
- ಸಿಡಬ್ಲ್ಯುಆರ್ಸಿ, ಸಿಡಬ್ಲ್ಯುಎಂಎ ಎರಡೂ ಸಭೆ ನಿಗದಿ
ನವದೆಹಲಿ (ಸೆ.8) ಮುಂಗಾರು ಮಳೆ ಕೊರತೆ, ಬರ ಪರಿಸ್ಥಿತಿ ನಡುವೆಯೇ ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚಿಸಲು ದೆಹಲಿಯಲ್ಲಿ ಮಂಗಳವಾರ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯುಆರ್ಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ)ದ ಸಭೆಗಳು ನಡೆಯಲಿವೆ.
ಬೆಳಗ್ಗೆ 11 ಗಂಟೆಗೆ ಸಿಡಬ್ಲ್ಯುಆರ್ಸಿ ಸಭೆ ನಡೆದರೆ, ಮಧ್ಯಾಹ್ನ 3 ಗಂಟೆಗೆ ಪ್ರಾಧಿಕಾರದ ಸಭೆ ನಡೆಯಲಿದೆ. ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಸಭೆಗಳು ನಡೆಯಲಿವೆ. ಸಿಡಬ್ಲ್ಯುಆರ್ಸಿ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಭಾಗಿಯಾಗಲಿದ್ದಾರೆ. ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ಎಸಿಎಸ್ ಗೌರವಗುಪ್ತಾ ವಹಿಸಲಿದ್ದಾರೆ.
ರಾಜ್ಯಕ್ಕೆ ಮುಂಗಾರು ಮಳೆಯ ದಿನಗಳು ಮುಗಿಯುತ್ತಿದ್ದು, ತಮಿಳುನಾಡಿಗೆ ಈಶಾನ್ಯ ಮಾರುತಗಳು ಅಕ್ಟೋಬರ್ ನಲ್ಲಿ ಶುರುವಾಗಲಿವೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಎದುರಾಗಿದ್ದು, ಜಲಾಶಯಗಳ ನೀರಿನ ಹರಿವು ಅರ್ಧಕ್ಕರ್ಧ ಕುಸಿದಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ಒಳಹರಿವು 20 ಸಾವಿರದಿಂದ 10 ಸಾವಿರ ಕ್ಯೂಸೆಕ್ ಗೆ ಕುಸಿದಿದೆ. ಈ ಮಧ್ಯೆ, ಮುಂದಿನ ಜುಲೈ ತನಕ ನಮಗೆ ಕುಡಿಯುವ ನೀರಿನ ಸಂಗ್ರಹದ ಅಗತ್ಯ ಇದ್ದು, ಇದಕ್ಕಾಗಿ 48 ಟಿಎಂಸಿ ನೀರು ಬೇಕಿದೆ.
ಕಾವೇರಿ ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದ ಎಲ್ಲಾ ಆದೇಶಗಳನ್ನು ಪಾಲಿಸಿದ್ದೇವೆ. ಸಂಕಷ್ಟದ ಸಮಯದಲ್ಲೂ ಈತನಕ 32ಕ್ಕೂ ಹೆಚ್ಚು ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಈಗ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ವಾಸ್ತವ ಪರಿಸ್ಥಿತಿ ನೋಡಿ, ಆದೇಶ ಮಾಡಿ ಎಂದು ಕರ್ನಾಟಕ ವಾದ ಮಂಡಿಸುವ ಸಾಧ್ಯತೆಯಿದೆ. ತಮಿಳುನಾಡು ಎಂದಿನಂತೆ ಬಾಕಿ ನೀರು ಬಿಡುಗಡೆಗೆ ಒತ್ತಾಯಿಸುವ ಸಾಧ್ಯತೆಯಿದೆ.
ಈ ಹಿಂದಿನ ಸಭೆಯಲ್ಲಿ ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಮಿತಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ಗಳು ಎತ್ತಿ ಹಿಡಿದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ