ಕೊರೋನಾ ಪೀಡಿತರ ಮೇಲೆ ಮಾರಕ ‘ಬ್ಲ್ಯಾಕ್‌ ಫಂಗಸ್‌’ ದಾಳಿ!

Published : Dec 20, 2020, 07:20 AM IST
ಕೊರೋನಾ ಪೀಡಿತರ ಮೇಲೆ ಮಾರಕ ‘ಬ್ಲ್ಯಾಕ್‌ ಫಂಗಸ್‌’ ದಾಳಿ!

ಸಾರಾಂಶ

ಕೊರೋನಾಪೀಡಿತರ ಮೇಲೆ ಮಾರಕ ‘ಬ್ಲ್ಯಾಕ್‌ ಫಂಗಸ್‌’ ದಾಳಿ!| ಫಂಗಸ್‌ ದಾಳಿಗೆ ಒಳಗಾದ ಹಲವರಿಗೆ ದೃಷ್ಟಿದೋಷ| ಮುಂಬೈ, ದಿಲ್ಲಿ, ಅಹ್ಮದಾಬಾದಲ್ಲಿ 60 ಕೇಸ್‌, 13 ಸಾವು

ನವದೆಹಲಿ(ಡಿ.20): ದೇಶದಲ್ಲಿ ಕೊರೋನಾ ಸೋಂಕು ಇನ್ನೇನು ಇಳಿಮುಖವಾಗುತ್ತಿದೆ ಎಂಬ ಹೊತ್ತಿನಲ್ಲೇ, ಕೊರೋನಾ ಸೋಂಕಿತರನ್ನು ಬ್ಲ್ಯಾಕ್‌ ಫಂಗಸ್‌ ಎಂಬ ಮತ್ತೊಂದು ಸೋಂಕು ಮಾರಕವಾಗಿ ಕಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 60ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು 13 ಜನರನ್ನು ಬಲಿಪಡೆದಿದೆ. ಜೊತೆಗೆ ರೋಗಕ್ಕೆ ತುತ್ತಾದವರು ಕಣ್ಣಿನ ದೃಷ್ಟಿಕಳೆದುಕೊಳ್ಳುತ್ತಿರುವುದು ಖಚಿತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದು ಅಂಟುರೋಗವಲ್ಲ. ಅಂದರೆ ಮಾನವರಿಂದ ಮಾನವರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹಬ್ಬದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮ್ಯುಕೋರ್‌ಮೈಕೋಸಿಸ್‌ ಎಂದು ಕರೆಯಲಾಗುವ ಅಪರೂಪದ, ಆದರೆ ಅಷ್ಟೇ ಮಾರಕ ಸ್ವರೂಪದ ಈ ಸೋಂಕು ಹೊಸದಲ್ಲವಾದರೂ, ಕೊರೋನಾ ಕಾಲದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಅದರಲ್ಲೂ ಕೊರೋನಾ ಸೋಂಕಿತರು ಮತ್ತು ಈಗಷ್ಟೇ ಸೋಂಕಿನಿಂದ ಚೇತರಿಸಿಕೊಂಡವರ ಮೇಲೇ ಹೆಚ್ಚು ದಾಳಿ ನಡೆಸುತ್ತಿರುವ ಕಾರಣ ಅದರ ಪ್ರಭಾವ ಅತ್ಯಂತ ಹೆಚ್ಚಾಗಿ ಕಂಡುಬರುತ್ತಿದೆ.

ಕಳೆದ ಕೆಲ ದಿನಗಳಲ್ಲಿ ಈ ಸೋಂಕಿಗೆ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಮತ್ತು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಪೈಕಿ ಹಲವರು ದೃಷ್ಟಿಕಳೆದುಕೊಂಡಿದ್ದಾರೆ.

ಈ ಸೋಂಕು ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆ ಇದೆಯಾದರೂ, ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದರ ಪ್ರಭಾವ ಹೆಚ್ಚಾಗಿರುತ್ತದೆ. ಉಸಿರಾಟದ ವೇಳೆ ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸೋಂಕು, ಬಳಿಕ ಇಡೀ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಆರಂಭದಲ್ಲೇ ಸೋಂಕು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. 2005ರ ವರದಿಯ ಪ್ರಕಾರ ಸೋಂಕಿಗೆ ತುತ್ತಾದವರಲ್ಲಿ ಶೇ.54ರಷ್ಟುಜನರು ಸಾವನ್ನಪ್ಪುವ ಸಾಧ್ಯತೆ ಇದೆ.

ಲಕ್ಷಣಗಳು ಏನೇನು?

ಕಣ್ಣಿನ ಊತ, ಮುಖದ ಒಂದು ಭಾಗ ಊತ, ಮೂಗು ಕಟ್ಟಿಕೊಳ್ಳುವುದು, ಸಿಂಬಳ ಕಪ್ಪುಬಣ್ಣಕ್ಕೆ ತಿರುಗುವುದು, ತಲೆನೋವು, ಜ್ವರ, ಕಫ, ಎದೆನೋವು, ಉಸಿರಾಟದ ತೊಂದರೆ.

ರಕ್ಷಣೆ ಹೇಗೆ?:

ಮಾಸ್ಕ್‌ ತೊಡುವುದು, ಸಾಮಾಜಿಕ ಅಂತರ ಕಾಪಾಡುವುದು, ಆಗಾಗ್ಗೆ ಕೈತೊಳೆದುಕೊಳ್ಳುವುದು.

ಚಿಕಿತ್ಸೆ ಏನು?

ಸೂಕ್ತ ವೈದ್ಯರ ಬಳಿಗೆ ತೆರಳಿ ಆ್ಯಂಟಿ ಫಂಗಲ್‌ ಚಿಕಿತ್ಸೆ ಪಡೆದುಕೊಳ್ಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ