
ಚೆನ್ನೈ: ಶ್ರೀಲಂಕಾ ಕರಾವಳಿಯಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ದಿತ್ವಾ ಚಂಡಮಾರುತವು ನ.30ರಂದು ಭಾರತದ ಕರಾವಳಿಗೆ ಅಪ್ಪಳಿಸುವ ಸಂಭವವಿದೆ. ನ.30ರಂದು ತಮಿಳುನಾಡಿನ ಉತ್ತರ ಭಾಗ, ಪುದುಚೇರಿ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಭಾಗದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶುಕ್ರವಾರ ಕಾರೈಕಲ್ನಿಂದ 320 ಕಿ.ಮೀ. ಆಗ್ನೇಯ, ಪುದುಚೇರಿಯ 430 ಕಿ.ಮೀ. ಆಗ್ನೇಯ ಮತ್ತು ಚೆನ್ನೈನಿಂದ 530 ಕಿ.ಮೀ. ದಕ್ಷಿಣದಲ್ಲಿ ಚಂಡಮಾರುತವಿದೆ. ಇದು ಶ್ರೀಲಂಕಾ ಕರಾವಳಿ ಮತ್ತು ಬಂಗಾಳ ಕೊಲ್ಲಿಯ ನೈಋತ್ಯ ಭಾಗದ ಮೂಲಕ ಉತ್ತರ ಮತ್ತು ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಯೆಮೆನ್ ಈ ಚಂಡಮಾರುತಕ್ಕೆ ‘ದಿತ್ವಾ’ ಎಂಬ ಹೆಸರಿಟ್ಟಿದೆ.
ಕೊಲಂಬೋ: ಬಂಗಾಳಕೊಲ್ಲಿಯಲ್ಲಿ ತಲೆ ಎತ್ತಿರುವ ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾ ಅಕ್ಷರಶಃ ತತ್ತರಿಸಿದೆ. ದಿತ್ವಾದಿಂದಾಗಿ 56 ಜನರು ಅಸುನೀಗಿದ್ದು, 21 ಜನರು ಕಾಣೆಯಾಗಿದ್ದಾರೆ.
ಇಲ್ಲಿನ ಪೂರ್ವ ಕರಾವಳಿಯ ಟ್ರಿಂಕೋಮಲೀ ಪ್ರಾಂತ್ಯದ ಸಮೀಪದಲ್ಲಿ ಕೇಂದ್ರೀಕೃತವಾಗಿರುವ ದಿತ್ವಾದಿಂದಾಗಿ ಗಾಲೆ, ಬಡುಲ್ಲಾ, ಮಟಾರಾ ಸೇರಿ ಹಲವು ಪ್ರದೇಶಗಳು ತತ್ತರಿಸಿವೆ. 12,313 ಕುಟುಂಬಗಳು ಬಾಧಿತವಾಗಿದ್ದು, 43,991 ಜನರು ಅತಂತ್ರಕ್ಕೆ ಸಿಲುಕಿದ್ದಾರೆ. ಕೊಲಂಬೋಗೆ ಬರಬೇಕಿದ್ದ ಹಲವು ವಿಮಾನಗಳನ್ನು ಭಾರತದ ಕೊಚ್ಚಿ ಮತ್ತು ತಿರುವನಂತಪುರ ಮತ್ತು ಲಂಕಾದ ಮಟ್ಟಾಲಾ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ,
ಇದೇ ವೇಳೆ, ಲಂಕಾದಲ್ಲಿ ಸಂಪೂರ್ಣ ರೈಲು ಸೇವೆ ನಿಲ್ಲಿಸಲಾಗಿದೆ. ಹಲವು ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿವೆ.
ನವದೆಹಲಿ: ಸಂಕಷ್ಟಕ್ಕೆ ಸಿಲುಕಿರುವ ಲಂಕಾಗೆ ಸಹಾಯಹಸ್ತವಾಗಿ ಭಾರತ ಸರ್ಕಾರ ’ಆಪರೇಷನ್ ಸಾಗರಬಂಧು’ ಘೋಷಿಸಿದೆ. ಇದರಡಿ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿ ಮೂಲಕ ಪರಿಹಾರ ಸಾಮಗ್ರಿಗಳನ್ನು ಕೊಲಂಬೋಗೆ ಕಳಿಸಿಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ, ‘ಆಪರೇಷನ್ ಸಾಗರಬಂಧು’ ಅಡಿ ಭಾರತವು ಲಂಕೆಗೆ ಸಹಾಯ ಮಾಡಲಿದೆ ಎಂದಿದ್ದಾರೆ.
ಥಾಯ್ಲೆಂಡ್ ಭೀಕರ ಪ್ರವಾಹಕ್ಕೆ 145 ಬಲಿ
ಬ್ಯಾಂಕಾಕ್: ಥಾಯ್ಲೆಂಡ್ನ ದಕ್ಷಿಣ ಪ್ರಾಂತ್ಯಗಳಲ್ಲಿ ಕಂಡು ಕೇಳರಿಯದ ಪ್ರವಾಹ ಪರಿಸ್ಥಿತಿಗೆ 145 ಮಂದಿ ಸಾವನ್ನಪ್ಪಿದ್ದಾರೆ.
ಕಳೆದೊಂದು ವಾರದಿಂದ ಪ್ರವಾಹ ಸ್ಥಿತಿಯೂ ಹಾಗೆಯೇ ಮುಂದುವರಿದಿದ್ದು, 12 ಪ್ರಾಂತ್ಯಗಳ 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲಸೌಕರ್ಯ ವ್ಯವಸ್ಥೆಗಳು ಬಾಧಿತವಾಗಿದ್ದು, ವಾಹನ ಸಂಚಾರ ಏರುಪೇರಾಗಿದೆ. ಸಾವಿರಾರು ಮನೆಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿವೆ.
ಮತ್ತೊಂದೆಡೆ ಸೊಂಖ್ಲಾ ಎಂಬ ಒಂದೇ ಪ್ರಾಂತ್ಯದಲ್ಲಿ 110 ಜನರು ಪ್ರಾಣ ಬಿಟ್ಟಿದ್ದಾರೆ ಎಂಬ ವರದಿಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಎಂಬ ಮಾತಿನಂತೆ ಮುಂದೆ ಇನ್ನು ದೊಡ್ಡ ಚಂಡಮಾರುತದ ಭೀತಿಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ನಡುವೆ, ಶುಕ್ರವಾರ ನೀರು ಕೊಂಚ ಕಡಿಮೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ