
ನವದೆಹಲಿ (ಮೇ.24): 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ (Karachi) ಎಂದು ಜಾರಿ ನಿರ್ದೇಶನಾಲಯ - ಇಡಿ (Enforcement Directorate -ED) ಮುಂದೆ ಆತನ ಸೋದರಳಿಯ ಅಲಿಶಾ ಪಾರ್ಕರ್ ಬಹಿರಂಗಪಡಿಸಿದ್ದಾನೆ. ಈ ಮೂಲಕ ನೂರಾರು ಭಾರತೀಯರನ್ನು ಕೊಂದ ಮತ್ತು ಭಾರತದ ವಿನಾಶ ಬಯಸಿದ ಭಯೋತ್ಪಾದಕರನ್ನು ನೆರೆಯ ದೇಶ ಪಾಕಿಸ್ತಾನ ಆಶ್ರಯಿಸಿದೆ ಎಂಬ ಭಾರತದ ವಾದಕ್ಕೆ ಬಲಬಂದಂತಾಗಿದೆ.
ಮಾತ್ರವಲ್ಲ ಹಬ್ಬ ಹರಿದಿನಗಳಲ್ಲಿ ದಾವೂದ್ನ ಪತ್ನಿಯನ್ನು ತನ್ನ ಕುಟುಂಬವು ಸ್ವಾಗತಿಸುತ್ತದೆ ಎಂದು ಅಲಿಶಾ ಪರ್ಕರ್ ಹೇಳಿಕೆ ನೀಡಿದ್ದಾನೆ. ದಾವೂದ್ ಇಬ್ರಾಹಿಂ 1986 ರ ಸುಮಾರಿಗೆ ಭಾರತವನ್ನು ತೊರೆದಿದ್ದ ಎಂದು ಇಡಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ದಾವೂದ್ ಇಬ್ರಾಹಿಂ ಕೂಡ ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಹಣಕಾಸುದಾರರಲ್ಲಿ ಒಬ್ಬನಾಗಿದ್ದಾನೆ.
ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲೇ ಹೆಚ್ಚು ಆವಾಜ್ SATISH JARKIHOLI
"ದಾವೂದ್ ಇಬ್ರಾಹಿಂ ನನ್ನ ತಾಯಿಯ ಚಿಕ್ಕಪ್ಪನಾಗಿದ್ದಾರೆ ಮತ್ತು ಅವರು 1986 ರವರೆಗೆ ದಕ್ಷಿಣ ಮುಂಬೈನ ದಂಬರ್ವಾಲಾ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂದು ನಾನು ವಿವಿಧ ಮೂಲಗಳು ಮತ್ತು ಸಂಬಂಧಿಕರಿಂದ ಕೇಳಿದ್ದೇನೆ" ಎಂದು ಸೋದರಳಿಯ ಅಲಿಶಾ ಹೇಳಿದ್ದಾನೆ.
ಅವರು ಕರಾಚಿಗೆ ಹೋದಾಗ ನಾನಿನ್ನು ಹುಟ್ಟಿರಲಿಲ್ಲ ಮತ್ತು ನಾನು ಹಾಗೂ ನನ್ನ ಕುಟುಂಬದ ಸದಸ್ಯರು ದಾವುದ್ ಜೊತೆಗೆ ಸಂಪರ್ಕದಲ್ಲಿಲ್ಲ ಎಂದಿದ್ದಾನೆ. ಕೆಲವು ಸಂದರ್ಭದಲ್ಲಿ, ಈದ್, ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ, ಶ್ರೀಮತಿ ಮೆಹಜಬೀನ್ ದಾವೂದ್ ಇಬ್ರಾಹಿಂ ಅವರು ನನ್ನ ಚಿಕ್ಕಮ್ಮ ಮತ್ತು ನನ್ನ ತಾಯಿಯ ಚಿಕ್ಕಪ್ಪ, ನನ್ನ ಹೆಂಡತಿ ಆಯೇಷಾ ಮತ್ತು ನನ್ನ ಸಹೋದರಿಯರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದ್ದಾನೆ.
ನನ್ನ ಹುಡುಗಿ ಜೊತೆಗೆ ಮದುವೆ ಮಾಡಿಸೆಂದು ಬಾಳೆ ಹಣ್ಣಿನಲ್ಲಿ ದೇವರಿಗೆ ಬೇಡಿಕೆ ಇಟ್ಟ ಭಕ್ತ!
ಇಬ್ಬರು ಸಹಚರರ ಬಂಧನ: ಕಳೆದ ಮೇ.12ರಂದು ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನ ಇಬ್ಬರು ಸಹಚರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿತ್ತು. ಬಂಧಿತ ಆರೋಪಿಗಳನ್ನು ಆರೀಫ್ ಅಬೂಬಕರ್ ಶೇಖ್ (59 ವರ್ಷ) ಮತ್ತು ಶಬ್ಬೀರ್ ಅಬೂಬಕರ್ ಶೇಖ್ (51 ವರ್ಷ) ಎಂದು ಗುರುತಿಸಲಾಗಿತ್ತು. ಇವರಿಬ್ಬರೂ ಸಹೋದರರಾಗಿದ್ದರು.
ಮುಂಬೈನ ಪಶ್ಚಿಮ ಭಾಗದಲ್ಲಿ ದಾವೂದ್ನ ಅಕ್ರಮ ಚಟುವಟಿಕೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವಲ್ಲಿ ಶೇಖ್ ಸಹೋದರರು ಎಂದು ಕರೆಯಲ್ಪಡುವ ಇಬ್ಬರೂ ಭಾಗಿಯಾಗಿದ್ದಾರೆ ಎಂದು ಎನ್ಐಎ ಹಿರಿಯ ಅಧಿಕಾರಿ ತಿಳಿಸಿದ್ದರು.
ಮುಂಬೈಯ ಅನೇಕ ಕಡೆಗಳಲ್ಲಿ ದಾವೂದ್ ಇಬ್ರಾಹಿಂ ಸಹಚರರ ಮತ್ತು ಹವಾಲಾ ದಂದೆ ನಡೆಸುವವರ ಮೇಲೆ ಕೆಲ ದಿನಗಳ ಹಿಂದಷ್ಟೇ ಎನ್ಐಎ ದಾಳಿ ನಡೆಸಿತ್ತು. ನಾಗಪದ, ಗೋರ್ಗಾಂವ್, ಬೊರಿವಲಿ, ಸಂತಾಕ್ರೂಜ್, ಮುಂಬ್ರಾ, ಭೆಂದಿ ಬಜಾರ್ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಫೆಬ್ರುವರಿಯಲ್ಲಿ ದಾಖಲಿಸಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಈ ದಾಳಿ ನಡೆದಿತ್ತು.
2015 ರಲ್ಲೇ ಕರಾಚಿಯಲ್ಲಿರುವ ಬಗ್ಗೆ ಮಾಹಿತಿ: ಈ ಹಿಂದೆ ಅಂದರೆ 2015 ರಲ್ಲಿ ಭಾರತೀಯ ರಕ್ಷಣಾ ಇಲಾಖೆಯು ದಾವೂದ್ ಪತ್ನಿ, ಪುತ್ರ ಮೊಯೀನ್ ನವಾಜ್ ಹಾಗೂ ಇಬ್ಬರು ಪುತ್ರಿಯರಾದ ಮೆಹ್ರುಕ್ ಮತ್ತು ಮಜಿಯಾ ಎಲ್ಲರೂ ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದು, ದಾವೂದ್ ಪ್ರಸ್ತುತ ಕರಾಚಿಯ ನೆರೆ ಪ್ರದೇಶ ಕ್ಲಿಫ್ಟೋನ್ ನಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿಸಿತ್ತು. ರಕ್ಷಣಾ ಇಲಾಖೆಗೆ ಸಿಕ್ಕಿರುವ ಇನ್ನಷ್ಟು ಪುರಾವೆಗಳ ಪ್ರಕಾರ, ದಾವೂದ್ ಕುಟುಂಬ ಪಾಕಿಸ್ತಾನ ಮತ್ತು ದುಬೈ ನಡುವೆ ಪ್ರಯಾಣಿಸಿವೆ. ದಾವೂದ್ ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖದ ಚಹರೆಯನ್ನು ಬದಲಾಯಿಸಿಕೊಂಡಿದ್ದು, ಆತನ ಪಾಕಿಸ್ತಾನದ ಪಾಸ್ ಪೋರ್ಟ್ ನಲ್ಲಿ ಶೇಕ್ ದಾವೂದ್ ಹಸನ್ ಎಂದು ಹೆಸರಿದೆ ಎಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ