ಬೆಲೆಯೇರಿಕೆ ವಿರುದ್ಧ 15 ದಿನ ದೇಶದೆಲ್ಲೆಡೆ ‘ಕೈ’ ಪಾದಯಾತ್ರೆ!

By Kannadaprabha NewsFirst Published Nov 11, 2021, 6:50 AM IST
Highlights

* ನ.14ರಿಂದ ಜಾಗೃತಿ ಅಭಿಯಾನ, ಗ್ರಾಮವಾಸ್ತವ್ಯ

* ಬೆಲೆಯೇರಿಕೆ ವಿರುದ್ಧ 15 ದಿನ ದೇಶದೆಲ್ಲೆಡೆ ‘ಕೈ’ ಪಾದಯಾತ್ರೆ

ನವದೆಹಲಿ(ನ.11): ತೈಲೋತ್ಪನ್ನ, ದಿನಬಳಕೆ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ (Price Hike) ಏರಿಕೆ ವಿಷಯ ಮತ್ತು ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ನ.14ರಿಂದ ದೇಶವ್ಯಾಪಿ 15 ದಿನಗಳ ಕಾಲ ಜನಜಾಗೃತಿ ಅಭಿಯಾನ ಮತ್ತು ಪಾದಯಾತ್ರೆ ನಡೆಸಲು ಕಾಂಗ್ರೆಸ್‌ (Congress) ನಿರ್ಧರಿಸಿದೆ. ಈ ಮೂಲಕ ಬೆಲೆ ಏರಿಕೆ ಕುರಿತ ಜನರ ಆಕ್ರೋಶವನ್ನು ಬಿಜೆಪಿ (BJP) ಕಡೆಗೆ ತಿರುಗಿಸುವ ಬೃಹತ್‌ ಕಾರ್ಯಕ್ರಮ ರೂಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ (KC Venugopal) ‘ಬಿಜೆಪಿ ಸರ್ಕಾರ ಜನರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯು ಜನಸಾಮಾನ್ಯರ ಜೀವನವನ್ನು ದುಸ್ತರ ಮಾಡಿದೆ. ಆರ್ಥಿಕತೆ ಹಾಳು, ನಿರುದ್ಯೋಗ ಹೆಚ್ಚಳ, ಬಡತನ, ಹಸಿವು ಹೆಚ್ಚಳ, ರೈತರ ಸಮಸ್ಯೆಗಳು ದೇಶವನ್ನು ಅಧಃಪತನದತ್ತ ಕೊಂಡೊಯ್ಯುತ್ತಿವೆ. ಈ ಅನ್ಯಾಯದ ವಿರುದ್ಧ ನಾವು ಸರ್ಕಾರದಿಂದ ಉತ್ತರ ಬಯಸಲಿದ್ದೇವೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌, ದೇಶಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಉದ್ದೇಶಿಸಿದೆ’ ಎಂದು ತಿಳಿಸಿದ್ದಾರೆ.

‘ಅಭಿಯಾನದ ಭಾಗವಾಗಿ ಪಕ್ಷದ ಕಾರ್ಯಕರ್ತರು ದೇಶಾದ್ಯಂತ ಹಳ್ಳಿಗಳಿಗೆ, ಪಟ್ಟಣಗಳಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ, ಪ್ರತಿಭಟನೆ ನಡೆಸಲಿದ್ದಾರೆ ಮತ್ತು ಗುಂಪು ಸಭೆಗಳನ್ನು ಆಯೋಜಿಸಲಿದ್ದಾರೆ, ಗ್ರಾಮ ವಾಸ್ತವ್ಯಗಳನ್ನು ಮಾಡಲಿದ್ದಾರೆ. ಈ ಪಾದಯಾತ್ರೆಗಳು ನಿತ್ಯವೂ ಪ್ರಭಾತ ಪೇರಿ ಮತ್ತು ಶ್ರಮದಾನದೊಂದಿಗೆ ಆರಂಭವಾಗಲಿವೆ. ಕಾರ್ಯಕರ್ತರು ಸಣ್ಣ ಸಣ್ಣ ಗುಂಪುಗಳಾಗಿ ತೆರಳಿ, ಜನರಿಗೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಉಂಟಾಗಿರುವ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಯುಪಿಎದ 10 ವರ್ಷಗಳ ಆಡಳಿತದಲ್ಲಿ ನಾವು 27 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದವು. ಆದರೆ ಇದೀಗ ಬಿಜೆಪಿ ಆಡಳಿತದಲ್ಲಿ ಕೇವಲ ಕೋವಿಡ್‌ ಅವಧಿಯಲ್ಲೇ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್‌ಪಿಜಿ ಬೆಲೆ ಶೇ.50ರಷ್ಟುಏರಿಕೆ ಕಂಡು 1000 ರು.ಗೆ ತಲುಪಿದೆ. ಕಳೆದ 18 ತಿಂಗಳಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 35 ರು. ಮತ್ತು 25 ರು.ನಷ್ಟುಹೆಚ್ಚಳವಾಗಿದೆ. ಉದ್ಯೋಗಿಗಳ ವೇತನ ಕಡಿಮೆಯಾಗಿದೆ ಈ ಎಲ್ಲಾ ವಿಷಯಗಳ ಬಗ್ಗೆ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಲಿದ್ದಾರೆ ಎಂದು ವೇಣುಗೋಪಾಲ್‌ ತಿಳಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ‘ಬಿಜೆಪಿ ಜನರಿಗೆ ಕಿರುಕುಳ ನೀಡುವ ಅಭಿಯಾನವನ್ನು ನಡೆಸುತ್ತಿದೆ. ಕಾಂಗ್ರೆಸ್‌ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಿದೆ. ಸರ್ಕಾರ ಮಾಡಿರುವ ಎಲ್ಲಾ ಅನ್ಯಾಯಗಳಿಗೆ ನ್ಯಾಯ ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಅವರಿಂದ ಕಿರುಕುಳ, ನಮ್ಮಿಂದ ಜಾಗೃತಿ

ಬಿಜೆಪಿ ಜನರಿಗೆ ಕಿರುಕುಳ ನೀಡುವ ಅಭಿಯಾನವನ್ನು ನಡೆಸುತ್ತಿದೆ. ಕಾಂಗ್ರೆಸ್‌ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಿದೆ. ಸರ್ಕಾರ ಮಾಡಿರುವ ಎಲ್ಲಾ ಅನ್ಯಾಯಗಳಿಗೆ ನ್ಯಾಯ ಬಯಸುತ್ತೇವೆ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

click me!