
ನವದೆಹಲಿ(ಫೆ.13): ಅದಾನಿ ಪ್ರಕರಣ ಹಿಡಿದು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆ. ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಅನ್ನೋ ಚರ್ಚೆಗಳು ನಡೆಯುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಂದಿನಂತೆ ಅಮೇಥಿ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದ ರಾಹುಲ್ ಗಾಂಧಿಗೆ ಸೋಲಿನ ಭಯ ಕಾಡಿತ್ತು. ಹೀಗಾಗಿ ಸುಲಭ ಗೆಲುವು ಸಾಧ್ಯವಿರುವ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ರಾಹುಲ್ ಗಾಂಧಿ ವಯನಾಡಿನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇತ್ತ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಮುಗ್ಗರಿಸಿದ್ದರು. ಮುಖಭಂಗ ತಪ್ಪಿಸಿದ ವಯನಾಡು ಜನರಿಗೆ ಧನ್ಯವಾದ ಹೇಳಿದ ರಾಹುಲ್ ಗಾಂಧಿ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟಿದು ತೀರಾ ವಿರಳ. ಗೆದ್ದ ಬಳಿಕ ರಾಹುಲ್ ಗಾಂಧಿ ವಯನಾಡು ಜನತೆಯನ್ನು ಮರೆತಿದ್ದಾರೆ. 1,362 ದಿನಗಳಲ್ಲಿ ರಾಹುಲ್ ಗಾಂಧಿ ಕೇವಲ 15 ಬಾರಿ ವಯನಾಡಿಗೆ ಭೇಟಿ ನೀಡಿದ್ದಾರೆ.
3 ವರ್ಷ, 8 ತಿಂಗಳು 21 ದಿನದಲ್ಲಿ ರಾಹುಲ್ ಗಾಂಧಿ 15 ಬಾರಿ ವಯನಾಡಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯಲ್ಲಿ ಗೆಲುವಿನ ಬಳಿಕ ಧನ್ಯವಾದದ ರೋಡ್ ಶೋ ಕೂಡ ಸೇರಿದೆ.ಇದರಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು, ಅಭಿವೃದ್ಧಿ, ಯೋಜನೆಗಳು, ಕ್ಷೇತ್ರದ ಪರಿಶೀಲನೆ ಕುರಿತ ಭೇಟಿ ಶೂನ್ಯ. ವಯನಾಡಿನಲ್ಲಿ ರಾಹುಲ್ ಗಾಂಧಿ ಶೇಕಡಾ 64.67 ಮತಗಳ ಪಡೆದು ಅಭೂತಪೂರ್ವ ಗೆಲುವು ದಾಖಲಿಸಿದ್ದರು. ರಾಹುಲ್ ಗಾಂಧಿ 7,06,367 ಮತಗಳಿಂದ ಗೆಲುವು ಸಾಧಿಸಿದ್ದರು.
ಪ್ರಧಾನಿ ವಿರುದ್ಧ ಹೇಳಿಕೆ: ರಾಹುಲ್ಗೆ ಹಕ್ಕುಚ್ಯುತಿ ನೋಟಿಸ್
2019ರ ಗೆಲುವಿನ ಬಳಿಕ ಆ ವರ್ಷ 3 ಬಾರಿ ವಯಾನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. 2020ರಲ್ಲಿ 2 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. 2021ರಲ್ಲಿ 5 ಬಾರಿ ಭೇಟಿ ನೀಡಿದ್ದರೆ, 2022ರಲ್ಲಿ 3 ಬಾರಿ ಭೇಟಿ ನೀಡಿದ್ದಾರೆ. ಇನ್ನು ಈ ವರ್ಷ 1 ಬಾರಿ ವಯನಾಡಿಗೆ ಮೋದಿ ಭೇಟಿ ನೀಡಿದ್ದಾರೆ. ರಾಹುಲ್ ಗಾಂಧಿ ಕುರಿತು ವಯನಾಡಿನಲ್ಲಿ ಪರ ವಿರೋಧಗಳು ಇವೆ. ಸಂಸದನಾಗಿ ವಯನಾಡಿನಲ್ಲಿ ರಾಹುಲ್ ಗಾಂಧಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಅನ್ನೋ ಆರೋಪಗಳು ಇವೆ. ಇತ್ತ ಯಾರೂ ಏನೇ ಹೇಳಿದರು ನಮ್ಮ ನಾಯಕ ರಾಹುಲ್ ಗಾಂಧಿ, ಮತ್ತೆ ರಾಹುಲ್ ಗಾಂಧಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುತ್ತೇವೆ ಅನ್ನೋ ಮಾತುಗಳು ಕ್ಷೇತ್ರದಲ್ಲೇ ಕೇಳಿಬಂದಿದೆ.
ಈ ಬಾರಿ ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಕಾರಣ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿ ಇದೀಗ ಬಿಜೆಪಿ ಪಾಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಸ್ಪರ್ಧಿಸಿದ್ದರು. ರಾಹುಲ್ ಗಾಂಧಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಈ ಮೂಲಕ ಗಾಂಧಿ ಕುಟುಂಬಕ್ಕೆ ಪ್ರತಿ ಬಾರಿ ರಾಜಕೀಯ ಶಕ್ತಿ ನೀಡಿದ್ದ ಅಮೇಥಿ ಬಿಜೆಪಿ ತೆಕ್ಕೆಗೆ ಪಡೆದುಕೊಂಡಿತ್ತು. 2019ರ ಬಳಿಕ ಸ್ಮೃತಿ ಇರಾನಿ ಅಭಿವೃದ್ಧಿ ಕೆಲಸಗಳ ಮೂಲಕ ಜನರ ಮನಗೆದ್ದಿದ್ದಾರೆ. ಹೀಗಾಗಿ ಇಲ್ಲಿ ರಾಹುಲ್ ಗಾಂಧಿ ಅದೃಷ್ಠ ಪರೀಕ್ಷೆಗೆ ಇಳಿದರೆ ಗೆಲುವು ಕಷ್ಟವಾಗಲಿದೆ.
ಕಾಶ್ಮೀರ ಶಾಂತಿ ಕದಡಲಿದೆ ಎಂದವರೇ ಲಾಲ್ಚೌಕ್ನಲ್ಲಿ ತಿರಂಗ ಹಾರಿಸಿದ್ದಾರೆ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!
1990 ರಿಂದ 2014ರ ವರೆಗೆ ಅಮೇಥಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಜವಾಹರ್ ಲಾಲ್ ನೆಹರು, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಎಲ್ಲರೂ ಇದೇ ಕ್ಷೇತ್ರದಿಂದ ಗೆದ್ದಿದ್ದಾರೆ. 2014ರಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಗೆದ್ದಿದ್ದರು. ಇದೀಗ ವಯನಾಡಿನಲ್ಲೂ ರಾಹುಲ್ ವಿರುದ್ಧ ಅಪಸ್ವರಗಳು ಕೇಳಿಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ರೀತಿ, ಕೇಂದ್ರದ್ಲಿ ರಾಹುಲ್ ಗಾಂಧಿ ಕ್ಷೇತ್ರ ಹುಡುಕಾಟ ನಡೆಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ