ರೈತರ ಪ್ರತಿಭಟನೆ ನಡುವೆ ಸದ್ದು ಮಾಡಿದ ಶಿವಸೇನಾ ನಾಯಕನ ಸರ್ಜಿಕಲ್ ಸ್ಟ್ರೈಕ್!

By Suvarna NewsFirst Published Dec 10, 2020, 6:46 PM IST
Highlights

ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಭಾರಿ ಸದ್ದು ಮಾಡಿತ್ತು. ಇಷ್ಟೇ ಅಲ್ಲ ಸರ್ಜಿಕಲ್ ಸ್ಟ್ರೈಕ್ ಸತ್ಯವೇ ಅನ್ನೋ ಅನುಮಾನವೂ ಹುಟ್ಟಿಕೊಂಡಿತ್ತು. ಇದೀಗ ಮತ್ತೆ ಸರ್ಜಿಕಲ್ ಸ್ಟ್ರೈಕ್ ಸದ್ದು ಮಾಡುತ್ತಿದೆ. ಪಾಕಿಸ್ತಾನ ಹಾಗೂ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್‌ ಆಗ್ರಹ ಕೇಳಿಬಂದಿದ್ಯಾಕೆ? ಇಲ್ಲಿದೆ ವಿವರ.

ಮುಂಬೈ(ಡಿ.10): ಪಾಕಿಸ್ತಾನ ಮತ್ತು ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವಂತೆ ಶಿವಸೇನಾ ನಾಯಕ ಸಂಜಯ್ ರಾವತ್ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ. ಅಷ್ಟಕ್ಕೂ ಸರ್ಜಿಕಲ್ ಸ್ಟ್ರೈಕ್ ದಾಳಿ ಪ್ರಸ್ತಾಪಕ್ಕೆ ಕಾರಣ ಕೇಂದ್ರ ಸಚಿವ ರಾವ್‌ಸಾಹೇಬ್ ದಾನ್ವೆ. ಹೌದು, ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ರಾವ್‌ಸಾಹೇಬ್ ದಾನ್ವೆ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

'ರೈತರ ಪ್ರತಿಭಟನೆ ಹಿಂದೆ ಚೀನಾ-ಪಾಕ್ ಕೈವಾಡ' ಕೇಂದ್ರ ಸಚಿವರ ಹೇಳಿಕೆಗೆ ಕೆಂಡ

ಕೇಂದ್ರದ 3 ಕೃಷಿ ಮಸೂದೆಗಳನ್ನು ಹಿಂಪಡೆಯುಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂದೆ ಪಾಕಿಸ್ತಾನ ಹಾಗೂ ಚೀನಾ ಕೈವಾಡವಿದೆ ಎಂದು ರಾವ್‌ಸಾಹೇಬ್ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.  ಕೇಂದ್ರ ಸಚಿವರಿಗೆ ಪಾಕಿಸ್ತಾನ ಹಾಗೂ ಚೀನಾ ನೆರವಿನ ಕುರಿತ ಮಾಹಿತಿ ಇದ್ದರೆ, ತಕ್ಷಣವೇ ಪಾಕ್-ಚೀನಾ ಮೇಲೆ ಸರ್ಜಿಕಲ್ ದಾಳಿ ನಡೆಸಿ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂದೆ ಪಾಕಿಸ್ತಾನ ಹಾಗೂ ಚೀನಾ ಕೈವಾಡವಿದೆ ಎಂದರೆ ಗಂಭೀರ ವಿಚಾರ. ಇದರಲ್ಲಿ ದೇಶದ ಭದ್ರತೆ ಕೂಡ ಅಡಗಿದೆ. ಇಷ್ಟೇಲ್ಲಾ ಮಾಹಿತಿ ಕೇಂದ್ರಕ್ಕಿದ್ದರೆ, ರಕ್ಷಣಾ ಸಚಿವರು, ಗೃಹ ಮಂತ್ರಿ ಹಾಗೂ ಪ್ರಧಾನ ಮಂತ್ರಿ ಸರ್ಜಿಕಲ್ ದಾಳಿ ಸಂಘಟಿಸುವುದು ಅತ್ಯಗತ್ಯವಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ರಾವ್‌ಸಾಹೇಬ್ ದಾನ್ವೆ ಹೇಳಿಕೆಗೆ ದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರೈತರನ್ನು ದೇಶವಿರೋಧಿಗಳೆಂದು ಬಿಂಬಿಸಬೇಡಿ. ಅವರ ಹಕ್ಕಿಹಾಗಿ ಹೋರಾಟ ಮಾಡುತ್ತಿದ್ದಾರೆ. ದೇಶ ವಿರೋಧಿಗಳ ರೀತಿ ನೋಡಬೇಡಿ ಎಂದು ಆಕ್ರೋಶ ವ್ಯಕ್ತವಾಗಿದೆ.

click me!