Rafale Scam ಮುಚ್ಚಿಹಾಕಲು ಮೋದಿ ಸರ್ಕಾರ ಯತ್ನ : ಕಾಂಗ್ರೆಸ್‌ ವಕ್ತಾರ!

By Kannadaprabha NewsFirst Published Nov 14, 2021, 1:58 AM IST
Highlights

*'ಹಗರಣ ಮುಚ್ಚಿಹಾಕಲು ಮೋದಿ ಸರ್ಕಾರ ಯತ್ನ'
*ಸಿಬಿಐ ತನಿಖೆಯಲ್ಲಿ ಪ್ರಗತಿ ಇಲ್ಲ: ಖೇರಾ
*ಅಕ್ರಮ ನಡೆದಿದ್ದರೂ ಕೇಸ್‌ ಏಕೆ ದಾಖಲಿಸ್ತಿಲ್ಲ? 
*ಡಿಕೆಶಿ, ಶ್ರೀನಿವಾಸ್‌ ಜತೆ ವಕ್ತಾರ ಸುದ್ದಿಗೋಷ್ಠಿ

ಬೆಂಗಳೂರು(ನ.14) : ರಫೇಲ್‌ ಹಗರಣದಲ್ಲಿ (Rafale Scam) ನಡೆದಿರುವ ಭ್ರಷ್ಟಾಚಾರ ಹಾಗೂ ಒಳಸಂಚನ್ನು ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಪದೇ ಪದೇ ಮುಚ್ಚಿಹಾಕಲು ಯತ್ನಿಸುತ್ತಿದೆ. ಸಿಬಿಐ (CBI) ತನಿಖೆಗೆ ವಹಿಸಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಜಂಟಿ ಸದನ ಸಮಿತಿ (ಜೆಪಿಸಿ) ಮೂಲಕ ತನಿಖೆ ನಡೆಸಬೇಕು ಎಂದು  ಪವನ್‌ ಖೇರಾ (Pawan Khera) ಒತ್ತಾಯ ಮಾಡಿದ್ದಾರೆ.‌

ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹಾಗೂ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ (BV Srinivas) ಅವರೊಂದಿಗೆ ಕೆಪಿಸಿಸಿ (KPCC) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ (BJP) ವಿರುದ್ಧ ಹೋರಾಟ ಮಾಡುತ್ತಿರುವ ಡಿ.ಕೆ. ಶಿವಕುಮಾರ್‌ ಹಾಗೂ ಇತರ ನಾಯಕರ ಮೇಲೆ ದಾಳಿ ಮಾಡುವ ಐಟಿ, ಇಡಿ, ಸಿಬಿಐ ಇಲಾಖೆಗಳು ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟುಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಯಾಕೆ? ಈ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಿಲ್ಲವೇ? ಎಂದು ಪ್ರಶ್ನಿಸಿದರು.

‘ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದೇವೆ. ಇದರ ಬಗ್ಗೆ ಕೋರ್ಟ್‌ (Court) ತನಿಖೆಗೆ ಆದೇಶಿಸಿದಾಗ ಸಿಬಿಐ ತನಿಖೆಗೆ ವಹಿಸಿ ಸುಮ್ಮನಾದರು. ಸಿಬಿಐ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದರು. ಬಳಿಕವೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಇಲ್ಲ. ಹೀಗಾಗಿ ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಸಬೇಕು’ ಎಂದರು.

ರಫೇಲ್‌ ಹಗರಣದಲ್ಲಿ ಮೋದಿ ಸರ್ಕಾರ:

ಮಧ್ಯವರ್ತಿ ಸುಶೇನ್‌ ಗುಪ್ತಾ ಅವರು ಯುಪಿಎ (UPA) ಅವಧಿಯಲ್ಲಿಯೂ ಇದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸುಶೇನ್‌ ಗುಪ್ತಾ ಅವರನ್ನು ಡಸ್ಸಾಲ್ಟ್‌ ಸಂಸ್ಥೆ (Dassault Aviation) 2000ನೇ ಇಸವಿಯಲ್ಲಿ ನೇಮಕ ಮಾಡಿಕೊಂಡಿತ್ತು. ಆಗ ಯಾರ ಸರ್ಕಾರವಿತ್ತು? ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವಿತ್ತು. 2000ದಿಂದ 2005ರವರೆಗೆ ಸುಶೇನ್‌ ಗುಪ್ತಾ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂದಾಯ ಮಾಡಲಾಗಿತ್ತು. ಆದರೆ ನಾವು ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪ ಮಾಡುವುದಿಲ್ಲ. ಏಕೆಂದರೆ, ಆ ಅವಧಿಯಲ್ಲಿ ಸರ್ಕಾರ ಡಸ್ಸಾಲ್ಟ್‌ ಜತೆ ಯಾವುದೇ ಒಪ್ಪಂದವನ್ನೇ ಮಾಡಿಕೊಂಡಿಲ್ಲ. ಜತೆಗೆ ವಾಜಪೇಯಿ ಅವರ ಸರ್ಕಾರ ಹಾಗೂ ಸುಶೇನ್‌ ಗುಪ್ತಾ ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರವೂ ನಡೆದಿಲ್ಲ’ ಎಂದರು.

Rafale Deal: ಸತ್ಯವು ನಿಮ್ಮೊಂದಿಗಿರುವಾಗ ಭಯಪಡಬೇಡಿ‌ : ರಾಹುಲ್ ಗಾಂಧಿ!

‘ಅದೇ ರೀತಿ ಯುಪಿಎ ಅವಧಿಯಲ್ಲೂ ಯಾವುದೇ ಒಪ್ಪಂದಗಳು ನಡೆದಿಲ್ಲ, ಆದರೆ, ಮೋದಿ ಅವರ ಸರ್ಕಾರದಲ್ಲಿ ಒಪ್ಪಂದ ಆಗಿದ್ದು, ಪ್ರತಿ ಹಂತದಲ್ಲೂ ಮೋದಿ ಅವರು ಹಸ್ತಕ್ಷೇಪ ಮಾಡಿ ಡಸ್ಸಾಲ್ಟ್‌ಗೆ ನೆರವು ನೀಡಿದ್ದಾರೆ. ಸುಶೇನ್‌ ಗುಪ್ತಾ (Sushen Gupta) ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು 2015 ರ ದಿನಾಂಕ ಹೊಂದಿವೆ. ಆಗ ಮೋದಿ ಸರ್ಕಾರ ಅಧಿಕಾರದಲ್ಲಿತ್ತು. ಸರ್ಕಾರದ ಗೌಪ್ಯ ದಾಖಲೆಗಳು ಮಧ್ಯವರ್ತಿಯ ಮನೆಯಲ್ಲಿ ಸಿಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

ತನಿಖೆಗೆ ಪಲಾಯನ ಏಕೆ?:

‘ಸರ್ಕಾರಕ್ಕೂ ಮಧ್ಯವರ್ತಿಗೂ ಸಂಬಂಧ ಇರಲಿಲ್ಲ ಎಂದಾದರೆ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರ ಇಲಾಖೆಯ ಗೌಪ್ಯ ದಾಖಲೆಗಳು ಮಧ್ಯವರ್ತಿಯ ಮನೆಯಲ್ಲಿ ಸಿಗುತ್ತಿರಲಿಲ್ಲ. ಈ ಪ್ರಕರಣದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದಾದರೆ, ನಾವು ತನಿಖೆಗೆ ಆಗ್ರಹಿಸುತ್ತಿರುವಾಗ ಸರ್ಕಾರ ಪಲಾಯನ ಮಾಡುತ್ತಿರುವುದೇಕೆ? ನಾವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಓಡಿ ಹೋಗುತ್ತಿರುವುದೇಕೆ? ಹಾಗಾದರೆ ಇಲ್ಲಿ ತಪ್ಪಿತಸ್ಥರು ಯಾರು?’ ಎಂದರು.

Rafale Deal; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕಾಂಗ್ರೆಸ್‌, ತಿರುಗುಬಾಣವಾದ ರಫೇಲ್!

ಒಂದು ಸೈಕಲ್‌ ಉತ್ಪಾದಿಸದ ಕಂಪನಿಗೆ ರಫೇಲ್‌ ಯುದ್ದ ವಿಮಾನದ ಉತ್ಪಾದನೆಗೆ ಅವಕಾಶ ಬಿಜೆಪಿ ಸರ್ಕಾರ ನೀಡಿದೆ. ತಮಗೆ ಚುನಾವಣೆಗೆ ನಿಧಿ ನೀಡಿದವರಿಗೆ ಈ ರೀತಿ ಉಪಕರಿಸುವ ಮೂಲಕ ದೇಶದ ಭದ್ರತೆಯನ್ನೇ ಆತಂಕಕ್ಕೆ ಒಡ್ಡುವ ನೀತಿ ಕೇಂದ್ರ ಸರ್ಕಾರದ್ದು ಎಂದು  ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹೇಳಿದರು.

click me!