ಸಿಎಂ ಸಿದ್ದರಾಮಯ್ಯ ಬದಲಿಸಲು ‘ಕಾಂಗ್ರೆಸ್‌’ ಚಿಂತನೆ: ಪ್ರಧಾನಿ ಮೋದಿ

By Kannadaprabha NewsFirst Published Apr 28, 2024, 5:23 AM IST
Highlights

ಕರ್ನಾಟಕದಲ್ಲಿ 2.5 ವರ್ಷಗಳ ಆಡಳಿತದ ನಂತರ ಮುಖ್ಯಮಂತ್ರಿಯನ್ನು ಬದಲಿಸಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
 

ಕೊಲ್ಹಾಪುರ (ಏ.28): ಕರ್ನಾಟಕದಲ್ಲಿ 2.5 ವರ್ಷಗಳ ಆಡಳಿತದ ನಂತರ ಮುಖ್ಯಮಂತ್ರಿಯನ್ನು ಬದಲಿಸಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊಲ್ಹಾಪುರದಲ್ಲಿ ಶನಿವಾರ ಸಂಜೆ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ 2.5 ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನವನ್ನು ಈಗಿನ ಉಪ ಮುಖ್ಯಮಂತ್ರಿಗೆ ಹಸ್ತಾಂತರಿಸುವ ಯೋಚನೆಯನ್ನು ಕಾಂಗ್ರೆಸ್ ಹೊಂದಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿಯೂ ಈ ವ್ಯವಸ್ಥೆಯನ್ನು ಅವರು ಹೊಂದಿದ್ದರು’ ಎಂದು ಹೇಳಿದರು.

ಈ ಮೂಲಕ ಸಿದ್ದರಾಮಯ್ಯ ಹುದ್ದೆಗೆ ಸಂಚಕಾರ ಕಾದಿದ್ದು, ಅವರು ತಮ್ಮ ಸಿಎಂ ಹುದ್ದೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕಾಗಬಹುದು ಎಂಬ ಸುಳಿವನ್ನು ಮೋದಿ ಪರೋಕ್ಷವಾಗಿ ನೀಡಿದರು. ಈ ಹಿಂದೆ ಕರ್ನಾಟಕ ಕಾಂಗ್ರೆಸ್‌ನ ಕೆಲವು ನಾಯಕರು, ಸಿದ್ದರಾಮಯ್ಯ 2.5 ವರ್ಷ ಆಳ್ವಿಕೆ ನಡೆಸಿ ಡಿಕೆಶಿ ಅವರಿಗೆ ಬಿಟ್ಟುಕೊಡಲಿದ್ದಾರೆ. ಈ ರೀತಿ ಹೈಕಮಾಂಡ್‌ ಮಟ್ಟದಲ್ಲೇ ಚರ್ಚೆ ನಡೆದಿದೆ ಎಂದು ಹೇಳಿ ಸಂಚಲನ ಮೂಡಿಸಿದ್ದರು. ಬಳಿಕ ಪಕ್ಷದ ವರಿಷ್ಠರು ಇಂಥ ಹೇಳಿಕೆ ನೀಡಕೂಡದು ಎಂದು ಕಾಂಗ್ರೆಸ್ಸಿಗರಿಗೆ ಕಟ್ಟಪ್ಪಣೆ ಮಾಡಿದ್ದರು. ಆಗ ಕೂಡ ಮೋದಿ ಇಂಥದ್ದೇ ಹೇಳಿಕೆ ನೀಡಿದ್ದರು.

ಇವಿಎಂ ತೀರ್ಪು ವಿಪಕ್ಷಗಳಿಗೆ ಚಾಟಿ: ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ಗಳ ಮೇಲಿನ ಅನುಮಾನಗಳನ್ನು ನಿವಾರಿಸಿದ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳಿಗೆ ಹಾಕಿದ ತಪರಾಕಿ. ಇದೇ ವಿಷಯ ಮುಂದಿಟ್ಟು ಹಲವು ವರ್ಷಗಳಿಂದ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದ ವಿಪಕ್ಷಗಳು, ಈ ಕುರಿತು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹ ಮಾಡಿದ್ದಾರೆ. ಚುನಾವಣೆಗೆ ಮರಳಿ ಮತಪತ್ರ ಬಳಸಬೇಕು ಮತ್ತು ಇವಿಎಂಗಳಲ್ಲಿ ಚಲಾವಣೆಯಾಗುವ ಎಲ್ಲಾ ಮತಗಳನ್ನು ವಿವಿಪ್ಯಾಟ್‌ನಲ್ಲಿ ಮುದ್ರಿತವಾಗುವ ಪ್ರತಿಯೊಂದಿಗೆ ಮತತಾಳೆ ನಡೆಸಬೇಕು ಎಂದು ಕೋರಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾ ಮಾಡಿದ ಬೆನ್ನಲ್ಲೇ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಬರ ಪರಿಹಾರ: ಕೇಂದ್ರದ ವಿರುದ್ಧ ಇಂದು ಕಾಂಗ್ರೆಸ್‌ ಪ್ರತಿಭಟನೆ: ಡಿ.ಕೆ.ಶಿವಕುಮಾರ್‌

ಬಿಹಾರದ ಅರಾರಿಯಾದಲ್ಲಿ ಶುಕ್ರವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಮತಗಟ್ಟೆಗಳ ಅಪಹರಣದ ಮೂಲಕ ಬಡವರು, ಹಿಂದುಳಿದವರು ಮತ್ತು ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಆದರೆ ಇವಿಎಂಗಳ ಜಾರಿ ಬಳಿಕ ಅವರ ಅಟಕ್ಕೆ ಬ್ರೇಕ್‌ ಬಿದ್ದಿತ್ತು. ಹೀಗಾಗಿಯೇ ಅವರು ಜನರಲ್ಲಿ ಇವಿಎಂಗಳ ಬಗ್ಗೆ ಗೊಂದಲ ಸೃಷ್ಟಿಸುವ ತಪ್ಪು ಮಾಡಿದರು. ಆದರೆ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಈ ಪಕ್ಷಗಳಿಗೆ ಹಾಕಿದ ತಪರಾಕಿಯಾಗಿದೆ. ಮತ್ತೆ ಹಿಂದಿನಂತೆ ಮತಪೆಟ್ಟಿಗೆ ತಂದು ಮತಗಳನ್ನು ಲೂಟಿ ಮಾಡಲು ಸಂಚು ರೂಪಿಸಿದವರಿಗೆ ಮುಖಭಂಗವಾಗಿದೆ’ ಎಂದು ಕಿಡಿಕಾರಿದರು.

click me!