
ಪುಣೆ: ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಕ್ಕಳನ್ನು ಕ್ಷಮಿಸುವಂತೆ ಪ್ರಧಾನಿ ಮೋದಿ ಮಾಡಿದ ವಿಡಿಯೋಗೆ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಪ್ರತಿಕ್ರಿಯಿಸಿದ್ದು, ‘ನೀವು ರೀಲ್ಸ್ ಮಾತ್ರ ಮಾಡುತ್ತೀರೋ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತೀರೋ?’ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸೆಲ್ಫಿ ವಿಡಿಯೋಗಳಲ್ಲಿ ಮೋದಿ, ವಿದ್ಯಾರ್ಥಿಗಳನ್ನು ‘ಫ್ರೆಂಡ್ಸ್’ ಎಂದು ಕರೆದಿದ್ದರು. ಇದನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವ ದೀಪ್ಕೆ, ‘ಫ್ರೆಂಡ್, ನೀವು ಮಕ್ಕಳನ್ನು ಕೇವಲ ರೀಲ್ಗಳ ಮೂಲಕ ಕ್ಷಮಿಸುತ್ತೀರಾ ಅಥವಾ ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೀರಾ?’ ಎಂದು ಟ್ವೀಟ್ ಮಾಡಿದ್ದಾರೆ.
‘ಮೋದಿ ತಮ್ಮನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆ ಎಂದು ಹೇಳುವ ಮೂಲಕ ಬಲಿಪಶುವಿನ ನಾಟಕ ಮಾಡುತ್ತಿದ್ದಾರೆ. ಇದರ ಬದಲು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
ನವದೆಹಲಿ: ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈರಲ್ ಆಗಿದ್ದ ಹುಡುಗಿ ಶನಿವಾರ ವಿಡಿಯೋ ಮೂಲಕ ದೇಶದ ಕ್ಷಮೆಯಾಚಿಸಿದ್ದಾಳೆ. ಜತೆಗೆ, ಕೆಲವರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತಾಡಿದ್ದೆ ಎಂದು ತಿಳಿಸಿದ್ದಾಳೆ.
ಶುಕ್ರವಾರ ರಾತ್ರಿ ಆಕೆಯ ಬೈಗುಳಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದ ಪ್ರಧಾನಿ, ‘ನನ್ನ ಸ್ವರ್ಗೀಯ ತಾಯಿಯನ್ನು ನಿಂದಿಸಿದ್ದಕ್ಕೆ ನೋವಾಗಿದೆ. ಆದರೆ ಮಕ್ಕಳನ್ನು ಶಿಕ್ಷಿಸುವ ಬದಲು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ನೊಂದು ನುಡಿದಿದ್ದರು. ಆ ಬೆನ್ನಲ್ಲೇ ಹುಡುಗಿ ಕ್ಷಮೆ ಯಾಚಿಸಿದ್ದಾಳೆ.
‘ನಾನು ಜುಲೈನಲ್ಲಿ ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್ಗೆ ಹೋಗಿದ್ದೆ. ಅಲ್ಲಿ ಪ್ರಧಾನಿ ವಿರುದ್ಧ ಅವಾಚ್ಯ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದ ಜನರ ಗುಂಪೊಂದು ಎದುರಾಯಿತು. ಅವರು ನನ್ನ ಮೇಲೆ ಪ್ರಭಾವ ಬೀರಿ, ನಾನೂ ಅದೇ ರೀತಿ ಮಾತಾಡುವಂತೆ ಪ್ರೇರೇಪಿಸಿದರು. ನಾನು ಹಾಗೆಯೇ ಮಾಡಿದೆ. ನಾನು ಇಡೀ ದೇಶದ ಜನರಲ್ಲಿ ನನ್ನನ್ನು ಕ್ಷಮಿಸುವಂತೆ ಕೋರುತ್ತೇನೆ. ನನಗೆ ಕೇವಲ 15 ವರ್ಷ ವಯಸ್ಸು. ಇದೇ ನನ್ನ ಮೊದಲ ಮತ್ತು ಕೊನೆಯ ತಪ್ಪು. ಇಂತಹ ಕೃತ್ಯವನ್ನು ಇನ್ನೆಂದೂ ಮಾಡುವುದಿಲ್ಲ’ ವಿಡಿಯೋದಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: 'ಪಿಚ್ಚರ್ ಅಭೀ ಭೀ ಬಾಕಿ ಹೈ' ಎಂದಿದ್ದ CJP ದೀಪ್ಕೆ ಪಿಚ್ಚರ್ ಬಿಟ್ಟೋಯ್ತು: ಕೇಳಿದ ಈ ಪ್ರಶ್ನೆಗೆ ಉತ್ತರವಿಲ್ಲದೇ ಸುಸ್ತಾದ್ರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ