
ನವದೆಹಲಿ (ಡಿ.15): ಚುನಾವಣಾ ಅಕ್ರಮಗಳ ಆರೋಪದ ಕುರಿತು ಅಭಿಯಾನವನ್ನು ಚುರುಕುಗೊಳಿಸಿರುವ ಕಾಂಗ್ರೆಸ್ನ ಉನ್ನತ ನಾಯಕರು, ರಾಷ್ಟ್ರ ರಾಜಧಾನಿಯಲ್ಲಿ ಮತಚೋರಿ ವಿರುದ್ಧ ಭಾನುವಾರ ದೊಡ್ಡ ಆಂದೋಲನ ನಡೆಸಿದ್ದಾರೆ. ‘ಸತ್ಯ ಅಸತ್ಯದ ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ’ ಎಂದು ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಗುಡುಗಿದ್ದಾರೆ.
ರಾಮಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ‘ಮತ ಚೋರಿ ಬಿಜೆಪಿಗರ ಡಿಎನ್ಎನಲ್ಲಿದೆ. ಇವರು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿರುವ ‘ಗದ್ದಾರ್’ (ದ್ರೋಹಿ) ಆಗಿದ್ದು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದರು. ರಾಹುಲ್ ಗಾಂಧಿ ಮಾತನಾಡಿ, ‘ಅಸತ್ಯದ ಮತಚೋರಿ ಆಧಾರದಲ್ಲಿ ಬಿಜೆಪಿ ‘ಸತ್ತಾ’ ಹಿಡಿದಿದೆ. ಆದರೆ ನಾವು ಈ ಅಸತ್ಯದ ವಿರುದ್ಧ ಹೋರಾಡಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಆರ್ಎಸ್ಎಸ್ ಸರ್ಕಾರವನ್ನು ದೇಶದಿಂದ ತೆಗೆದುಹಾಕುತ್ತೇವೆ’ ಎಂದು ಅವರು ಹೇಳಿದರು.
ಇನ್ನು, ‘ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತಗಳ್ಳತನ ನಡೆಸಿದ್ದ ಬಿಜೆಪಿ, ಈಗ ಬಿಹಾರದ ಮಹಿಳೆಯರಿಗೆ 10 ಸಾವಿರ ರು. ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದೆ. ಇದೂ ಒಂದು ವೋಟ್ ಚೋರಿ. ಇವಿಎಂ ಬದಲು ಬ್ಯಾಲೆಟ್ನಲ್ಲಿ ಮತದಾನ ನಡೆದರೆ ಕಾಂಗ್ರೆಸ್ ಗೆಲ್ಲಲಿದೆ’ ಎಂದರು. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಅನೇಕ ನಾಯಕರಿದ್ದರು. ಈ ವೇಳೆ ಮತಚೋರಿ ವಿರುದ್ಧದ 5.5 ಕೋಟಿ ಸಹಿ ಸಂಗ್ರಹವನ್ನು ಹೈಕಮಾಂಡ್ಗೆ ಸಲ್ಲಿಸಲಾಯಿತು.
ಬಿಜೆಪಿ ಮತಚೋರಿಯಲ್ಲಿ ತೊಡಗಿದೆ ಎಂದು ಆರೋಪಿಸಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಸತ್ಯ ಮತ್ತು ಅಹಿಂಸೆಯ ಆಧಾರದಲ್ಲಿ ನಾವು ಬಿಜೆಪಿ ಮತ್ತು ಆರ್ಎಸ್ಎಸ್ ಸರ್ಕಾರವನ್ನು ಉರುಳಿಸುತ್ತೇವೆ’ ಎಂದು ಗುಡುಗಿದ್ದಾರೆ. ಅಕ್ರಮದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದೊಂದಿಗೆ ಚುನಾವಣಾ ಆಯೋಗವೂ ಕೈಜೋಡಿಸಿದೆ. ಬಿಜೆಪಿ ಮತ್ತು ಆರ್ಎಸ್ಎಸ್ಗೀಗ ಶಕ್ತಿ ಇರುವುದರಿಂದ ಅದನ್ನು ಬಳಸಿಕೊಂಡು ಮತಗಳವು ಮಾಡುತ್ತಿದ್ದಾರೆ.
ಸತ್ಯ-ಅಸತ್ಯದ ಯುದ್ಧದಲ್ಲಿ ಚುನಾವಣಾ ಆಯೋಗವು ಬಿಜೆಪಿ ಜತೆ ಸೇರಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡಿದೆ. ಆದರೆ ನಾವು ಸತ್ಯದೊಂದಿಗೆ ನಿಂತು, ಅವರ ಸರ್ಕಾರವನ್ನು ಉರುಳಿಸುತ್ತೇವೆ. ಈ ಕಾನೂನನ್ನು ತೆಗೆದುಹಾಕಿ ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ರಾಹುಲ್ ಹೇಳಿದರು. ಜತೆಗೆ, ಇದಕ್ಕೆ ಸಮಯ ಹಿಡಿಯುತ್ತದಾದರೂ ನಾವು ಸತ್ಯ, ಅಹಿಂದೆಯ ಆಸರೆಯಿಂದ ಮೋದಿ, ಅಮಿತ್ ಶಾರನ್ನು ಸೋಲಿಸುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ