ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

By Suvarna NewsFirst Published Sep 18, 2021, 7:45 PM IST
Highlights

* ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
* ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಕೃತಿಗೆ ಸಿಕ್ಕಿದ್ದ ಪ್ರಶಸ್ತಿ
* ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ನವದೆಹಲಿ, (ಸೆ.18): ರಾಜಕೀಯ ನಾಯಕ ಹಾಗೂ ಸಾಹಿತಿ ಎಂ. ವೀರಪ್ಪ ಮೊಯ್ಲಿ ಅವರಿಗೆ 2020ನೇ ಸಾಲಿನ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಇಂದು (ಸೆ.18) ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವೀರಪ್ಪ ಮೊಯ್ಲಿಗೆ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ' ಎನ್ನುವ ಕೃತಿಗೆ 2020 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಕಂಬಾರ ಅವರು ಮೊಯ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ  1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. 

ಮೊಯ್ಲಿ, HS ಬ್ಯಾಕೋಡ್ ಸೇರಿ ಮೂವರು ಕನ್ನಡಿಗರಿಗೆ ಸಂದ ಮಹತ್ವದ ಗೌರವ

ಮುಖ್ಯ ತೀರ್ಪುಗಾರರಾಗಿ ಇದ್ದ ಸಾಹಿತಿ ಅರವಿಂದ ಮಾಲಗತ್ತಿ, ಪದ್ಮಪ್ರಸಾದ್ ಹಾಗೂ ಎಸ್ ಜಿ ಸಿದ್ದರಾಮಯ್ಯ ನವರ ಸಮಿತಿ,2020ನೇ ಸಾಲಿನ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ನುರಿತ ರಾಜಕಾರಣಿ, ಸಮರ್ಥ ಆಡಳಿತಗಾರರಾಗಿರುವಂತೆ ಮೊಯಿಲಿ ಕವಿ ಹೃದಯವನ್ನೂ ಹೊಂದಿದ್ದಾರೆ. ಅವರು ಸ್ವತಃ ಕವಿ ಮತ್ತು ಸಾಹಿತಿ. ಅವರು ಹಾಲುಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 

ಅವರ ನಾಟಕಗಳೆಂದರೆ ಮಿಲನ, ಪರಾಜಿತ ಮತ್ತು ಪ್ರೇಮವೆಂದರೆ. ಕೊಟ್ಟ, ಸಾಗರದೀಪ, ಸುಳಿಗಾಳಿ, ತೆಂಬೆರೆ ಅವರ ಕಾದಂಬರಿಗಳು. ಇವುಗಳಲ್ಲಿ ಸಾಗರದೀಪ ಹಾಗೂ ಸುಳಿಗಾಳಿಗಳು ಕನ್ನಡ ಚಲನಚಿತ್ರಗಳಾಗಿ ಪ್ರದಧಿರ್ಶಿತವಾದರೆ, ಕೊಟ್ಟ ಹಾಗೂ ತೆಂಬೆರೆಗಳು ತಮಿಳು, ಹಿಂದಿ ಭಾಷೆಗೆ ಅನುವಾದವಾಗಿವೆ. 

ಎಂ.ಎಸ್‌. ಸತ್ಯು ಅವರ ನಿರ್ದೇಶನದಲ್ಲಿ ಕೊಟ್ಟ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ದೂರದರ್ಶನದಲ್ಲಿ ಟೆಲಿ-ಫಿಲ್ಮ್‌ ಆಗಿ ಬಿತ್ತರಗೊಂಡಿದೆ. ಅವರು ಇಂಗ್ಲೀಷಿನಲ್ಲಿ Musings on Indiaಎಂಬ ಲೇಖನ ಸಂಕಲವನ್ನು ಬರೆದಿದ್ದಾರೆ.

click me!