Deep Sidhu Death :  ಮೃತ ದೀಪ್‌ ಸಿಧು ಕಾರಲ್ಲಿ ಮದ್ಯದ ಬಾಟಲಿ, ನಶೆಯೇ ಕುತ್ತು ತಂತಾ?

By Kannadaprabha NewsFirst Published Feb 17, 2022, 3:02 AM IST
Highlights

* ಮೃತ ದೀಪ್‌ ಸಿಧು ಕಾರಲ್ಲಿ ಮದ್ಯ ಬಾಟಲಿ ಪತ್ತೆ

* ಮದ್ಯಪಾನದಿಂದಲೇ ಅಪಘಾತ ಸಾಧ್ಯತೆ

*  ಈ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ: ಸ್ನೇಹಿತರು

ಸೋನಿಪತ್‌ (ಹರ್ಯಾಣ)(ಫೆ. 17)  ರೈತ ಹೋರಾಟಕ್ಕೆ ಬೆಂಬಲಿಸಿದ್ದ ಪಂಜಾಬಿ (Punjab) ನಟ, ಗಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್‌ ಸಿಧು (Deep Sidhu ) ಅವರ ಸಾವಿಗೆ ಕಾರಣವಾದ ರಸ್ತೆ ಅಪಘಾತ (Road Accident) ಪ್ರಕರಣವು ಇದೀಗ ತಿರುವು ಪಡೆದುಕೊಂಡಿದೆ. ಅವರು ಚಾಲನೆ ಮಾಡುತ್ತಿದ್ದ ಕಾರಿನಲ್ಲಿ (Car) ಮದ್ಯದ (Liquor) ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ಸಿಧು ಮದ್ಯ ಸೇವನೆ ಮಾಡಿದ್ದರಿಂದಲೇ ಈ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ನಟನ ಜತೆ ಕಾರಿನಲ್ಲಿದ್ದ ಆತನ ಸ್ನೇಹಿತೆ ಅನಿವಾಸಿ ಭಾರತೀಯಳಾದ ರೀನಾ ರಾಯ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ನಡುವೆ ಈ ಪ್ರಕರಣ ಸಂಬಂಧ ದೀಪ್‌ ಅವರ ಸೋದರ ಸರ್ಜೀತ್‌ ಅವರು ಟ್ರಕ್‌ ಚಾಲಕನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ‘ಈ ರಸ್ತೆ ದುರಂತ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಬದಲಿಗೆ ಅವರನ್ನು ಕೊಲೆಗೈಯ್ಯುವ ಉದ್ದೇಶದ ಪೂರ್ವ ನಿಯೋಜಿತ ಕೃತ್ಯ’ ಎಂದು ದೀಪ್‌ ಸಿಧು ಅವರ ಸ್ನೇಹಿತರು ಆರೋಪಿಸಿದ್ದಾರೆ.

ನಟ ದೀಪ್ ಸಿಧು ಅಪಘಾತದಲ್ಲಿ ನಿಧನ, ಜೊತೆಗಿದ್ದ ಯುವತಿ ಯಾರು? 

ಮಂಗಳವಾರ ರಾತ್ರಿ ಕುಂಡ್ಲಿ-ಮಾನೆಸರ್‌-ಪಲ್ವಾಲ್‌(ಕೆಎಂಪಿ) ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ದೀಪ್‌ ಸಿಧು ಅವರ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ದೀಪ್‌ ಸಿಧು ಅವರು ಸಾವಿಗೀಡಾಗಿದ್ದರು.

 ರೈತ ಆಂದೋಲನದ ಸಂದರ್ಭದಲ್ಲಿ 2021 ರ ಜನವರಿ 26 ರಂದು (ಗಣರಾಜ್ಯೋತ್ಸವ 2021) ಕೆಂಪು ಕೋಟೆಯ ಮೇಲೆ ಧ್ವಜವನ್ನು ಹಾರಿಸಿದ ಪ್ರಕರಣದಲ್ಲಿ ಹೆಸರು ಬಂದಿತ್ತು. ಬಂದಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದೀಪ್ ಸಿಧು, ಇದೇ ವಿಚಾರವಾಗಿ ಜೈಲು ಸೇರಬೇಕಾಯಿತು. ದೀಪ್ ಅಪಘಾತವಾದಾಗ ಅವರೊಂದಿಗೆ ರೀನಾ ರಾಯ್ ಎಂಬ ಯುವತಿ ಇದ್ದರು. ಅಪಘಾತದಲ್ಲಿ ಗಾಯಗೊಂಡ ರೀನಾ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. 

ದೀಪ್ ಸಿಧು ಸಾವಿನ ಸಂದರ್ಭದಲ್ಲಿ ಜೊತೆಗಿದ್ದ ರೀನಾ ರಾಯ್ ಖುದ್ದು ಓರ್ವ ಪಂಜಾಬಿ ನಟಿ. ಈಕೆ ದೀಪ್ ಸಿಧು ಅವರ ವಧು ಎಂದು ಹೇಳಲಾಗುತ್ತಿದೆ, ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೀನಾ ಮತ್ತು ದೀಪ್ ಅನೇಕ ಪಂಜಾಬಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದೀಪ್ ಸಿಧು ಮತ್ತು ರೀನಾ ರೈ ಮೊದಲಿಗೆ ಸ್ನೇಹಿತರಾಗಿದ್ದರು, ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಅವರು ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು. ಆದರೆ ಮದುವೆಗೆ ಮುಂಚೆಯೇ ದೀಪ್ ರೀನಾರಿಂದ ದೂರ, ಬಾರದ ಲೋಕಕ್ಕೆ ಹೋಗಿದ್ದಾರೆ. 

ರೀನಾ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಅಪಘಾತದ ಒಂದು ದಿನ ಮೊದಲು, ದೀಪ್ ಸಿಧು ಮತ್ತು ರೀನಾ ರಾಯ್ ಪ್ರೇಮಿಗಳ ದಿನವನ್ನು ಆಚರಿಸುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದು ಕೂಡ ವೈರಲ್ ಆಗಿತ್ತು. 

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತರ ಪ್ರತಿಭಟನೆಯಲ್ಲಿ ದೀಪ್ ಸಿಧು ಪಾಲ್ಗೊಂಡು ಬಂಧನಕ್ಕೊಳಗಾಗಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ರೈತರನ್ನು ಪ್ರಚೋಚಿಸಿದ್ದ ದೀಪ್ ಸಿಧು, 2021ರ ಜನವರಿ 26ರ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದುಕೊಳ್ಳುವಲ್ಲಿ ದೀಪ್ ಸಿಧು ಪಾತ್ರ ನಿರ್ವಹಿಸಿದ್ದರು ಅನ್ನೋ ಆರೋಪವಿದೆ. ಇಷ್ಟೇ ಅಲ್ಲ ರೈತರ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರ, ಕೆಂಪು ಕೋಟೆಯಲ್ಲಿ ದಾಂಧಲೆ ಹಾಗೂ ಕೆಂಪು ಕೋಟೆ ಮೇಲಿನ ರಾಷ್ಟ್ರಧ್ವಜ ಕಿತ್ತೆಸೆದು ಖಲಿಸ್ತಾನ ಸಿಖ್ ಧ್ವಜ ಹಾರಿಸಿ ದೇಶದ್ರೋಹ ಕೆಲಸ ಮಾಡಿದ ಆರೋಪವೂ ದೀಪ್ ಸಿಧು ಮೇಲಿದೆ. ಈ ಘಟನೆ ಕುರಿತು ದೆಹಲಿ ಪೊಲೀಸರು ಫೆಬ್ರವರಿ 9, 2021ರಂದು ದೀಪ್ ಸಿಧನನ್ನು ಬಂಧಿಸಿದ್ದರು. 

 

click me!