ಪಿಎಂಒ ಅಧಿಕಾರಿ ಎಂದು ಹೇಳಿದ್ದ ವಂಚಕನಿಗೆ Z ಪ್ಲಸ್‌ ಭದ್ರತೆ ನೀಡಿದ ಜಮ್ಮುಕಾಶ್ಮಿರ ಪೊಲೀಸ್‌!

By Santosh NaikFirst Published Mar 17, 2023, 2:45 PM IST
Highlights

ತಾನು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಪೋಸ್‌ ನೀಡಿದ್ದ ಗುಜರಾತ್‌ ಮೂಲದ ವಂಚಕ ಕಿರಣ್‌ ಪಟೇಲ್‌, ಎರಡು ದಿನಗಳ ಶ್ರೀನಗರ ಪ್ರವಾಸದಲ್ಲಿ Z ಪ್ಲಸ್‌ ಭದ್ರತೆ, ಪಂಚತಾರಾ ಹೋಟೆಲ್‌ನ ವಾಸ್ತವ್ಯವನ್ನು ಅನುಭವಿಸಿದ್ದರು. ಇದರ ವಿಡಿಯೋಗಳನ್ನು ಟ್ವಿಟರ್‌ನಲ್ಲ ಹಾಕಿದ ಬೆನ್ನಲ್ಲಿಯೇ ಆತನನ್ನು ಬಂಧಿಸಲಾಗಿದೆ.
 

ನವದೆಹಲಿ (ಮಾ.17): ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಉನ್ನತ ಅಧಿಕಾರದಲ್ಲಿರುವ ವ್ಯಕ್ತಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಝಡ್‌ ಪ್ಲಸ್‌ ಭದ್ರತೆ, ಬುಲೆಟ್‌ ಪ್ರೂಫ್‌ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ, ಪಂಚತಾರಾ ಹೋಟೆಲ್‌ ವಾಸ್ತವ್ಯ ಸೇರಿದಂತೆ ಹಲವು ಸೇವೆಗಳನ್ನು ಬಹಳ ಸರಳವ ಆಗಿ ಪಡೆದುಕೊಂಡಿದ್ದ ವಂಚಕನನ್ನು ಬಂಧಿಸಲಾಗಿದೆ. ವ್ಯಕ್ತಿಯನ್ನು ಗುಜರಾತ್‌ ಮೂಲದ ಕಿರಣ್‌ ಭಾಯ್‌ ಪಟೇಲ್‌ ಎಂದು ಗುರುತಿಸಲಾಗಿದೆ. ಎರಡು ದಿನಗಳ ಕಾಲ ಶ್ರೀನಗರ ಪ್ರವಾಸ ಮಾಡಿದ್ದ ಈ ವಂಚಕನಿಗೆ ಜಮ್ಮು ಕಾಶ್ಮೀರ ಪೊಲೀಸ್‌ ಪ್ರೊಟೋಕಾಲ್‌ನ ಅನ್ವಯ ಭದ್ರತೆ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಿತ್ತು, ಇಷ್ಟು ಮಾತ್ರವಲ್ಲದೆ ಈ ವ್ಯಕ್ತಿ ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲ ಅಧಿಕೃತ ಸಭೆಗಳನ್ನೂ ಭಾಗವಹಿಸಿದ್ದ ಎನ್ನುವುದು ಬಹಿರಂಗವಾಗಿದೆ. ಕಿರಣ್‌ ಭಾಯ್‌ ಪಟೇಲ್‌ ತನ್ನನ್ನು ಪ್ರಧಾನಿ ಕಚೇರಿಯ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡಿದ್ದು, ಕಳೆದ ವರ್ಷದ ಅಕ್ಟೋಬರ್‌ನಿಂದ ಹಲವು ಬಾರಿ ಕಾಶ್ಮೀರ ಕಣಿವೆಗೆ ನಿರಂತರವಾಗಿ ಭೇಟಿ ನೀಡಿದ್ದ ಎನ್ನಲಾಗಿದೆ. 10 ದಿನಗಳ ಹಿಂದೆ ಈತನನ್ನು ಬಂಧಿಸುವ ಮುನ್ನ ಉರಿಯ ಕಮಾನ್‌ ಪೋಸ್ಟ್‌ ಮೂಲಕ ಎಲ್‌ಓಸಿಯ ಬಳಿಯ ಪ್ರದೇಶಕ್ಕೂ ತೆರಳ ವೀಕ್ಷಣೆ ಮಾಡಿದ್ದ. ಈ ವೇಳೆ ಜಮ್ಮು ಕಾಶ್ಮೀರ ಪೊಲೀಸ್‌ ಹಾಗೂ ಸೈನಿಕರು ಆತನಿಗೆ ಭದ್ರತೆ ನೀಡಿರುವ ವಿಡಿಯೋ ಕೂಡ ಬಿತ್ತರವಾಗಿದೆ.

ಪ್ರಧಾನಮಂತ್ರಿ ಕಚೇರಿಯ ಕಾರ್ಯತಂತ್ರ ಹಾಗೂ ಅಭಿಯಾನ ವಿಭಾಗದ ಹೆಚ್ಚುವರಿ ನಿರ್ದೇಶಕ ತಾನು ಎಂದು ಹೇಳಿಕೊಂಡಿದ್ದ ಕಿರಣ್‌ ಭಾಯ್‌ ಪಟೇಲ್‌ನನ್ನು 10 ದಿನಗಳ ಹಿಂದೆ ಬಂಧಿಸಲಾಗಿದೆ. ಈತನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಫೆಬ್ರವರಿಯಲ್ಲಿ ಪಟೇಲ್ ಮೊದಲ ಬಾರಿಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ ಮತ್ತು ಅವರು ಅರೆಸೈನಿಕ ಮತ್ತು ಪೋಲೀಸ್ ಬೆಂಗಾವಲು ಇರುವ ಸ್ಥಳಗಳಿಗೆ ಪ್ರಯಾಣಿಸುವ ಅನೇಕ ವೀಡಿಯೊಗಳನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಎರಡು ವಾರಗಳ ಅಂತರದಲ್ಲಿ 2ನೇ ಬಾರಿಗೆ ಕಣಿವೆ ನಾಡಿಗೆ ಭೇಟಿ ನೀಡಲು ಆಗಮಿಸಿದಾಗ ಅವರ ಬಗ್ಗೆ ಅನುಮಾನ ವ್ಯಕ್ತವಾಗಿ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಕಿರಣ್‌ ಭಾಯ್‌ ಪಟೇಲ್‌ ವಿರುದ್ಧ ಐಪಿಸಿ ಸೆಕ್ಷನ್ 419, 420, 467, 468, 471 ರ ಅಡಿಯಲ್ಲಿ ಪೊಲೀಸ್ ಠಾಣೆ ನಿಶಾತ್‌ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ವ್ಯಕ್ತಿಯು, ವಂಚನೆ, ನಕಲಿತನ, ಸೋಗು ಹಾಕುವ ಮೂಲಕ ಜನರನ್ನು ಮೋಸಗೊಳಿಸುವ ಪ್ರಯತ್ನ ಮಾಡಿದ್ದಾನೆ. ಈ ಕುರಿತಾದ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

॥ जय हिन्द ॥ pic.twitter.com/WCEZxlDHId

— Dr. Kiran J Patel (@bansijpatel)

ಪಿಎಂ ಕೇರ್ಸ್ ಫಂಡ್ ಸರ್ಕಾರ ನಿಯಂತ್ರಣದಲ್ಲಿಲ್ಲ, ಇದು ಚಾರಿಟೇಬಲ್ ಟ್ರಸ್ಟ್, ಹೈಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ!

ತನ್ನ ಶ್ರೀನಗರ ವಾಸ್ತವ್ಯದ ಸಮಯದಲ್ಲಿ ತನಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ ಭದ್ರತಾ ಸಿಬ್ಬಂದಿಯನ್ನು ವಂಚಿಸಲು ಕಳ್ಳನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದ ಎನ್ನುವ ವರದಿಗಳೂ ಇವೆ. 'ಈ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಯಾಕೆ ಹಿಡಿಯುವ ಪ್ರಯತ್ನ ಮಾಡಿಲ್ಲ..' ಎಂದು ಪುಲ್ವಾಮಾದ ಉಪ ವರಿಷ್ಠಾಧಿಕಾರಿ ಬಶೀಲ್‌ ಉಲ್‌ ಹಕ್‌ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಜುಲ್ಫೀಕರ್‌ ಆಜಾದ್‌ ಅವರಿಗೆ ಆಡಳಿತ ಪ್ರಶ್ನೆ ಮಾಡಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಜಮ್ಮು ಕಾಶ್ಮೀರ ಪೊಲೀಸ್‌ ಮಾತ್ರವಲ್ಲದೆ, ಗುಜರಾತ್‌ ಪೊಲೀಸರ ತಂಡ ಕೂಡ ತನಿಖೆಗೆ ಸೇರಿಕೊಂಡಿದೆ.

'ನೀವ್‌ ಹೇಳ್ತಾ ಇರೋ ನಾರಿ ಶಕ್ತಿ ಇದೇನಾ..' ಹೆಂಡ್ತಿ ಹಿಂಸೆ ತಾಳಲಾರದೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಟೆಕ್ಕಿ!

ಯಾರೀತ ಕಿರಣ್‌ ಭಾಯ್‌ ಪಟೇಲ್‌: ಕಿರಣ್‌ ಭಾಯ್‌ ಪಟೇಲ್‌ ಗುಜರಾತ್‌ ಮೂಲದವನಾಗಿದ್ದು, ಟ್ವಿಟರ್‌ನಲ್ಲಿ ವೆರಿಫೈಡ್‌ ಖಾತೆಯನ್ನೂ ಹೊಂದಿದ್ದಾರೆ. ಪಟೇಲ್ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ವಿಐಪಿ ಸೇವೆಯನ್ನು ಆನಂದಿಸುತ್ತಿರುವ ಅನೇಕ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.  ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕಾರ್ಯತಂತ್ರ ಮತ್ತು ಪ್ರಚಾರ ವಿಭಾಗದ  ಹೆಚ್ಚುವರಿ ನಿರ್ದೇಶಕ ಎಂದು ಕಿರಣ್‌ ಹೇಳಿಕೊಂಡಿದ್ದ. ಅವರ ಟ್ವಿಟ್ಟರ್‌ನಲ್ಲಿನ ಮಾಹಿತಿ ಪ್ರಕಾರ, ಅವರು ವರ್ಜೀನಿಯಾದ ಕಾಮನ್‌ವೆಲ್ತ್ ಯುನಿಯಿಂದ ಪಿಎಚ್‌ಡಿ, ಐಐಎಂ ತಿರುಚಿಯಿಂದ ಎಂಬಿಎ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.

click me!