
ರಾಯ್ಪುರ (ಮೇ.6): ಛತ್ತೀಸ್ಗಢ-ತೆಲಂಗಾಣ ಗಡಿಯ ಕೆಜಿಹೆಚ್ ಬೆಟ್ಟಗಳಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಹಾಯಕ ಕಮಾಂಡೆಂಟ್ ಸಾಗರ್ ಬೋರಾಡೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮೇಲೆ ಕಾಲಿಟ್ಟ ಪರಿಣಾಮ ಆದ ಬ್ಲಾಸ್ಟ್ನಿಂದ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದಾರೆ.
ಸಿಆರ್ಪಿಎಫ್ನ ಅಗ್ರ 204 ಕೋಬ್ರಾ ಬೆಟಾಲಿಯನ್ ನೇತೃತ್ವದ ಈ ಕಾರ್ಯಾಚರಣೆಯಲ್ಲಿ, ಐಇಡಿ ಸ್ಫೋಟದಲ್ಲಿ ಒಬ್ಬ ಯೋಧ ಗಾಯಗೊಂಡಿದ್ದರು. ತಂಡವನ್ನು ಮುನ್ನಡೆಸುತ್ತಿದ್ದ ಬೋರಾಡೆ, ತಮ್ಮ ಸುರಕ್ಷತೆಯನ್ನು ಲೆಕ್ಕಿಸದೆ ಗಾಯಗೊಂಡ ಯೋಧನನ್ನು ಸ್ಥಳಾಂತರಿಸಲು ಮುಂದಾಗಿದ್ದರು. ಕೆಜಿಹೆಚ್ ಬೆಟ್ಟಗಳು ಹಲವಾರು ಮೋಸ್ಟ್ ವಾಂಟೆಂಡ್ ನಕ್ಸಲ್ ನಾಯಕರಿಗೆ ಅಡಗುತಾಣವಾಗಿದೆ. ಮತ್ತು ಈ ಪ್ರದೇಶವು ದಟ್ಟವಾದ ಕಾಡುಗಳಿಂದ ಕೂಡಿದ್ದು, ನಕ್ಸಲರು ಹೆಜ್ಜೆ ಹೆಜ್ಜೆಗೂ ಮಾರಣಾಂತಿಕ ಐಇಡಿಗಳನ್ನು ನೆಲದಡಿಯಲ್ಲಿ ತುಂಬಿ ಇಟ್ಟಿದ್ದಾರೆ.
ತಮ್ಮ ತಂಡದ ಸುರಕ್ಷತೆಗೆ ಆದ್ಯತೆ ನೀಡಿ ಮತ್ತು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಬೋರಾಡೆ, ಸ್ಥಳಾಂತರಿಸುವ ಪ್ರಯತ್ನದ ಸಮಯದಲ್ಲಿ ಐಇಡಿ ಮೇಲೆ ಕಾಲಿಟ್ಟಿದ್ದರು. ಇದರಿಂದ ಉಂಟಾದ ಬ್ಲಾಸ್ಟ್ನಲ್ಲಿ ಅವರ ಎಡಗಾಲು ಸಂಪೂರ್ಣವಾಗಿ ಚೆಲ್ಲಾಪಿಲ್ಲಿಯಾಗಿತ್ತು. ಅವರನ್ನು ತಕ್ಷಣವೇ ರಾಯ್ಪುರಕ್ಕೆ ಸ್ಥಳಾಂತರಿಸಲಾದರೆ, ನಂತರ ದೆಹಲಿಗೆ ಏರ್ಲಿಫ್ಟ್ ಕೂಡ ಮಾಡಲಾಗಿತ್ತು. ಆದರೆ, ಸೋಂಕು ಹರಡುವುದನ್ನು ತಡೆಯಲು ಅವರ ಎಡಗಾಲನ್ನು ಕತ್ತರಿಸಬೇಕಾದ ಅನಿವಾರ್ಯತೆಗೆ ವೈದ್ಯರು ಸಿಲುಕಿದ್ದರು.
ಪ್ರಸ್ತುತ, ಸಹಾಯಕ ಕಮಾಂಡೆಂಟ್ ಸಾಗರ್ ಬೋರಾಡೆ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಮತ್ತು ನಿಕಟ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಅವರ ಧೈರ್ಯ, ನಾಯಕತ್ವ ಮತ್ತು ಕರ್ತವ್ಯ ಪ್ರಜ್ಞೆ ಭಾರತದ ಭದ್ರತಾ ಪಡೆಗಳ ಅದಮ್ಯ ಚೈತನ್ಯದ ಉದಾಹರಣೆಯಾಗಿದೆ.
ಈ ನಡುವೆ ಕೆಜಿಹೆಚ್ ಬೆಟ್ಟಗಳಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಭದ್ರತಾ ಪಡೆಗಳು ಈ ಅತ್ಯಂತ ಅಪಾಯಕಾರಿ ಮತ್ತು ಐಇಡಿಗಳಿಂದ ತುಂಬಿರುವ ಕಾಡುಗಳಲ್ಲಿ ನಕ್ಸಲ್ ಅಡಗುತಾಣಗಳನ್ನು ಹುಡುಕುತ್ತಿವೆ.
ಭದ್ರತಾ ಪಡೆಗಳು 2026 ರ ಮಾರ್ಚ್ ವೇಳೆಗೆ ಮಾವೋವಾದಿ ಪಡೆಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿ ತೀವ್ರವಾದ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಕಾರ್ಯಾಚರಣೆ 2 ವಾರಗಳಿಂದ ನಡೆಯುತ್ತಿದೆ. ಏಪ್ರಿಲ್ 29 ರಂದು, ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ಭದ್ರತಾ ಪಡೆಗಳಿಗೆ ಧನ್ಯವಾದ ಅರ್ಪಿಸಿದರು.
"ನಾವು ಎಲ್ಲಾ ಇಲಾಖೆಗಳ ವಿಮರ್ಶಾ ಸಭೆಗಳನ್ನು ನಡೆಸುತ್ತೇವೆ. ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ನಕ್ಸಲ್ ಕಾರ್ಯಾಚರಣೆಯ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ, ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ಭದ್ರತಾ ಪಡೆಗಳಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ," ಎಂದು ಸಾಯಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಕರೆಗುಟ್ಟ ಬೆಟ್ಟಗಳನ್ನು ಒಳಗೊಂಡಂತೆ ಛತ್ತೀಸ್ಗಢ-ತೆಲಂಗಾಣ ಗಡಿಯ ಬಳಿ 800 ಚದರ ಕಿಮೀ ವಿಸ್ತೀರ್ಣದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಛತ್ತೀಸ್ಗಢ ಮತ್ತು ಕೇಂದ್ರ ಪಡೆಗಳ 24,000 ಕ್ಕೂ ಹೆಚ್ಚು ಸಿಬ್ಬಂದಿ ನೇರವಾಗಿ ಅಥವಾ ಪರೋಕ್ಷವಾಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ