌’ ಜಾಲವು 4 ನಗರಗಳಲ್ಲಿ 8 ಜನರನ್ನು ಬಳಸಿಕೊಂಡು 32 ವಾಹನಗಳ ಮೂಲಕ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿತ್ತು.

ನವದೆಹಲಿ: ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ಹಿಂದಿನ ‘ಟೆರರ್‌ ಡಾಕ್ಟರ್‌’ ಜಾಲವು 4 ನಗರಗಳಲ್ಲಿ 8 ಜನರನ್ನು ಬಳಸಿಕೊಂಡು 32 ವಾಹನಗಳ ಮೂಲಕ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿತ್ತು. ಆದರೆ ಕಾಶ್ಮೀರಿ ಪೊಲೀಸರ ಭಾರೀ ಕಾರ್ಯಾಚರಣೆ ಈ ಬಹುದೊಡ್ಡ ಸಂಚನ್ನು ವಿಫಲಗೊಳಿಸಿತು. ಒಂದು ವೇಳೆ 3 ಟನ್‌ನಷ್ಟು ಮಾರಕ ಸ್ಫೋಟಕ ವಸ್ತುಗಳನ್ನು ಬಳಸಿ ದುಷ್ಕೃತ್ಯ ನಡೆಸಿದ್ದೇ ಆಗಿದ್ದಲ್ಲಿ ಸಾವಿರಾರು ಜನರ ಪ್ರಾಣಹರಣ ಖಚಿತವಾಗಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ಉಗ್ರರು ಒಟ್ಟು 8 ಜನರನ್ನು ಬಳಸಿಕೊಂಡು 4 ನಗರಗಳಲ್ಲಿ ಕೃತ್ಯ ಎಸಗಲು ನಿರ್ಧರಿಸಿದ್ದರು. ಇದಕ್ಕಾಗಿ 32 ಕಾರುಗಳನ್ನು ಬಳಸಿಕೊಳ್ಳುವ ಉದ್ದೇಶವಿತ್ತು. ಇದಕ್ಕೆಂದೇ ಮೊದಲ ಹಂತದಲ್ಲಿ ಹ್ಯುಂಡೈ 20 ಮತ್ತು ಫೋರ್ಡ್ ಇಕೋ ಸ್ಪೋರ್ಟ್‌ ಕಾರನ್ನು ಸ್ಫೋಟಕ ಸಾಗಣೆಗೆ ಅನುಕೂಲವಾಗುವಂತೆ ಬದಲಾವಣೆಗೆ ಮುಂದಾಗಿದ್ದರು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಇದೀಗ ಸರಣಿ ಸ್ಫೋಟಕ್ಕಾಗಿ ಬೇರಿನ್ಯಾವ ಕಾರುಗಳನ್ನು ಇದೇ ರೀತಿ ಸಿದ್ಧಪಡಿಸಲಾಗುತ್ತಿತ್ತು ಎಂಬ ಕುರಿತು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ತಲಾ ಇಬ್ಬರ ತಂಡ:

ತನಿಖಾ ಸಂಸ್ಥೆಗಳ ಪ್ರಕಾರ, ಉಗ್ರರನ್ನು ತಲಾ ಇಬ್ಬರಂತೆ ವಿಂಗಡಿಸಲಾಗಿತ್ತು. ಅವರಿಗೆ ನಿರ್ದಿಷ್ಟ ಪ್ರಮಾಣದ ಸ್ಫೋಟಕ ವಸ್ತುಗಳೊಂದಿಗೆ ತಮಗೆ ವಹಿಸಿದ ನಗರಗಳಿಗೆ ತೆರಳಲು ಸೂಚಿಸಲಾಗಿತ್ತು. ಪ್ರತಿ ಗುಂಪು ಒಂದಕ್ಕಿಂತ ಹೆಚ್ಚು ಸುಧಾರಿತ ಸ್ಫೋಟಕಗಳು(ಐಇಡಿ)ಗಳನ್ನು ಸಾಗಿಸಬೇಕಿತ್ತು. ಈ ಮೂಲಕ ಏಕಕಾಲದಲ್ಲಿ ನಾಲ್ಕು ನಗರಗಳಲ್ಲಿ 32 ವಾಹನ ಬಳಸಿ ಸರಣಿ ಕಡೆ ಸ್ಫೋಟ ನಡೆಸಲು ನಿರ್ಧರಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸರಣಿ ಸ್ಫೋಟಕ್ಕಾಗಿ ಆರೋಪಿಗಳು 26 ಲಕ್ಷ ರು. ಸಂಗ್ರಹಿಸಿದ್ದು ಉಮರ್‌ಗೆ

ಸರಣಿ ಸ್ಫೋಟಕ್ಕಾಗಿ ಆರೋಪಿಗಳು 26 ಲಕ್ಷ ರು. ಸಂಗ್ರಹಿಸಿದ್ದು, ಈ ಹಣವನ್ನು ವೈದ್ಯ ಉಗ್ರ ಉಮರ್‌ಗೆ ನೀಡಲಾಗಿತ್ತು. 20 ಕ್ವಿಂಟಲ್‌ ಎನ್‌ಪಿಕೆ ಗೊಬ್ಬರ(ನೈಟ್ರೋಜನ್‌, ಫಾಸ್ಫರಸ್‌ ಮತ್ತು ಪೊಟ್ಯಾಸಿಯಂನ ಮಿಶ್ರಣ)ವನ್ನು 3 ಲಕ್ಷ ರು. ಕೊಟ್ಟು ಖರೀದಿಸಲಾಗಿತ್ತು. ಈ ಗೊಬ್ಬರ ಬಳಸಿ ವಿಧ್ವಂಸಕ ಕೃತ್ಯಕ್ಕಾಗಿ ಸ್ಫೋಟಕ ತಯಾರಿಸುವ ಉದ್ದೇಶವಿತ್ತು. ತಮ್ಮ ಈ ಚಟುವಟಿಕೆ ಗುಪ್ತವಾಗಿಡಲು ಉಗ್ರ ವೈದ್ಯ ಉಮರ್‌ ಖಾಸಗಿ ‘ಸಿಗ್ನಲ್‌’ ಆ್ಯಪ್‌ ಬಳಸಿ ಗ್ರೂಪ್‌ ಅನ್ನೂ ಮಾಡಿಕೊಂಡಿದ್ದ ಎಂಬುದೂ ಇದೇ ವೇಳೆ ಬಯಲಾಗಿದೆ.

ಸದ್ಯ ಪೊಲೀಸರ ವಶದಲ್ಲಿರುವ ಉಗ್ರ ವೈದ್ಯ ಮುಜಾಮ್ಮಿಲ್‌ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಸಹಸಂಘಟನೆ ಅನ್ಸಾರ್‌ ಗಜ್ವಾ ಉಲ್‌ ಹಿಂದ್‌ನ ಭಾಗವಾಗಿದ್ದ. 2021 ಮತ್ತು 2022ರ ನಡುವೆ ಆತ ಇತರೆ ಉಗ್ರರ ಸಂಪರ್ಕಕ್ಕೆ ಬಂದಿದ್ದ. ನಂತರ ಮುಜಾಮ್ಮಿಲ್‌ನನ್ನು ಕಾಶ್ಮೀರ ಮೂಲದ ಇರ್ಫಾನ್‌ ಅಹಮ್ಮದ್‌ ಅಲಿಯಾಸ್‌ ಇರ್ಫಾನ್‌ ಮೌಲ್ವಿಗೆ ಪರಿಚಯಿಸಲಾಗಿತ್ತು. 2023 ಮತ್ತು 2024ರಲ್ಲಿ ದೆಹಲಿಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕ ಸ್ವತಂತ್ರ ಉಗ್ರ ಸಂಘಟನೆ ರಚಿಸುವ ಉದ್ದೇಶದಿಂದಲೇ ಸಂಗ್ರಹಿಸಲಾಗಿತ್ತು ಎಂಬುದು ಇದೀಗ ಖಚಿತವಾಗಿದೆ. ದೆಹಲಿ ಸ್ಫೋಟದ ಬಳಿಕ ಕಾಶ್ಮೀರದಲ್ಲಿ ಇರ್ಫಾಲ್‌ ಮೌಲ್ವಿಯನ್ನು ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್