
ಮುಂಬೈ: ಖ್ಯಾತ ಸಂಗೀತ ಸಂಯೋಜಕ ಅದ್ನಾನ್ ಸಮಿ ಜೊತೆ ಆರ್ಎಸ್ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗ್ವತ್ ಊಟ ಮಾಡಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ಅದ್ನಾನ್ ಅವರ ತಂದೆ ಪಾಕಿಸ್ತಾನ ವಾಯುಪಡೆಯಲ್ಲಿ ಪೈಲಟ್ ಆಗಿದ್ದರು. 1965ರ ಯುದ್ಧದಲ್ಲಿ ಭಾರತದ ಮೇಲೆ ದಾಳಿ ಮಾಡಿದ್ದ ಯೋಧರ ತಂಡದಲ್ಲಿದ್ದರು. ಅಂಥವರ ಜೊತೆ ಊಟ ಮಾಡುತ್ತಿರುವುದು ದೇಶವಿರೋಧಿ ಕೆಲಸ’ ಎಂದು ಕಿಡಿ ಕಾರಿದೆ.
ಆರ್ಎಸ್ಎಸ್ ಶತಾಬ್ದಿ ವರ್ಷದ ನಿಮಿತ್ತ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ನಾನ್ ಸಮಿ ಕೂಡ ಭಾಗವಹಿಸಿದ್ದರು. ಈ ವೇಳೆ ಅವರ ಜೊತೆ ಭಾಗ್ವತ್ ಊಟ ಮಾಡಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಅದ್ನಾನ್ರ ತಂದೆ ಅರ್ಷದ್ ಸಮಿ ಖಾನ್, 1965ರ ಯುದ್ಧದ ಸಮಯದಲ್ಲಿ ನಮ್ಮ ಪಠಾಣ್ಕೋಟ್ ವಾಯುನೆಲೆಯನ್ನು ನಾಶಪಡಿಸಿದ ಪಾಕ್ ವಾಯುಪಡೆಯಲ್ಲಿ ಪೈಲಟ್ ಆಗಿದ್ದರು. ಇಂದು ಅವರೊಂದಿಗೆ ಭಾಗ್ವತ್ ಊಟವನ್ನು ಆನಂದಿಸುತ್ತಿದ್ದಾರೆ. ಆರ್ಎಸ್ಎಸ್ = ದೇಶವಿರೋಧಿ’ ಎಂದಿದೆ.
ಪುಣೆ: ಕೆಮ್ಮು ಮತ್ತು ಉಸಿರಾಟ ಸಮಸ್ಯೆ ಹಿನ್ನೆಲೆ ಎನ್ಸಿಪಿ ನಾಯಕ ಶರದ್ ಪವಾರ್ ಸೋಮವಾರ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬಾರಾಮತಿಯ ನಿವಾಸದಿಂದ ಪವಾರ್ ಅವರನ್ನು ರೂಬಿ ಹಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದ್ದು, ಎದೆಯ ಸೋಂಕಿನ ಸಮಸ್ಯೆ ಕಂಡು ಬಂದಿದೆ. ಈ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಿನದ ಮಟ್ಟಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪವಾರ್ ಬಾಯಿ ಕ್ಯಾನ್ಸರ್ಗೆ ಈ ಹಿಂದೆ ತುತ್ತಾಗಿ ಗುಣಮುಖರಾಗಿದ್ದರು.
ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಜಿಲ್ಲಾ ಪರಿಷತ್ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದೆ. ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ಸಾವನ್ನಪ್ಪಿದ ಹಿನ್ನೆಲೆ ಚುನಾವಣೆಯನ್ನು ಫೆ.7ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಅದರ ಫಲಿತಾಂಶ ಸೋಮವಾರ ಘೋಷಣೆಯಾಗಿದೆ.ಒಟ್ಟಾರೆ 731 ಕ್ಷೇತ್ರಗಳ ಪೈಕಿ, ಮಹಾಯುತಿಯ ಭಾಗವಾಗಿರುವ ಬಿಜೆಪಿ 228, ಶಿವಸೇನೆ (ಶಿಂಧೆ ಬಣ) 160, ಎನ್ಸಿಪಿ (ಅಜಿತ್ ಬಣ) 165 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ವಿಪಕ್ಷ ಕೂಟದಲ್ಲಿರುವ ಕಾಂಗ್ರೆಸ್ 59, ಶಿವಸೇನೆ (ಉದ್ಧವ್) 46, ಎನ್ಸಿಪಿ (ಶರದ್) 21 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಉಳಿದ 37 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಗೋಡ್ಸೆಗೂ ಭಾರತ ರತ್ನ ನೀಡುತ್ತೆ: ಒವೈಸಿ ಕಿಡಿ
ಹೈದರಾಬಾದ್: ‘ಬಿಜೆಪಿಯು ಮುಂದೊಂದು ದಿನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರಿಗೂ ನೀಡಲಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹಿಂದುತ್ವವಾದಿ ವಿ.ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆ ಬೆನ್ನಲ್ಲೇ ಒವೈಸಿ ಈ ರೀತಿ ಹೇಳಿದ್ದಾರೆ.
ತೆಲಂಗಾಣದ ಮೆಹಬೂಬನಗರದಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅವರು, ‘ಬ್ರಿಟಿಷರಿಗೆ 6 ಕ್ಷಮದಾನ ಅರ್ಜಿಗಳನ್ನು ಬರೆದವರಿಗೆ ಆರ್ಎಸ್ಎಸ್ ಭಾರತ ರತ್ನ ನೀಡಬೇಕೆಂದು ಹೇಳುತ್ತದೆ. ಗಾಂಧಿಯವರ ಹತ್ಯೆಯಲ್ಲಿ ಸಾವರ್ಕರ್ ಪಿತೂರಿಗಾರ ಎಂದು ನ್ಯಾ। ಕಪೂರ್ ಅವರ ವರದಿ ಹೇಳಿದೆ. ಗಾಂಧಿ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗೆ ನೀವು ಭಾರತ ರತ್ನ ನೀಡಬೇಕೆಂದು ಕೇಳುತ್ತಿದ್ದೀರಿ. ಅಭಿನಂದನೆಗಳು. ಬಿಜೆಪಿ ಮುಂದೊಂದು ದಿನ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರಿಗೂ ಭಾರತ ರತ್ನ ನೀಡಬೇಕೆಂದು ಹೇಳುವ ಸಮಯ ಬರುತ್ತದೆ’ ಎಂದು ಕಿಡಿಕಾರಿದ್ದಾರೆ.
ಬೆಂಗ್ಳೂರಲ್ಲಿ ಬೆಳ್ಳಿ ಬೆಲೆ ಮತ್ತೆ ₹3 ಲಕ್ಷಕ್ಕೆ, ಚಿನ್ನ ದರ ₹1.44 ಲಕ್ಷಕ್ಕೇರಿಕೆ
ನವದೆಹಲಿ: ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಸೋಮವಾರ ಮತ್ತೆ ಏರಿಕೆ ಕಂಡಿವೆ. ಬೆಂಗಳೂರಿನಲ್ಲಿ 15 ಸಾವಿರ ರು. ಏರಿಕೆಯೊಂದಿಗೆ 1 ಕೆ.ಜಿ. ಬೆಳ್ಳಿ 3 ಲಕ್ಷ ರು. ಆಗಿದೆ. ಅತ್ತ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರು. ಹೆಚ್ಚಳವಾಗಿ 1,44,750 ರು.ಗೆ ತಲುಪಿದೆ. 24 ಗ್ರಾಂನ 10 ಗ್ರಾಂ ಚಿನ್ನದ ದರ 1,310 ರು. ಏರಿಕೆಯಾಗಿ 1,57,910 ರು. ಆಗಿದೆ.
ತುಳು ಇನ್ಫ್ಲುಯೆನ್ಸರ್ ಚಿನ್ನು ಪಪ್ಪು ನೇ*ಗೆ ಶರಣು
ಕಾಸರಗೋಡು: ಚಿನ್ನುಪಪ್ಪು ಎಂದೇ ಗುರುತಿಸಿಕೊಂಡಿದ್ದ ಸಾಮಾಜಿಕ ಮಾಧ್ಯಮ ಪ್ರಭಾವಿ ರೇಶ್ಮಾ(25) ಅವರು ಕಾಸರಗೋಡಿನಲ್ಲಿರುವ ತಮ್ಮ ಮನೆಯಲ್ಲಿ ಆತ್ಮ8ತ್ಯೆ ಮಾಡಿಕೊಂಡಿದ್ದಾರೆ. ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ತಿಳಿದಿಲ್ಲ.ಹೊದಿಕೆಯಿಂದ ಫ್ಯಾನ್ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ರೇಶ್ಮಾರನ್ನು ಸೋಮವಾರ ಮಧ್ಯಾಹ್ನ ಕಂಡ ಅವರ ಸಹೋದರ ರತೀಶ್, ನೆರೆಹೊರೆಯವರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ರೇಶ್ಮಾ ಮೃತಪಟ್ಟಿದ್ದರು. ಇವರಿಗೆ 4 ವರ್ಷದ ಮಗು ಇದ್ದು, ಕೆಲ ತಿಂಗಳ ಹಿಂದೆಯಷ್ಟೇ ವಿಚ್ಛೇದಿತರಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರೇಶ್ಮಾ 2 ಲಕ್ಷ ಫಾಲೋವರ್ಸ್ ಹೊಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ