Parliament Winter Session: ಮೊದಲ ವಾರ ರಾಜ್ಯಸಭೆಯ ಕಲಾಪ ಶೇ.52ರಷ್ಟು ವ್ಯರ್ಥ!

By Kannadaprabha NewsFirst Published Dec 6, 2021, 6:48 AM IST
Highlights

* ವಿಪಕ್ಷಗಳ ಗದ್ದಲದಿಂದ ಚಳಿಗಾಲದ ಅಧಿವೇಶನಕ್ಕೆ ಅಡ್ಡಿ

* ಮೊದಲ ವಾರ ರಾಜ್ಯಸಭೆಯ ಕಲಾಪ ಶೇ.52ರಷ್ಟುವ್ಯರ್ಥ

ನವದೆಹಲಿ(ಡಿ.06): ಸಂಸತ್ತಿನ ಚಳಿಗಾಲದ ಮೊದಲ ವಾರದ ಅಧಿವೇಶನದಲ್ಲಿ ವಿಪಕ್ಷಗಳ ಗಲಾಟೆಯಿಂದಾಗಿ ರಾಜ್ಯಸಭೆಯ ಕಲಾಪದ ಶೇ.52ರಷ್ಟುಸಮಯ ವ್ಯರ್ಥವಾಗಿದೆ ಎಂದು ರಾಜ್ಯಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ವಾರದ ಮೊದಲ 3 ದಿನಗಳು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಗುರುವಾರ ಮತ್ತು ಶುಕ್ರವಾರ ಕಲಾಪ ನಡೆದಿದ್ದರಿಂದ ಉತ್ಪಾದಕತೆ ಶೇ.47.7ರಷ್ಟಾಗಿದೆ.

ಕಳೆದ ಅಧಿವೇಶನದಲ್ಲಿ ಸದನಕ್ಕೆ ಅಗೌರವ ತೋರಿದ ಕಾರಣಕ್ಕೆ 12 ಸಂಸದರನ್ನು ಅಮಾನತು ಮಾಡಲಾಗಿತ್ತು. ಈ ಅದೇಶವನ್ನು ಹಿಂಪಡೆಯುವಂತೆ ವಿಪಕ್ಷಗಳು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾರಣ ಕಲಾಪಗಳು ಸರಿಯಾಗಿ ನಡೆದಿರಲಿಲ್ಲ. ಅಮಾನತುಗೊಂಡ 12 ಸಂಸದರು ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರವೂ ಸಹ ನಿಗದಿತ ಸಮಯಕ್ಕಿಂತ 33 ನಿಮಿಷ ತಡವಾಗಿ ಕಲಾಪ ಆರಂಭವಾಯಿತು ಹಾಗೂ ಶುಕ್ರವಾರ ಸಂಪೂರ್ಣ ಕಲಾಪ ನಡೆಯಿತು. ಈ 2 ದಿನಗಳ ಉತ್ಪಾದಕತೆ ಕ್ರಮವಾಗಿ ಶೇ.95 ಹಾಗೂ ಶೇ.100ರಷ್ಟಿತ್ತು. ಮೊದಲ ವಾರದಲ್ಲಿ ರೈತ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆ ಮಾತ್ರ ಮಂಡನೆಯಾಗಿ ಅನುಮೋದನೆ ಪಡೆದುಕೊಂಡಿದೆ.

ಸಂಸತ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ನಾಶವಾಗುತ್ತಿದೆ

ಪ್ರಜಾಪ್ರಭುತ್ವದ ದೇಗುವವೆಂದು ಹೇಳಲಾಗುವ ಸಂಸತ್ತಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಾ ಇದ್ದು ಆಳುವ ಬಿಜೆಪಿ ಸರಕಾರ ತನ್ನ ಅತಿಯಾದ ಬಹುಮತವನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಬ್ಬಾಳಿಕೆಯ ಮಾರ್ಗದಿಂದ ಕಾನೂನುಗಳನ್ನು ಅಂಗೀಕರಿಸತ್ತಾ ಇದೆ ಎಂದು ಸಿಪಿಎಂ ರಾಜ್ಯ ಮುಖಂಡ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು.

ನಗರದ ಹಾಲಿಸ್ಟರ್‌ ಮೆಮೋರಿಯಲ್‌ ಹಾಲ್‌ ನಲ್ಲಿ ಭಾನುವಾರ ಭಾರತ ಕಮ್ಯೂನಿಸ್ಟ್‌ ಪಕ್ಷ ಮಾರ್ಕ್ಸ್‌ವಾದಿಯ 17 ಜಿಲ್ಲಾ ಸಮ್ಮೇಳನದ ಉದ್ಘಾಟಿಸಿ ಮಾತನಾಡಿದ ಅವರು, ಜಾತೀಯತೆ, ಮತೀಯವಾದ, ಅಸಮಾನತೆಯನ್ನು ಜೀವಂತವಾಗಿರಿಸಿ ಮನುವಾದಿ ಬೆಂಬಲಿತ ಸಂವಿಧಾನವನ್ನು ಬಲಿಷ್ಠಗೊಳಿಸುವ ಶಕ್ತಿಗಳು ಸಂಸತ್‌ನಲ್ಲಿ ಅಧಿಕಾರ ವಹಿಸಿಕೊಂಡು ಸರ್ವಾಧಿಕಾರಿಯಾಗಿವೆ ಎಂದರು.

ಸಂವಿಧಾನ ಬೇಕೇ ಅಥವಾ ಮನುವಾದವೇ?

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ವರ್ಗದ ಹಿತ ರಕ್ಷಣೆ ಮಾಡುವ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಮುಂದೆ ಒಂದು ದಿನ ಹಳ್ಳಿಗಳಲ್ಲಿ, ಬೀದಿಗಳಲ್ಲಿ ದೇಶಕ್ಕೆ ಆರ್‌ಎಸ್‌ಎಸ್‌ಸಂಘದ ಮನುವಾದ ಬೇಕಾ ಇಲ್ಲವೇ ಅಂಬೇಡ್ಕರ್‌ ಅವರ ಸಂವಿಧಾನ ಬೇಕಾ ಎಂಬುದು ಚರ್ಚೆ ನಡೆಯುತ್ತದೆ ನಾವು ಎಚ್ಚರಿಕೆಯಿಂದ ಇವುಗಳನ್ನು ಎದುರಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಜಾತ್ಯತೀತ ತತ್ವಗಳು ಅಂಬೇಡ್ಕರ್‌ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷದ ಮುಖಂಡರು ಕೆಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೋಮುವಾದಿ ಬೆಳವಣಿಗೆಗೆ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ಗಾಂಧೀಜಿಯವರ ಮೌಲ್ಯಗಳು ಸಂವಿಧಾನದ ಆಶಯಗಳ ಬಗ್ಗೆ ಗೌರವ ಇದ್ದರೆ ಕಾಂಗ್ರೆಸ್‌ ಪಕ್ಷದ ಎರಡು ಬಣಗಳು ಒಗ್ಗೂಡಬೇಕು ಮತ್ತು ಪ್ರಗತಿಪರ ಆಲೋಚನೆಗಳ ಜೊತೆ ಕೈಜೋಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಪಿ.ಜಯರಾಮರೆಡ್ಡಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ಒದಗಿಸುವುದು ಸಿಪಿಎಂ ಸಿದ್ಧಾಂತ. ಬಿಜೆಪಿ ಕೇವಲ ಅಂಬಾನಿ, ಅದಾನಿ ಯಂತಹ ಶ್ರೀಮಂತ ವರ್ಗದವರ ಹಿತ ರಕ್ಷಣೆ ಮಾಡುತ್ತಿದ್ದು, ಇದೇ ಮೋದಿ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದರು.

click me!