
ನವದೆಹಲಿ (ಅ. 16): ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆ ಬುಧವಾರ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿ ಅಂತಿಮ ತೀರ್ಪು ಪ್ರಕಟಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.
ಮಂಗಳವಾರ ನಡೆದ 40ನೇ ದಿನದ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶ ನ್ಯಾ. ರಂಜನ್ ಗೊಗೋಯ್ ಅವರು, ‘ಈ ಮುನ್ನ ಗುರುವಾರ ವಿಚಾರಣೆಯ ಅಂತಿಮ ದಿನಾಂಕ ನಿಗದಿ ಮಾಡಿದ್ದೆವು. ಆದರೆ ಬುಧವಾರವೇ ವಾದ-ಪ್ರತಿವಾದ ಪೂರ್ಣಗೊಳಿಸಿ. ನಾಳೆ ಸಂಜೆ 5ರವರೆಗೆ ಕಲಾಪ ನಡೆಸೋಣ’ ಎಂದು ಪ್ರಕರಣದಲ್ಲಿ ವಾದಿಸುತ್ತಿರುವ ವಿವಿಧ ಪಕ್ಷಗಳ ವಕೀಲರಿಗೆ ಸೂಚಿಸಿದರು. ಹೀಗಾಗಿ ನಿಗದಿತ ದಿನಾಂಕವಾಗಿದ್ದ ಅಕ್ಟೋಬರ್ 17ರ ಬದಲು ಅ.16ರಂದೇ ವಿಚಾರಣೆ ಮುಗಿವ ಸಾಧ್ಯತೆ ಇದೆ.
ಅಯೋಧ್ಯೆಯಲ್ಲಿ ಡಿ. 10 ರವರೆಗೆ ನಿಷೇಧಾಜ್ಞೆ
ಜನ್ಮಭೂಮಿ ಬದಲಿಸಲಾಗದು- ಪರಾಶರನ್:
ಈ ನಡುವೆ, ಹಿಂದೂ ಪಕ್ಷಗಳ ಪರ ವಾದಿಸಿದ ಹಿರಿಯ ವಕೀಲ ಕೆ. ಪರಾಶರನ್ ಅವರಿಗೆ ನ್ಯಾ ಗೊಗೋಯ್ ಅವರ ನೇತೃತ್ವದ ಪಂಚಸದಸ್ಯ ಪೀಠ ರಾಮಜನ್ಮಭೂಮಿ ಬಗ್ಗೆ ಸಾಕಷ್ಟುಪ್ರಶ್ನೆ ಹಾಕಿತು. ‘ಮಸೀದಿಯೆಂದರೆ ಮಸೀದಿ. ನೀವಿದನ್ನು ಒಪ್ಪುತ್ತೀರಾ’ ಎಂದು ಕೇಳಿತು. ಈ ಪ್ರಶ್ನೆಗಳಿಗೆ ಉತ್ತರಿಸಿದ ಪರಾಶರನ್, ‘ಇಲ್ಲ. ನಾನು ಒಪ್ಪಲ್ಲ. ಮಂದಿರ ಎಂದರೆ ಮಂದಿರ. ರಾಮಜನ್ಮಭೂಮಿ ಎಂದರೆ ರಾಮ ಜನಿಸಿದ ಸ್ಥಳ. ಈ ಸ್ಥಳದಲ್ಲಿದ್ದ ಮಂದಿರ ಧ್ವಂಸಗೊಳಿಸಿ ಮುಘಲ್ ದೊರೆ ಬಾಬರ್ ಪ್ರಮಾದ ಎಸಗಿದ್ದ. ಈ ಐತಿಹಾಸಿಕ ಪ್ರಮಾದವನ್ನು ಈಗ ಸರಿಪಡಿಸಬೇಕು. ಜನ್ಮಸ್ಥಳವನ್ನು ಬದಲಿಸಲು ಆಗದು. ಹೀಗಾಗಿ ಅದೇ ಸ್ಥಳದಲ್ಲಿ ಮಂದಿರ ಇರಬೇಕು. ಮುಸ್ಲಿಮರು ಬೇರೆ ಮಸೀದಿಗಳಲ್ಲಿ ಕೂಡ ಪ್ರಾರ್ಥನೆ ಸಲ್ಲಿಸಬಹುದು. ಅಯೋಧ್ಯೆಯಲ್ಲಿ 55-60 ಮಸೀದಿಗಳಿವೆ’ ಎಂದು ವಾದಿಸಿದರು.
ಈ ನಡುವೆ, ಪರಾಶರನ್ ಅವರಿಗೆ ಸಾಕಷ್ಟುಪ್ರಶ್ನೆ ಕೇಳುವ ಸಂದರ್ಭದಲ್ಲಿ, ‘ಹಿಂದೂ ಪಕ್ಷಗಳಿಗೂ ಕೋರ್ಟು ಸಾಕಷ್ಟುಪ್ರಶ್ನೆಗಳನ್ನು ಕೇಳುತ್ತಿದೆ’ ಎಂದು ಮುಸ್ಲಿಂ ಪಕ್ಷಗಳ ಪರ ವಕೀಲ ರಾಜೀವ್ ಧವನ್ ಅವರನ್ನು ಉದ್ದೇಶಿಸಿ ಹಾಸ್ಯ ಶೈಲಿಯಲ್ಲಿ ಹೇಳಿದರು. ಸೋಮವಾರದ ವಿಚಾರಣೆ ವೇಳೆ, ‘ಕೋರ್ಟು ಬರೀ ಮುಸ್ಲಿಂ ಪಕ್ಷಗಳಿಗೆ ಪ್ರಶ್ನೆ ಕೇಳುತ್ತಿದೆ’ ಎಂದು ಧವನ್ ಆಕ್ಷೇಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ