Karnataka Fights Corona: 'ಸೋಂಕು ನಿಯಂತ್ರಣ: ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ!'

By Kannadaprabha NewsFirst Published Dec 6, 2021, 9:45 AM IST
Highlights

* ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ  ಇತರೆ ರಾಜ್ಯಗಳು ಅನುಸರಿಸಲಿ

* ಸೋಂಕು ನಿಯಂತ್ರಣ: ರಾಜ್ಯ ಬೆಸ್ಟ್‌

* ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಡಾ.ಸುಭಾಷ್ ಸಾಲುಂಖೆ ಮೆಚ್ಚು

ನವದೆಹಲಿ(ಡಿ.06): ದೇಶಾದ್ಯಂತ ಒಮಿಕ್ರೋನ್ (Omicron) ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಈ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಕರ್ನಾಟಕ (Karnataka) ಕೈಗೊಂಡಿರುವ ಕ್ರಮಗಳು ಇಡೀ ದೇಶಕ್ಕೆ ಮಾದರಿ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ದೇಶದ ಇತರೆ ಎಲ್ಲಾ ರಾಜ್ಯಗಳು ಪಾಲಿಸಬೇಕು ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಸುಭಾಷ್ ಸಾಲುಂಖೆ (Task Force Member Dr Subhash Salunkhe) ಪ್ರತಿಪಾದಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದು ಭಾರತ ದಲ್ಲಿ ತೀವ್ರಗೊಳ್ಳದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಕುರಿತಾಗಿ ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸುಭಾಷ್ ‘ಕರ್ನಾಟಕದಲ್ಲಿ ಕೈಗೊಂಡಿರುವ ರೀತಿಯ ಕ್ರಮಗಳನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು. ಜತೆಗೆ ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳನ್ನು ಲೋಪವಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸಬೇಕು

ಹೀಗಾದಾಗ ಒಮಿಕ್ರೋನ್ ವೈರಸ್ ಅನ್ನು ನಿಯಂತ್ರಿಸಬಹುದು’ ಎಂದು ಹೇಳಿದರು. ಅಲ್ಲದೆ ‘ಒಮಿಕ್ರೋನ್‌ನ ಮೂಲಸ್ಥಾನವಾದ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಮಂದಿಗೆ ಈ ವೈರಸ್ ಹರಡುತ್ತಿದೆ. ಆದಾಗ್ಯೂ, ಈ ವೈರಸ್‌ಗೆ ತೀವ್ರ ಅನಾರೋಗ್ಯಕ್ಕೀಡಾದ ಮತ್ತು ಸಾವಿಗೀಡಾದವರ ಸಂಖ್ಯೆ ನಿಯಂತ್ರಣ ದಲ್ಲೇ ಇರುವುದು ಸಮಾಧಾನಕರ. ಹಾಗೆಂದು ನಾವು ಮೈಮರೆಯುವಂತಿಲ್ಲ. ಅತಿಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಒಳಗೊಂಡಿರುವ ಮುಂಬೈನಂಥ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು’ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಕೈಗೊಂಡ ಕ್ರಮ

* ಏರ್‌ಪೋರ್ಟ್‌ಗಳಲ್ಲಿ ಅಂ.ರಾ ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆ

* ನೆಗೆಟಿವ್ ಬಂದರಷ್ಟೇ ವಿಮಾನ ನಿಲ್ದಾಣಗಳಿಂದ ಹೊರಗೆ ತೆರಳಲು ಅವಕಾಶ

* ಮಾಸ್ಕ್ ಧರಿಸದಿದ್ದರೆ ದಂಡ, ಆಕ್ಸಿಜನ್, ಐಸಿಯು ಬೆಡ್ ಸಿದ್ಧತೆ, ಪ್ರತೀ ನಿತ್ಯ 1 ಲಕ್ಷ ಕೋವಿಡ್ ಪರೀಕ್ಷೆ ಗುರಿ, ಸೋಂಕು ನಿಯಂತ್ರಣಕ್ಕೆ 18 ಸಾವಿರ ದಾದಿಯರಿಗೆ ಒಂದು ತಿಂಗಳು ತರಬೇತಿ.

2022ರ ಜನವರಿಯೊಳಗೆ ಲಸಿಕಾಕರಣ ಪೂರ್ಣ

ರಾಜ್ಯದಲ್ಲಿ 2022ರ ಜನವರಿ ವೇಳೆಗೆ ಲಸಿಕಾಕರಣದಲ್ಲಿ (vaccination) ಶೇ.100 ರಷ್ಟು ಪ್ರಗತಿ ಸಾಧಿಸಲಿದ್ದೇವೆ. ಆಗ ಯಾವುದೇ ಪ್ರಭೇದ ಬಂದರೂ ತೊಂದರೆಯಾಗದಂತೆ ಕ್ರಮ ವಹಿಸಬಹುದು. ಅಲ್ಲಿಯವರೆಗೂ ಜನ ಜಾಗೃತಿಯಿಂದ ಇರಬೇಕು ಎಂದು ರಾಜ್ಯ ಆರೋಗ್ಯ (Health Minister) ಸಚಿವ ಡಾ.ಕೆ.ಸುಧಾಕರ್‌ (Sudhakar) ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ (Chikkaballapura) ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರದವರೆಗೆ ಶೇ.93ರಷ್ಟು ಮೊದಲ ಡೋಸ್‌ (Dose) ಆಗಿದೆ. ಶೇ.64ರಷ್ಟು ಜನ ಎರಡು ಡೋಸ್‌ ಲಸಿಕೆ (vaccine)  ಪಡೆದಿದ್ದಾರೆ. ಲಸಿಕಾಕರಣದಲ್ಲಿ ಕರ್ನಾಟಕ (karnataka) ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜನತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಮುಂದಿನ ದಿನಗಳಲ್ಲಿ ಎದುರಾಗುವ ಅನಾಹುತ ನಿಯಂತ್ರಿಸಬಹುದಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಒಮಿಕ್ರೋನ್‌ (Omicron) ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಮದ (karnataka Govt) ಉತ್ತಮ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ, ಪತ್ತೆ ಸೇರಿದಂತೆ ಎಲ್ಲ ವಿಷಯದಲ್ಲೂ ವಿಶೇಷವಾಗಿ ಗಮನಿಸುತ್ತಿದ್ದೇವೆ. ಯಾವುದೇ ಕಾರ್ಯಕ್ರಮಗಳಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಬಾರದೆಂದು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.

ಮೊಟ್ಟೆ ಸೇವನೆ ಬಲವಂತ ಇಲ್ಲ

ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ (Egg) ನೀಡುತ್ತಿರುವುದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ನಾವು ಯಾರಿಗೂ ಒತ್ತಾಯಪೂರ್ವಕವಾಗಿ ಏನನ್ನೂ ನೀಡಲು ಆಗುವುದಿಲ್ಲ. ಮಕ್ಕಳ ಆರೋಗ್ಯಕ್ಕೆ ಹಾಗೂ ದೈಹಿಕ ಬೆಳವಣಿಗೆಗೆ ಸರ್ಕಾರ ಮೊಟ್ಟೆ, ಹಾಲನ್ನು ನೀಡುತ್ತಿದೆ. ಕೆಲವರು ಹಾಲನ್ನು, ಮೊಸರನ್ನು ಸ್ವೀಕರಿಸುವುದಿಲ್ಲ. ಅವರನ್ನು ವೇಗನ್ಸ… ಎನ್ನುತ್ತೇವೆ. ಇನ್ನು ಕೆಲವರನ್ನು ಎಗೆಟೇರಿಯನ್‌ ಎನ್ನುತ್ತಾರೆ. ಅವರವರ ಆಹಾರ ಪದ್ಧತಿ ಅವರಿಗೆ ಬಿಟ್ಟವಿಚಾರ. ಆದರೆ ತಿನ್ನಲೇಬೇಕು, ಕೊಡಲೇಬೇಕು ಎಂಬ ಭಾವನೆ ಸರ್ಕಾರದ ಮುಂದಿಲ್ಲ. ಧಾರ್ಮಿಕ, ಧರ್ಮದ ವಿಚಾರಗಳು, ನಂಬಿರುವ ನಂಬಿಕೆಯಿಂದ ಮೊಟ್ಟೆತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದರೆ, ಅದಕ್ಕೆ ಸರ್ಕಾರ ಗೌರವ ನೀಡಲಿದೆಂದ ಸಚಿವ ಸುಧಾಕರ್‌ ಹೇಳಿದರು.

ಕೋವಿಡ್‌ ವ್ಯಾಕ್ಸಿನೇಷನ್‌ಗೆ ಯಾರೇ ಹಣ ಪಡೆದರೂ ಅತಂಹವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು.

-ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ.

 

click me!